ನವದೆಹಲಿ, ಜೂನ್ 12– ಕಾರ್ಗಿಲ್ ವಲಯದಲ್ಲಿ ಉಲ್ಬಣಗೊಂಡಿರುವ ಪ್ರಕ್ಷುಬ್ಧ ಸ್ಥಿತಿಯ ನಿವಾರಣೆಗಾಗಿ ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರು ತಮ್ಮ ನಿಲುವಿಗೆ ಕಟ್ಟುಬಿದ್ದಿದ್ದರಿಂದ ಅವರಿಬ್ಬರ ನಡುವೆ ಇಂದು ನಡೆದ ಚರ್ಚೆಯು ಯಾವುದೇ ಪ್ರತಿಫಲ ಇಲ್ಲದೆ ಸ್ಥಗಿತಗೊಂಡಿತು.
ಈ ಮಧ್ಯೆ ಭಾರತವು ಅತಿಕ್ರಮಣ
ಕಾರರನ್ನು ಸಂಪೂರ್ಣವಾಗಿ ಭಾರತದ ಗಡಿಯಾಚೆ ಅಟ್ಟುವವರೆವಿಗೆ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸುವ ದೃಢ ನಿರ್ಧಾರಕ್ಕೆ ಬದ್ಧವಾಗಿದೆ.
ಸೇನಾ ಕಾರ್ಯಚರಣೆ ಸ್ಥಗಿತ ಮತ್ತು ಗಡಿ ನಿಯಂತ್ರಣ ರೇಖೆಯನ್ನು ಮತ್ತೆ ಗುರುತಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂಬುದು ಸೇರಿದಂತೆ ಪಾಕಿಸ್ತಾನದ ಕೆಲವು ಬೇಡಿಕೆಗಳನ್ನು ಭಾರತ ತಳ್ಳಿ ಹಾಕಿದೆ.
ನವದೆಹಲಿ, ಜೂನ್ 12– ಬಟಾಲಿಕ್ ವಲಯದಲ್ಲಿನ ಪ್ರಮುಖ ಸ್ಥಳಗಳಲ್ಲಿ ಅಡಗಿಕೊಂಡಿದ್ದ ಪಾಕಿಸ್ತಾನಿ ಅತಿಕ್ರಮಣಕಾರರನ್ನು ಯಶಸ್ವಿಯಾಗಿ ಹೊರಗಟ್ಟಲು ನಡೆದ ಗುಂಡಿನ ಚಕಮಕಿಯಲ್ಲಿ 13 ಮಂದಿ ಭಾರತೀಯ ಯೋಧರು ಮತ್ತು 25 ಮಂದಿ ಪಾಕಿಸ್ತಾನಿ ಕಡೆಯವರು ಸತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ ಮತ್ತು ಪ್ಯಾರಾಚೂಟ್ ಕಮಾಂಡೊಗಳು ಶತ್ರುಗಳ ನೆಲೆಯ ಮೇಲೆ ನಡೆಸಿದ ದಾಳಿಯಲ್ಲಿ ಕ್ಯಾಪ್ಟನ್ ಅಮೋಲ್ ಕಲಿಯಾ ಮತ್ತು ಇತರ ಹನ್ನೆರಡು ಮಂದಿ ಯೋಧರು ಪ್ರಾಣ ಕಳೆದುಕೊಂಡರು.
ಭೂ ಸೇನಾ ಪಡೆಯ ವಕ್ತಾರ ಕರ್ನಲ್ ವಿಕ್ರಂ ಸಿಂಗ್ ಇಂದು ಪತ್ರಿಕಾಗೋಷ್ಠಿಯಲ್ಲಿ, ನೈರುತ್ಯ ಭಾಗದಲ್ಲಿ ಸುಮಾರು ಏಳು ಗಂಟೆ ಕಾಲ ಹೋರಾಟ ನಡೆದಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.