ಮೈಸೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸ್ ‘ದೌರ್ಜನ್ಯ’ ಕುರಿತು ವಿಚಾರಣೆ ಭರವಸೆ
ಬೆಂಗಳೂರು, ಮಾರ್ಚ್ 4– ಕೆಲವು ವಿದ್ಯಾರ್ಥಿಗಳ ಮೇಲೆ ಶನಿವಾರ ಮೈಸೂರಿನಲ್ಲಿ ಪೊಲೀಸರು ದೌರ್ಜನ್ಯ ನಡೆಸಿದರೆಂಬ ಆಪಾದನೆ ಬಗೆಗೆ ವಿಚಾರಣೆ ನಡೆಸುವ ಭರವಸೆಯನ್ನು ಲೋಕೋಪಯೋಗಿ ಸಚಿವ ಎಚ್.ಎಂ.ಚನ್ನಬಸಪ್ಪ ಅವರು ಇಂದು ವಿಧಾನಸಭೆಯಲ್ಲಿ ನೀಡಿದರು.
ಪ್ರಶ್ನೋತ್ತರವಾದ ಕೂಡಲೇ ಆ ಬಗ್ಗೆ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಎಚ್.ಡಿ.ದೇವೇಗೌಡ ಅವರು ‘ಸಾರ್ವಜನಿಕ ಸಭೆಯಲ್ಲಿ ವಿದ್ಯಾರ್ಥಿಗಳು ಕೆಲವರು ಚೀಟಿಯೊಂದನ್ನು ಕಳುಹಿಸಿ ಬದರಿನಾರಾಯಣ್ ಅವರನ್ನು ಮಂತ್ರಿ ಮಂಡಲದಿಂದ ತೆಗೆದುಹಾಕಿದ ಬಗೆಗೆ’ ವಿವರಣೆ ಕೇಳಿದುದಕ್ಕೆ ಪೊಲೀಸರು ಅವರ ಮೇಲೆ ಕ್ರಮ ತೆಗೆದುಕೊಂಡರೆಂದೂ, ಆ ಸಭೆಯಲ್ಲಿ ಬದರಿನಾರಾಯಣ್, ಮುಖ್ಯಮಂತ್ರಿ, ಅಜೀಜ್ ಸೇಠ್, ರಾಚಯ್ಯ ಅವರು ಉಪಸ್ಥಿತರಿದ್ದರೆಂದೂ ಹೇಳಿದರು.
ಗೋಲಿಬಾರ್ ಇಬ್ಬರು ಬಾಲಕರ ಸಾವು
ಅಹಮದಾಬಾದ್, ಮಾರ್ಚ್ 4– ಇಲ್ಲಿನ ಖಾಡಿಯಾ ಕ್ರಾಸ್ ರಸ್ತೆ ಮತ್ತು ಧಾರಿಯಾಪುರ ಪ್ರದೇಶದಲ್ಲಿ ಪೊಲೀಸರು ಇಂದು ಗೋಲಿಬಾರ್ ಮಾಡಿದಾಗ ಇಬ್ಬರು ಬಾಲಕರು ಗಾಯಗೊಂಡು ನಂತರ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ದೊಂಬಿ ಎದ್ದಿದ್ದ ಕೆಲವರು, ಜನರು ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲೆಸೆದು ಬೆಂಕಿ ಹಚ್ಚಲು ಪ್ರಯತ್ನಿಸಿದಾಗ ಪೊಲೀಸರು, ಗೋಲಿಬಾರ್ ಮಾಡಿದರೆಂದು ಅಧಿಕೃತ ವಕ್ತಾರರೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.