ನವದೆಹಲಿ, ಜೂನ್ 27– ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಫಕ್ರುದ್ದೀನ್ ಅಲಿ ಅಹ್ಮದ್ ಅವರನ್ನು ನಾಳೆ ಇಲ್ಲಿ ಸೇರಲಿರುವ ಪಕ್ಷದ ಸಂಸದೀಯ ಮಂಡಲಿ ಆಯ್ಕೆ ಮಾಡುವುದು ಬಹುತೇಕ ಖಚಿತವೆಂದು ವೀಕ್ಷಕರು ಭಾವಿಸಿದ್ದಾರೆ.
ಪ್ರಧಾನಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಶಂಕರದಯಾಳ ಶರ್ಮಾ ಹಾಗೂ ಇತರ ಹಿರಿಯ ಸಹೋದ್ಯೋಗಿಗಳ ಜತೆ ನಿನ್ನೆ ಸಂಜೆ ಅಂತಿಮ ಚರ್ಚೆ ನಡೆಸಿದರು. ಸ್ವರಣ್ಸಿಂಗ್, ಜಗಜೀವನರಾಂ ಹಾಗೂ ಡಿ.ಕೆ. ಬರೂವಾ ಅವರು ಹಾಜರಿದ್ದರು.
ಶ್ರೀಲಂಕಾಕ್ಕೆ ಕಛತೀವು ಬಿಟ್ಟುಕೊಡಲು ಒಪ್ಪಿಗೆ
ಕೊಲಂಬೊ, ಜೂನ್ 27– ಪಾಕ್ ಜಲಸಂಧಿಯಲ್ಲಿ ವಿವಾದಕ್ಕೊಳಗಾಗಿರುವ ಕಛತೀವು ದ್ವೀಪದ ಪರಮಾಧಿಕಾರವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡಲು ಭಾರತವು ನಿರ್ಧರಿಸಿರುವುದಾಗಿ ಇಂದು ತಿಳಿದುಬಂದಿದೆ.
ಉಭಯ ರಾಷ್ಟ್ರಗಳು ಸಹಿ ಮಾಡಿರುವ ಈ ಒಪ್ಪಂದದ ಅಧಿಕೃತ ಪ್ರಕಟಣೆ ನಾಳೆ ಹೊರಬೀಳುವ ನಿರೀಕ್ಷೆ ಇದೆ. ಪಾಕ್ ಜಲಸಂಧಿಯಲ್ಲಿ ಗಡಿ ಗುರುತಿಸುವ ವಿಷಯದಲ್ಲಿಯೂ ಸಮಗ್ರ ಒಪ್ಪಂದ ಏರ್ಪಟ್ಟಿರುವುದಾಗಿ ದೆಹಲಿಯಲ್ಲಿನ ಬಲ್ಲ ವಲಯಗಳಿಂದ ತಿಳಿದುಬಂದಿದೆ.
ನವದೆಹಲಿ ಮತ್ತು ಕೊಲಂಬೊದಲ್ಲಿ ಏಕಕಾಲದಲ್ಲಿ ನಾಳೆ ಪ್ರಕಟಿಸಲಾಗುವ ಈ ಒಪ್ಪಂದದ ವಿವರಗಳನ್ನು ಈ ವಲಯಗಳು ವರದಿ ಮಾಡಿಲ್ಲ.
ಶ್ರೀಮತಿ ಸಿರಿಮಾವೊ ಬಂಡಾರನಾಯಕೆ ಅವರು ಕಳೆದ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ, ಕಛತೀವು ಬಗ್ಗೆ ಒಂದು ದಶಕದ ವಿವಾದವನ್ನು ಮುಕ್ತಾಯಗೊಳಿಸಬೇಕೆಂದು ಉಭಯ ರಾಷ್ಟ್ರಗಳ ಪ್ರಧಾನಿಯವರೂ ತೀರ್ಮಾನಕ್ಕೆ ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.