ಢಾಕಾ, ಜೂನ್ 19 (ಯುಎನ್ಐ, ಪಿಟಿಐ)– ಕಲ್ಕತ್ತಾ ನಗರದಿಂದ ಹೊರಟ ಮೊಟ್ಟ ಮೊದಲ ಬಸ್ ‘ಸೌಹಾರ್ದ’ ಇಂದು ಸಂಜೆ ಇಲ್ಲಿಗೆ ಬಂದು ಸೇರುವುದರೊಂದಿಗೆ ಭಾರತ– ಬಾಂಗ್ಲಾದೇಶ ಸಂಬಂಧದ ಇತಿಹಾಸಕ್ಕೆ ಹೊಸದೊಂದು ಅಧ್ಯಾಯ ಸೇರ್ಪಡೆಯಾಯಿತು.
ರಾಜಧಾನಿಯ ಓಸ್ಮಾನಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಸುಮಾರು 380 ಕಿ. ಮೀ ಕ್ರಮಿಸಿದ ಪಶ್ಚಿಮ ಬಂಗಾಳ ಸಾರಿಗೆ ಸಂಸ್ಥೆಗೆ ಸೇರಿದ ಹವಾ ನಿಯಂತ್ರಿತ ಬಸ್ಸನ್ನು ಬರಮಾಡಿಕೊಂಡರು.
‘ಭಾರತ– ಬಾಂಗ್ಲಾ ಎರಡೂ ದೇಶಗಳಿಗೂ ಇದೊಂದು ಸಂತಸದ ಸಮಾರಂಭ’ ಎಂದು ವಾಜಪೇಯಿ ತಿಳಿಸಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು, ವಿದೇಶಾಂಗ ಸಚಿವ ಜಸ್ವಂತ್ ಸಿಂಗ್, ರೈಲ್ವೆ ಸಚಿವ ನಿತೀಶ್ ಕುಮಾರ್ ಹಾಗೂ ಹಸೀನಾ ಸಂಪುಟ ಸಹೋದ್ಯೋಗಿಗಳು ಸಮಾರಂಭದಲ್ಲಿ ಹಾಜರಿದ್ದರು.
ಜರ್ಮನಿ: ಭಾರತದ ರೈತರ ಬಂಧನ
ನವದೆಹಲಿ, ಜೂನ್ 19 (ಯುಎನ್ಐ)– ವಿಶ್ವ ವಾಣಿಜ್ಯ ಸಂಘಟನೆ (ಡಬ್ಲುಟಿಒ) ಪ್ರತಿಪಾದಿಸುತ್ತಿರುವ ನೀತಿಗಳನ್ನು ವಿರೋಧಿಸಿ ಜಿ–8 ರಾಷ್ಟ್ರಗಳ ಶೃಂಗಮೇಳ ನಡೆಯುತ್ತಿರುವ ಜರ್ಮನಿಯ ಕಲೋನ್ ನಗರದಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ ಭಾರತದ ರೈತರನ್ನು ಪೊಲೀಸರು ಬಂಧಿಸಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸುಮಾರು 500 ಮಂದಿ ರೈತರು ನಗರದ ಕೇಂದ್ರ ಸ್ಥಾನಕ್ಕಿರುವ ಉಪ ರಸ್ತೆಯನ್ನು ಪ್ರವೇಶಿಸುತ್ತಿದ್ದಂತೆ ಪೊಲೀಸರು ತಡೆದರು. ಬಂಧಿತರಲ್ಲಿ ಆರು ಮಂದಿ ಇನ್ನೂ ಪೊಲೀಸರ ವಶದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.