ಲಿಂಗನಮಕ್ಕಿ ಪ್ರದೇಶಕ್ಕೆ ಹನಿ ಮಳೆಯ ತಂಪು: ಜಡಿ ಆರಂಭಕ್ಕೆ ಸೂಚಿ
ಬೆಂಗಳೂರು, ಜೂನ್ 27– ಲಿಂಗನಮಕ್ಕಿ ಜಲಾಶಯದ ಸುತ್ತಮುತ್ತಲ ಪ್ರದೇಶದಲ್ಲಿ, ರಾಜ್ಯದ ಜನಜೀವನವೇ ಕುಸಿದುಬೀಳುವ ಅನಾಹುತವನ್ನು ತಪ್ಪಿಸಬಹುದಾದ ಮುಂಗಾರು ಹನಿ ಆರಂಭ.
ಇದರ ಬೆನ್ನ ಹಿಂದೆಯೇ ಭಾರಿ ಮಳೆ ಆರಂಭವಾಗುವ ಸ್ಪಷ್ಟ ಲಕ್ಷಣ– ಈ ಸಂತಸದ ಸುದ್ದಿ ರಾಜಧಾನಿಯನ್ನು ತಲುಪಿದೆ.
ಇದುವರೆಗಿನ ಹನಿಮಳೆಯ ಪರಿಣಾಮವಾಗಿ, ಸುಮಾರು 18 ಗಂಟೆಗಳ ಕಾಲ ವಿದ್ಯುತ್ ಉತ್ಪಾದನೆಗೆ ಸಾಕಾಗುಷ್ಟು ಹೊಸ ನೀರು ಜಲಾಶಯ ಸೇರಿದೆ (ನೀರಿನಮಟ್ಟ 1,230.2 ಅಡಿ) ಎಂದು ಲೋಕೋಪಯೋಗಿ ಇಲಾಖೆ ಮಂತ್ರಿ ಶ್ರೀ ಎಚ್. ಎಂ. ಚನ್ನಬಸ್ಸಪ್ಪ ಅವರು ಇಂದು ಸಂಜೆ ವರದಿಗಾರರಿಗೆ ತಿಳಿಸಿದರು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷತೆಗೆ ಮಹಾಬಲಶೆಟ್ಟಿ ಸ್ಪರ್ಧೆ ಸಂಭವ
ಬೆಂಗಳೂರು, ಜೂನ್ 27– ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಕೆ.ಪಿ.ಸಿ.ಸಿ. ವಲಯಗಳಲ್ಲೇ ಅಭಿಪ್ರಾಯವಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಯುವಕ ಅಧ್ಯಕ್ಷ ಶ್ರೀ ಕೆ. ಮಹಾಬಲಶೆಟ್ಟಿ ಜುಲೈ 7ರಂದು ನಡೆಯುವ ಪ್ರದೇಶ ಸಮಿತಿ ಅಧ್ಯಕ್ಷ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಸಂಭವ ಉಂಟು.
‘ಯಾವ ಗುಂಪಿಗೂ’ ಸೇರದ ಶ್ರೀ ಮಹಾಬಲಶೆಟ್ಟಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂಬುದು ಅವರ ಸ್ವಂತ ತೀರ್ಮಾನವಲ್ಲ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸರ್ವಾನುಮತದಿಂದ ಕೈಗೊಂಡಿರುವ ತೀರ್ಮಾನ.
ಮುಖ್ಯಮಂತ್ರಿ ಶ್ರೀ ಅರಸು ಹಾಗೂ ಪ್ರದೇಶ ಅಧ್ಯಕ್ಷ ಶ್ರೀ ಕೆ. ಎಚ್. ರಂಗನಾಥ್ ಅವರು ಸೇರಿ ಪಕ್ಷದ ಕಾರ್ಯಕ್ರಮಗಳನ್ನು ನಿಷ್ಠೆಯಿಂದ ಜಾರಿಗೆ ತರುವ ವ್ಯಕ್ತಿಯನ್ನು ಅಧ್ಯಕ್ಷ ಪದವಿಗೆ ಆರಿಸಿದರೆ ಶ್ರೀ ಶೆಟ್ಟರು ಸ್ಪರ್ಧಿಸುವುದಿಲ್ಲ. ಈ ಇಬ್ಬರು ನಾಯಕರ ನಿರ್ಧಾರವನ್ನ ಇವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒಪ್ಪಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.