ನವದೆಹಲಿ, ಡಿ. 5– ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಜಸ್ವಂತ್ ಸಿಂಗ್, ಪ್ರಮೋದ್ ಮಹಾಜನ್ ಮತ್ತು ಜಗಮೋಹನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ, ಎಂಟೂವರೆ ತಿಂಗಳ ತಮ್ಮ ಸಂಪುಟವನ್ನು ಪ್ರಥಮ ಬಾರಿಗೆ ವಿಸ್ತರಿಸಿದರು.
ರಾಷ್ಟ್ರಪತಿ ಭವನದ ಅಶೋಕ ಹಾಲ್ನಲ್ಲಿ ಸಂಜೆ ಆರು ಗಂಟೆಗೆ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಈ ಮೂವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ರಾಷ್ಟ್ರಪತಿ ಕೆ.ಆರ್.ನಾರಾಯಣನ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಬೆಂಗಳೂರು, ಡಿ. 5– ರಾಜ್ಯ ಜನತಾದಳದ ಭಿನ್ನಮತೀಯ ನಾಯಕರು ಹಾಗೂ ಜನತಾ ದಳ ಬಿಟ್ಟು ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಸೇರಿ ಅತಂತ್ರ ಸ್ಥಿತಿಯಲ್ಲಿರುವ ಧುರೀಣರು ಕಾಂಗ್ರೆಸ್ನ ‘ಅಭಯ ಹಸ್ತ’ಕ್ಕಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮನೆ ಬಾಗಿಲು ತಟ್ಟುತ್ತಿರುವುದು ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡಿದೆ.
ಉತ್ತರ ಭಾರತದ ನಾಲ್ಕು ರಾಜ್ಯಗಳ ಚುನಾವಣೆ ಪೈಕಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದ್ದು ಹಾಗೂ ಅಧಿಕಾರ ಕಳೆದುಕೊಂಡ ಬಿಜೆಪಿಗೆ ಮುಖಭಂಗ ಆಗಿರುವುದು ಒಂದೆಡೆಯಾದರೆ, ಜನತಾದಳ ಹೆಚ್ಚು ಕಡಿಮೆ ಉತ್ತರ ಭಾರತದಲ್ಲಿ ಅಸ್ತಿತ್ವ ಕಳೆದುಕೊಂಡಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.