ADVERTISEMENT

50 ವರ್ಷಗಳ ಹಿಂದೆ | ಕಾನೂನು ಕಾಗದದ ಮೇಲೆ ಮಾತ್ರ: ಒಡೆಯರಿಂದ ಒಕ್ಕಲುಗಳ ಬೇಟೆ

ಪ್ರಜಾವಾಣಿ ವಿಶೇಷ
Published 2 ಜುಲೈ 2024, 22:10 IST
Last Updated 2 ಜುಲೈ 2024, 22:10 IST
   

ಕಾನೂನು ಕಾಗದದ ಮೇಲೆ ಮಾತ್ರ: ಒಡೆಯರಿಂದ ಒಕ್ಕಲುಗಳ ಬೇಟೆ

ಬೆಂಗಳೂರು, ಜುಲೈ 2– ಗೇಣಿದಾರ ಬೆಳೆದ ಬೆಳೆ, ಜಮೀನ್ದಾರರಿಂದ ಕಟಾವು. ಗೇಣಿದಾರರನ್ನು ಹತ್ತಿರದ ಕಾಡಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಅವನಿಗೆ ಹೊಡೆತ.

–ರಾಜ್ಯದಲ್ಲಿ ಭೂಸುಧಾರಣೆ ತಿದ್ದುಪಡಿ ಶಾಸನ ಜಾರಿಗೆ ಬರಲು ಆರಂಭವಾಗುತ್ತಿದ್ದಂತೆ, ಸರ್ಕಾರಕ್ಕೆ ಪ್ರತಿದಿನ ಬರುತ್ತಿರುವ ಹತ್ತಾರು ಬಗೆಯ ದೂರುಗಳಲ್ಲಿ ಇದೊಂದು. ಇದು ಕಾರ್ಕಳ ತಾಲ್ಲೂಕಿನಿಂದ ಬಂದ ದೂರು.

ADVERTISEMENT

ತಂತಿ ಹಾಗೂ ಪತ್ರಗಳ ಮೂಲಕ ಬರುವ ದೂರುಗಳನ್ನು ಕಂದಾಯ ಸಚಿವ ಶ್ರೀ ಎನ್. ಹುಚ್ಚಮಾಸ್ತಿಗೌಡ ಅವರು ತತ್‌ಕ್ಷಣ ಅವುಗಳನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸುತ್ತಿದ್ದಾರೆ. ದೂರುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡುತ್ತಿದ್ದಾರೆ.

***

ಸ್ಪಷ್ಟಗುರಿಗಾಗಿ ಒಗ್ಗಟ್ಟಿನ ದುಡಿಮೆ ಏಳಿಗೆಗೆ ಹಾದಿ: ಹಿಂದುಳಿದವರಿಗೆ ಅರಸು ಕರೆ

ಬೆಂಗಳೂರು ಜುಲೈ 2– ಹಿಂದುಳಿದವರು ತಮ್ಮ ಗೊತ್ತು ಗುರಿಗಳ ವಿಚಾರದಲ್ಲಿ ಸೂಕ್ತ ತಿಳಿವಳಿಕೆ ಹೊಂದಿ ಒಗ್ಗಟ್ಟಿನಿಂದ ದುಡಿದರೆ ಮಾತ್ರ ಅವರ ಉದ್ಧಾರ ತ್ವರಿತವಾಗಿ ಆಗುವುದು ಎಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಇಂದು ಇಲ್ಲಿ ಹೇಳಿದರು.

ನಗರಭವನದಲ್ಲಿ ಕೆ.ಪಿ.ಸಿ.ಸಿ. ಹಿಂದುಳಿದ ಜನಾಂಗಗಳ ವಿಭಾಗವನ್ನು ಉದ್ಘಾಟಿಸಿದ ಅವರು ನಿರ್ಲಕ್ಷಿಸಲ್ಪಟ್ಟಿದ್ದ ನಾನಾ ವರ್ಗಗಳ ಹಿತ ಸಾಧನೆಗೆ ರಚಿಸಲ್ಪಟ್ಟಿರುವ ನಾನಾ ಅಂಗಸಂಸ್ಥೆಗಳು ಮಾತೃ ಸಂಸ್ಥೆಯ ಕಾರ್‍ಯಕ್ರಮಕ್ಕೆ ಅನುಗುಣವಾಗಿ ನಡೆಯಬೇಕೆಂದೂ ಇಲ್ಲದಿದ್ದರೆ ಅನಾರೋಗ್ಯಕರ ಬೆಳವಣಿಗೆಯಿಂದ ಅವುಗಳ ಕರ್ತವ್ಯಪಾಲನೆಗೆ ತೊಡಕಾಗುವುದೆಂದೂ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.