ADVERTISEMENT

25 ವರ್ಷಗಳ ಹಿಂದೆ | ಲಾಡೆನ್‌ ಸವಾಲಿಗೆ ತಕ್ಕ ಉತ್ತರ: ಅಡ್ವಾಣಿ

ಪ್ರಜಾವಾಣಿ ವಿಶೇಷ
Published 19 ಸೆಪ್ಟೆಂಬರ್ 2024, 22:41 IST
Last Updated 19 ಸೆಪ್ಟೆಂಬರ್ 2024, 22:41 IST
25 ವರ್ಷಗಳ ಹಿಂದೆ..
25 ವರ್ಷಗಳ ಹಿಂದೆ..   

ಬಿಹಾರ: ಅಧಿಕಾರಿಗಳ ವರ್ಗಾವಣೆಗೆ ಶಿಫಾರಸು

ಪಟ್ನಾ, ಸೆ. 19 (ಪಿಟಿಐ)– ಬಿಹಾರದ ರಾಜ್ಯ‍ಪಾಲ ಬಿ.ಎಂ. ಲಾಲ್‌ ಅವರು ‘ಸಂಶಯಾಸ್ಪದ’ ಪೊಲೀಸ್‌ ಮತ್ತು ನಾಗರಿಕ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ತೆಗೆದುಹಾಕುವಂತೆ ಇಂದು ಸಲಹೆ ಮಾಡಿದ್ದಾರೆ.

ರಾಜಭವನದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ರಾಜ್ಯಪಾಲರು ತಾವು ಈ ಕುರಿತು ಕೇಂದ್ರ ಗೃಹಸಚಿವಾಲಯ ಮತ್ತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಬಿಹಾರದಲ್ಲಿ ನಿನ್ನೆ ನಡೆದ ಮತದಾನದ ಸಮಯದಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತಲ್ಲದೆ, ನಕ್ಸಲೀಯರು ಹಲವು ಕಡೆ ಸ್ಫೋಟಿಸಿದ ನೆಲಬಾಂಬ್‌ಗೆ ಅನೇಕ ಜನರು ಬಲಿಯಾಗಿದ್ದರು.

ADVERTISEMENT

ರಾಜ್ಯದಲ್ಲಿ ಮುಕ್ತ ಮತ್ತು ಶಾಂತಿಯುತ ಚುನಾವಣೆ ನಡೆಸುವ ಕುರಿತು ತಮ್ಮ ಕಳಕಳಿಯನ್ನು ರಾಜ್ಯ ಮುಖ್ಯಕಾರ್ಯದರ್ಶಿ ಮತ್ತು ಮುಖ್ಯ ಚುನಾವಣಾ ಅಧಿಕಾರಿಗೆ ಕಾಲ ಕಾಲಕ್ಕೆ ತಿಳಿಸಿರುವುದಾಗಿ ರಾಜ್ಯಪಾಲರು ವಿವರಿಸಿದರು.

ಲಾಡೆನ್‌ ಸವಾಲಿಗೆ ತಕ್ಕ ಉತ್ತರ: ಅಡ್ವಾಣಿ

ಭುವನೇಶ್ವರ, ಸೆ. 19 (ಪಿಟಿಐ)– ಭಾರತದ ವಿರುದ್ಧ ಒಸಾಮ ಬಿನ್‌ ಲಾಡೆನ್‌ ಸಾರಿರುವ ಧರ್ಮಯುದ್ಧ ಮತ್ತು ಧಾರ್ಮಿಕ ಭಯೋತ್ಪಾದನೆಯ ಸವಾಲನ್ನು ಯಶಸ್ವಿಯಾಗಿ ಎದುರಿಸಲಾಗುವುದು ಎಂದು ಕೇಂದ್ರ
ಗೃಹ ಸಚಿವ ಎಲ್‌.ಕೆ. ಅಡ್ವಾಣಿ ಅವರು ಹೇಳಿದರು.

ಕಾರ್ಗಿಲ್‌ನಲ್ಲಿ ಪಾಕಿಸ್ತಾನದ ಅತಿಕ್ರಮಣಕಾರರನ್ನು ಮಟ್ಟಹಾಕಿದ ರೀತಿಯಲ್ಲಿಯೇ ಇವುಗಳನ್ನು ಸಹ ಮಟ್ಟ ಹಾಕಲಾಗುವುದು ಎಂದು ಅವರು ಹೇಳಿದರು.

ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಅಸ್ಥಿರಗೊಳಿಸುವುದು ಹಾಗೂ ದೇಶದಲ್ಲಿರುವ ಕೋಮು ಸೌಹಾರ್ದ ಸ್ಥಿತಿಯನ್ನು ಹಾಳುಗೆಡಹುವುದು ಲಾಡೆನ್‌ ಎಚ್ಚರಿಕೆಯ ಉದ್ದೇಶ ಎಂದು ಅವರು ಇಂದು ಇಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಾ ತಿಳಿಸಿದರು.

ಮಂಡ್ಯದ ಯೋಧ ಕಾಶ್ಮೀರದಲ್ಲಿ ಸಾವು

ಮಂಡ್ಯ, ಸೆ. 19– ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಿನ್ನೆ ನಡೆದ ಮೂರನೇ ಹಂತದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಸಂದರ್ಭ ನಡೆದ ಗಲಭೆಯಲ್ಲಿ ಜಿಲ್ಲೆಯ ಸುಧೀರ್‌ (23) ಎಂಬ ಯೋಧ ಮೃತಪಟ್ಟಿದ್ದಾರೆ.

ಐದು ವರ್ಷಗಳ ಹಿಂದೆ ಸೇನೆಗೆ ಸೇರಿದ ಸುಧೀರ್‌ರವರ ಮೃತದೇಹವನ್ನು ನಾಳೆ ಅವರ ತಂದೆಯ ಮನೆಗೆ ಕಳುಹಿಸುವುದಾಗಿ ಸೇನಾ ಮೂಲಗಳು ಖಚಿತಪಡಿಸಿವೆ.

ಸುಧೀರ್‌ ಅವರ ತಂದೆ ಬಿ.ಟಿ. ಕೃಷ್ಣೇಗೌಡರು ಮಂಡ್ಯ ಜಿಲ್ಲೆಯ ಬಸರಾಳು ಗ್ರಾಮದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.