ತಿನ್ನುವ ಎಣ್ಣೆಗೆ ಮೋಟಾರ್ ತೈಲದ ಬೆರಕೆ
ನವದೆಹಲಿ, ಜುಲೈ 3– ಮೋಟಾರ್ ವಾಹನ ಯಂತ್ರದಲ್ಲಿ ಬಳಸಿ ಆದಮೇಲೆ ಹೊರಚೆಲ್ಲುವ ಎಣ್ಣೆಯನ್ನು ಖಾದ್ಯ ತೈಲಗಳ ಜೊತೆ ಕಲಬೆರಕೆ ಮಾಡುತ್ತಾರೆ. ಭಾರತದ ಬಳಕೆದಾರರ ಮಂಡಳಿ ನಡೆಸಿರುವ ಸಮೀಕ್ಷೆಯಿಂದ ಈ ಅಂಶ ಗೊತ್ತಾಗಿದೆ.
ಪೆಟ್ರೋಲ್ ಬಂಕುಗಳಲ್ಲಿರುವ ಸರ್ವಿಸ್ ಸ್ಟೇಷನ್ಗಳಿಂದ ಈ ಬಗೆಯ ಕೊಳಕು ಜಿಡ್ಡನ್ನು ಸಂಗ್ರಹಿಸಿ ಕಲಬೆರಕೆ ಮಾಡುವ ವರ್ತಕರಿಗೆ ಭಾರಿ ಬೆಲೆಗೆ ಮಾರುವವರಿದ್ದಾರೆ.
ಕಲಬೆರಕೆ ಮಾಡುವವರು ಅವರಿಂದ ಆ ಮೋಟಾರು ಎಣ್ಣೆ ಸಂಗ್ರಹಿಸಿ ಶುದ್ಧಗೊಳಿಸಿ ಖಾದ್ಯ ತೈಲದ ಜೊತೆ ಅಥವಾ ಇತರ ಕೀಲೆಣ್ಣೆಗಳ ಜೊತೆ ಬೆರೆಸುತ್ತಾರೆ.
***
ಫಕ್ರುದ್ದೀನ್ ಅಹ್ಮದ್ ರಾಜೀನಾಮೆ ಒಪ್ಪಿಗೆ
ನವದೆಹಲಿ, ಜುಲೈ 3– ಕೇಂದ್ರ ಆಹಾರ ಸಚಿವ ಫಕ್ರುದ್ದೀನ್ ಅಲೀ ಅಹ್ಮದ್ ಅವರು ಸಂಪುಟಕ್ಕೆ ಕೊಟ್ಟಿರುವ ರಾಜೀನಾಮೆಯನ್ನು ರಾಷ್ಟ್ರಪತಿ ವಿ.ವಿ. ಗಿರಿ ಅವರು ಅಂಗೀಕರಿಸಿದ್ದಾರೆ.
ಈ ಸಂಬಂಧದಲ್ಲಿ ಇಂದು ಬೆಳಿಗ್ಗೆ ರಾಷ್ಟ್ರಪತಿ ಭವನ ಕೊಟ್ಟಿರುವ ಒಂದು ಪ್ರಕಟಣೆಯಲ್ಲಿ ಕೈಗಾರಿಕಾಭಿವೃದ್ಧಿ ಸಚಿವ ಸಿ. ಸುಬ್ರಹ್ಮಣ್ಯಂ ಅವರು ಆಹಾರ ಖಾತೆಯನ್ನೂ ನೋಡಿಕೊಳ್ಳುವಂತೆ ಪ್ರಧಾನಿ ಸಲಹೆ ಪ್ರಕಾರ ರಾಷ್ಟ್ರಪತಿ ಆದೇಶ ಕೊಟ್ಟಿದ್ದಾರೆಂದು ತಿಳಿಸಲಾಗಿದೆ. ರಾಷ್ಟ್ರಪತಿ ಸ್ಥಾನಕ್ಕೆ ತಾವು ಕಾಂಗ್ರೆಸ್ ಉಮೇದುವಾರರಾಗಿ ನಾಮಕರಣಗೊಂಡುದರಿಂದ ಫಕ್ರುದ್ದೀನ್ ಅಲೀ ಅಹ್ಮದ್ ಅವರು ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.