ಹಾಸನ, ಜೂನ್ 21– ಹಸಿಮೆಣಸಿನಕಾಯಿ ಬೆಲೆ ತೀವ್ರವಾಗಿ ಕುಸಿದ ಕಾರಣ ಇಂದು ನೂರಾರು ರೈತರು ತಾವು ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು ರಸ್ತೆ ಹಾಗೂ ಸಂತೇ ಮೈದಾನದಲ್ಲೆಲ್ಲಾ ಚೆಲ್ಲಿ, ಬಸ್ ಪ್ರಯಾಣಕ್ಕೂ ಹಣವಿಲ್ಲದೆ ಬರಿಗೈಯಲ್ಲಿ ತೆರಳಿದ ಪ್ರಸಂಗ ಇಲ್ಲಿ ನಡೆಯಿತು.
ಹಾಸನದಲ್ಲಿ ಪ್ರತಿ ಸೋಮವಾರ ನಡೆಯುವ ಹಸಿಮೆಣಸಿನಕಾಯಿ ಸಂತೆಗೆ ಸಕಲೇಶಪುರ, ಬೇಲೂರು, ಆಲೂರು, ಅರೇಹಳ್ಳಿ, ಮಗ್ಗೆ, ಚಿಕ್ಕೋಡು, ಮಲ್ಲಿಪಟ್ಟಣ, ಯಸಳೂರು, ಶನಿವಾರ ಸಂತೆ, ಅರಕಲಗೂಡು ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದಲೂ ರೈತರು ಮಾಲು ತಂದಿದ್ದರು.
ನಿನ್ನೆ ರಾತ್ರಿ ದೊಡ್ಡ ಗೋಣಿಚೀಲದಲ್ಲಿ ತುಂಬಿದ್ದ ಮೆಣಸಿನಕಾಯಿಲೆಗೆ 125 ರೂಪಾಯಿವರೆಗೂ ಇದ್ದ ಧಾರಣೆ ಬೆಳಿಗ್ಗೆ ಹೊತ್ತಿಗೆ ಯಥೇಚ್ಛವಾದ ಮಾಲು ಸಂತೆಗೆ ಬಂದುದರಿಂದ ಹಠಾತ್ತಾಗಿ ಚೀಲಕ್ಕೆ 10 ರೂಪಾಯಿಗೆ ಕುಸಿಯಿತು. ಬೆಳಿಗ್ಗೆಯೂ ಚೀಲಕ್ಕೆ 70 ರೂಪಾಯಿಯಂತೆ ಖರೀದಿಸಿದ್ದ ವರ್ತಕರು, ಮಾಲು ರಾಶಿ ರಾಶಿ ಬರುವುದನ್ನು ಕಂಡು ಚೀಲಕ್ಕೆ 10 ರೂಪಾಯಿ ದರ ನಿಗದಿ ಮಾಡಿದರು. ಇದರಿಂದ ಆಕ್ರೋಶಗೊಂಡ ರೈತರು ತಾವು ತಂದಿದ್ದ ಮೆಣಸಿನಕಾಯಿಯನ್ನು ಚೆಲ್ಲಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.