ಗುರುವಾರ 26–09–1974
ಕೇಂದ್ರದ ನೆರವನ್ನು ಅವಲಂಬಿಸಬೇಡಿ: ರಾಜ್ಯಗಳಿಗೆ ಸಲಹೆ
ಲಖನೌ, ಸೆ. 25– ರಾಜ್ಯ ಸರ್ಕಾರಗಳು ತಮ್ಮ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಿಕೊಳ್ಳಲು ಹೆಚ್ಚಾಗಿ ಕೇಂದ್ರ ಸರ್ಕಾರವನ್ನು ಅವಲಂಬಿಸಿಕೊಂಡಿರದೆ, ತಮ್ಮದೇ ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಳ್ಳಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಜಿತ್ ಯಾದವ್ ಅವರು ಇಂದು ಇಲ್ಲಿ ಸಲಹೆ ಇತ್ತರು.
ಯಾದವ್ ಅವರು ಪತ್ರಕರ್ತರೊಡನೆ ಮಾತನಾಡುತ್ತ, ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರವಾಹ ಮತ್ತು ಅಭಾವ ಪರಿಸ್ಥಿತಿಯಿಂದಾಗಿ ತೀವ್ರ ಬಿಕ್ಕಟ್ಟು ಸಂಭವಿಸಿರುವುದಾಗಿ ನುಡಿದರು.
‘ನಿಧಿ ಸಂಗ್ರಹಿಸುವುದು ಇಲ್ಲವೆ ವಿದೇಶಗಳಿಂದ ಹಣವನ್ನು ಸಾಲಪಡೆಯುವುದು ಇವು ಎರಡೇ ಕೇಂದ್ರ ಸರ್ಕಾರಕ್ಕೆ ಈಗಿರುವ ಮಾರ್ಗಗಳು. ಆದರೆ, ಬೇರೆ ದೇಶಗಳಿಂದ ಹಣವನ್ನು ಸಾಲವಾಗಿ ಪಡೆಯಲು ಸರ್ಕಾರ ಸಿದ್ಧವಿಲ್ಲ’ ಎಂದು ಅವರು ತಿಳಿಸಿದರು.
ಹುಂಜಾ ಪಾಕ್ನಲ್ಲಿ ವಿಲೀನ: ಭುಟ್ಟೋ ಕ್ರಮಕ್ಕೆ ಭಾರತ ಆಕ್ಷೇಪ
ನವದೆಹಲಿ, ಸೆ. 25– ಭಾರತದ ಅವಿಭಾಜ್ಯ ಭಾಗವಾಗಿರುವ ಹುಂಜಾ ರಾಜ್ಯವನ್ನು ಪಾಕಿಸ್ತಾನದ ಉತ್ತರಪ್ರದೇಶದಲ್ಲಿ ವಿಲೀನ ಮಾಡಿರುವುದಾಗಿ ಪಾಕಿಸ್ತಾನದ ಪ್ರಧಾನಿ ಭುಟ್ಟೋ ಅವರು ಹೇಳಿಕೆ ನೀಡಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವಿದೇಶಾಂಗ ಖಾತೆಯ ವಕ್ತಾರರು ಇಂದು ಇಲ್ಲಿ ನೀಡಿದ ಹೇಳಿಕೆಯಲ್ಲಿ ‘ಪಾಕಿಸ್ತಾನದ ಈ ಏಕಪಕ್ಷೀಯ ಕ್ರಮವು ಜಮ್ಮು–ಕಾಶ್ಮೀರದ ಉತ್ತರ ಭಾಗದಲ್ಲಿ ವಾಸ್ತವಿಕ ಬದಲಾವಣೆಯುಂಟು ಮಾಡಿದೆ. ಇಂಥ ಬದಲಾವಣೆ ಮಾಡುವುದಕ್ಕೆ ಪಾಕಿಸ್ತಾನಕ್ಕೆ ಯಾವ ಹಕ್ಕೂ ಇಲ್ಲ’ ಎಂದು ತಿಳಿಸಿದ್ದಾರೆ.
ಹುಂಜಾವು ಜಮ್ಮು–ಕಾಶ್ಮೀರದ ಸಣ್ಣ ರಾಜ್ಯವಾಗಿರುವುದರಿಂದ ಇದನ್ನು ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.