ಕೊಲೊನ್, ಜೂನ್ 20 (ಯುಎನ್ಐ, ಪಿಟಿಐ)– ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನ ಸೈನ್ಯ ಮತ್ತು ಬಾಡಿಗೆ ಉಗ್ರಗಾಮಿಗಳು ಭಾರತದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಓಸಿ) ಉಲ್ಲಂಘಿಸಿರುವುದನ್ನು ಇಲ್ಲಿ ನಡೆಯುತ್ತಿರುವ ಜಿ–8 ರಾಷ್ಟ್ರಗಳ ಶೃಂಗಸಭೆ ತೀವ್ರವಾಗಿ ಖಂಡಿಸಿದೆ.
‘ಗಡಿ ಪ್ರದೇಶದಲ್ಲಿನ ವಾಸ್ತವ ಪರಿಸ್ಥಿತಿ ಯನ್ನು ಸೈನಿಕ ಕಾರ್ಯಾಚರಣೆ ಮೂಲಕ ಬದಲಾಯಿಸಲು ನಡೆಸುವ ಕೃತ್ಯ ಹೊಣೆಗೇಡಿತನದ್ದು’ ಎಂದು ಸಿದ್ಧಪಡಿಸಿರುವ ಕರಡು ಹೇಳಿಕೆಯಲ್ಲಿ ತೀಕ್ಷ್ಣವಾಗಿ ಟೀಕಿಸಲಾಗಿದೆ.
ಕಾರ್ಗಿಲ್ ಬಿಕ್ಕಟ್ಟಿಗೆ ಪಾಕಿಸ್ತಾನವೇ ಹೊಣೆ ಎಂದು ಜಿ–8 ರಾಷ್ಟ್ರಗಳು ಆರೋಪಿಸಿರುವುದರಿಂದ ಭಾರತಕ್ಕೆ ರಾಜತಾಂತ್ರಿಕ ಗೆಲುವು ದೊರೆತಂತಾಗಿದೆ. ಭಾರತದ ಜೊತೆಗಿನ ತನ್ನ ವಿವಾದವನ್ನು ಪರಿಹರಿಸಲು ಮಧ್ಯ ಪ್ರವೇಶಿಸುವಂತೆ ಜಿ–8 ರಾಷ್ಟ್ರಗಳಿಗೆ ಮನವಿ ಮಾಡಿದ ಪಾಕಿಸ್ತಾನಕ್ಕೆ ಈ ಹೇಳಿಕೆಯಿಂದ ಮುಖಭಂಗವಾದಂತಾಗಿದೆ.
ಕೃಷ್ಣಾ ನದಿ ನೀರಿನ ಬಳಕೆ ಗಡುವು ವಿಸ್ತರಣೆಗೆ ಅರ್ಜಿ
ಕಲ್ಬುರ್ಗಿ, ಜೂನ್ 20– ಕೃಷ್ಣಾ ನೀರನ್ನು 2000ನೇ ಇಸ್ವಿ ಮೇ 31ರೊಳಗೆ ಬಳಸಿಕೊಳ್ಳಬೇಕೆಂಬ ಬಚಾವತ್ ಆಯೋಗದ ತೀರ್ಪಿನ ಗಡುವನ್ನು ವಿಸ್ತರಿಸಬೇಕೆಂದು ಕೋರಿ ಕರ್ನಾಟಕ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ತಿಳಿಸಿದರು.
ಬಚಾವತ್ ಆಯೋಗದ ತೀರ್ಪಿನಂತೆ ರಾಜ್ಯ ತನ್ನ ಪಾಲಿನ ನೀರನ್ನು ಗಡುವಿನ ಅವಧಿಯೊಳಗೆ ಬಳಸಿಕೊಳ್ಳಲು ಸಾಧ್ಯವಾಗದಿದ್ದರೆ, 2000ನೇ ಇಸ್ವಿ ನಂತರವೂ ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಸಮರ ನಡೆಸಲಿದೆ ಎಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.