ಶ್ರೀನಗರ, ಜೂನ್ 18 (ಯುಎನ್ಐ, ಪಿಟಿಐ)– ಬಟಾಲಿಕ್ ಉಪಪ್ರಾಂತ್ಯದಲ್ಲಿ ಪಾಕಿಸ್ತಾನದ ಬೆಂಬಲಿತ ಅತಿಕ್ರಮಣಕಾರರ ಪ್ರಮುಖ ಶಿಬಿರದ ಮೇಲೆ ಭಾರತೀಯ ವಾಯುಪಡೆಯು ಇಂದು ಯಶಸ್ವಿಯಾಗಿ ದಾಳಿ ನಡೆಸಿತು. ಟೈಗರ್ ಹಿಲ್ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆ ಮತ್ತು ಅತಿಕ್ರಮಣಕಾರರ ನಡುವೆ ಮುಖಾಮುಖಿ ಹೋರಾಟ ಮುಂದುವರಿದಿದೆ.
ಪಾಕಿಸ್ತಾನ ಅತಿಕ್ರಮಿಸಿಕೊಂಡಿರುವ ಕಾಶ್ಮೀರದ ಸ್ಕರ್ದು ಪ್ರಾಂತ್ಯದಲ್ಲಿ ಇರುವ ಶಿಬಿರದಿಂದ ಕಾರ್ಗಿಲ್–ಡ್ರಾಸ್ ಮತ್ತು ಬಟಾಲಿಕ್ ವಲಯಗಳಲ್ಲಿ ಅತಿಕ್ರಮಣಕಾರರಿಗೆ ನೆರವು ನೀಡುತ್ತಿದ್ದ ಪಾಕಿಸ್ತಾನದ ಶಿಬಿರದ ಮೇಲೆ ಭಾರತದ ಸೇನಾ ಪಡೆ ನಡೆಸಿದ ದಾಳಿಯಲ್ಲಿ ಮೇಜರ್ ಒಬ್ಬರು ಸೇರಿದಂತೆ ಐವರು ಯೋಧರು ಹತರಾಗಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ತರಲು ರಾಜ್ಯದಲ್ಲಿ ತವಕ
ಬೆಂಗಳೂರು, ಜೂ. 18 – ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಜನತಾದಳದ ಸರ್ಕಾರಗಳ ಆಡಳಿತ ವೈಖರಿಗಳಿಂದ ಬೇಸತ್ತಿರುವ ರಾಜ್ಯದ ಜನತೆ ಮುಂದಿನ ಚುನಾವಣೆಗಳಲ್ಲಿ ಅವುಗಳನ್ನು ಕಿತ್ತೊಗೆದು ನಮ್ಮ ಪಕ್ಷಕ್ಕೆ ಅಧಿಕಾರ ಕೊಡಲು ತೀರ್ಮಾನಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗುಲಾಂ ನಬಿ ಆಜಾದ್ ಹೇಳಿದರು.
ರಾಜ್ಯದ ನಮ್ಮ ಪಕ್ಷದ ಎಲ್ಲ ಮುಖಂಡರ ‘ಪಾಂಚಜನ್ಯ’ದ 17 ಜಿಲ್ಲೆಗಳ ಪ್ರವಾಸದಲ್ಲಿ ಕಳೆದ 27 ವರ್ಷಗಳಿಂದ ನಾನು ಕಂಡರಿಯದ ಅಭೂತಪೂರ್ವ ಸ್ವಾಗತವನ್ನು ರಾಜ್ಯದ ಜನತೆ ನಮ್ಮ ಪಕ್ಷಕ್ಕೆ ನೀಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಯಲಹಂಕದಲ್ಲಿ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.