ಕಾರವಾರ, ಜೂನ್ 13– ಉತ್ತರ ಕನ್ನಡದ ಕರಾವಳಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಕ್ಕಿಹರಿದ ಉಪನದಿಗಳು, ಹಳ್ಳಗಳ ಪ್ರವಾಹ ಇಳಿಮುಖವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಗಂಜಿ ಕೇಂದ್ರಗಳಿಂದ ನೆರೆ ಸಂತ್ರಸ್ತ ನಾಗರಿಕರು ತಮ್ಮ ಗುಡಿಸಲುಗಳಿಗೆ ಮರಳುತ್ತಿದ್ದು, ಇಂದು ಹೊನ್ನಾವರದ ನೆರೆಪೀಡಿತ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಎ. ಜೈವಂತ ಭೇಟಿ ನೀಡಿದ್ದರು.
ಪ್ರವಾಹಕ್ಕೆ ಸಿಕ್ಕಿ ಮರಣ ಹೊಂದಿದವರ ಕುಟುಂಬದವರಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲು ಜಿಲ್ಲಾ ಆಡಳಿತವು ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ತಿಳಿದುಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಈ ಸಂಬಂಧ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆಂದು ವರದಿಯಾಗಿದೆ.
ಕಾರ್ಗಿಲ್, ಜೂನ್ 13 (ಪಿಟಿಐ)– ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಿ ಪಡೆಗಳು ಇಂದು ನಡೆಸಿದ ಷೆಲ್ ದಾಳಿಯಿಂದ ಸ್ವಲ್ಪದರಲ್ಲಿ ಪಾರಾದರು. ಇದರಿಂದಾಗಿ ಅವರ ಡ್ರಾಸ್ ಭೇಟಿ ರದ್ದಾಯಿತು.
ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನ ಬೆಂಬಲಿತ ಅತಿಕ್ರಮಣಕಾರರ ವಿರುದ್ಧ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ವೀಕ್ಷಿಸಲು ಪ್ರಧಾನಿ ಆಗಮಿಸಿದಾಗ ಈ ದಾಳಿ ನಡೆಯಿತು. ವಾಜಪೇಯಿ ಅವರು ಯೋಧರನ್ನು ಉದ್ದೇಶಿಸಿ ಭಾಷಣ ಮಾಡಬೇಕಿದ್ದ ಬಾರ್ದ್ ವಿಭಾಗಾಧಿಕಾರಿ ಕಚೇರಿ ಈ ಷೆಲ್ ದಾಳಿಯಲ್ಲಿ ನಾಶವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.