ಬೆಂಗಳೂರು, ಅ. 6– ರಾಜ್ಯ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೇಲುಗೈ ಸಾಧಿಸಿದ್ದು, ವಿಧಾನಸಭೆಯಲ್ಲಿ ಬಹುಮತ ಗಳಿಸಿ ಅಧಿಕಾರದ ಸೂತ್ರ ಹಿಡಿಯುವತ್ತ ದಾಪುಗಾಲು ಹಾಕಿ ಮುನ್ನಡೆದಿದೆ.
ಮತಗಟ್ಟೆ ಸಮೀಕ್ಷೆಗಳನ್ನು ತಲೆಕೆಳಗು ಮಾಡುವ ರೀತಿಯಲ್ಲಿ ರಾಜ್ಯದ ಮತದಾರರು ತೀರ್ಪು ನೀಡಿದ್ದು, ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದ ಬಿಜೆಪಿಗೆ ಚುನಾವಣಾ ಫಲಿತಾಂಶದಿಂದ ಆಘಾತವಾಗಿದ್ದರೆ,
ಜನತಾದಳ (ಯು) ಮತ್ತು ಜನತಾದಳ (ಎಸ್) ಚುನಾವಣೆಯಲ್ಲಿ ನೆಲಕಚ್ಚಿದ್ದರೆ ಆ ಪಕ್ಷದ ಘಟಾನುಘಟಿಗಳು ಧೂಳೀಪಟ ಆಗಿದ್ದಾರೆ.
ರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಸ್ಪಷ್ಟ ಮುನ್ನಡೆ
ನವದೆಹಲಿ, ಅ. 6 (ಪಿಟಿಐ, ಯುಎನ್ಐ)– ಹದಿಮೂರನೇ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿನ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವು (ಎನ್ಡಿಎ) ರಾಜಧಾನಿ ದೆಹಲಿಯಲ್ಲಿ ಏಕಸ್ವಾಮ್ಯ ಮೆರೆದು ರಾಷ್ಟ್ರದಲ್ಲಿ ಆರಂಭಿಕ ಮುನ್ನಡೆಯನ್ನು ಸಾಧಿಸಿದೆ. ಗೋವಾ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಖಾತೆ ತೆರೆದು ಆಂಧ್ರಪ್ರದೇಶ, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ಉತ್ತಮ ಸಾಧನೆ ತೋರಿಸಿದೆ.
ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ ಪುನಶ್ಚೇತನಗೊಂಡಿರುವ ಕಾಂಗ್ರೆಸ್ ಪಕ್ಷವು ಪಂಜಾಬ್ನಲ್ಲಿ ಅಭೂತಪೂರ್ವ ಜಯ ಸಾಧಿಸಿದೆ.
ಕರ್ನಾಟಕದಲ್ಲಿ ಎನ್ಡಿಎಗೆ ಕಾಂಗ್ರೆಸ್ ತೀವ್ರ ಮುಖಭಂಗ ಮಾಡಿದೆ. ಉಳಿದಂತೆ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಮತ ಎಣಿಕೆಯು ಮಂದಗತಿಯಲ್ಲಿ ಸಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.