ಬೆಂಗಳೂರು, ಮೇ 20– ಪ್ರವಾಸ ರದ್ದು ಮಾಡಿ ತತ್ಕ್ಷಣ ರಾಜಧಾನಿಗೆ ಹಿಂದಿರುಗಿ ವಿಧಾನಪರಿಷತ್ತಿನ ಅಧಿವೇಶನದಲ್ಲಿ ಭಾಗವಹಿಸಲು ಬನ್ನಿ ಎಂದು ಪ್ರವಾಸದಲ್ಲಿರುವ ಸಚಿವರುಗಳಿಗೆ ತಂತಿಯ ಮೂಲಕ ಕೋರಲು ಸರ್ಕಾರ ಇಂದು ಒಪ್ಪಿಕೊಂಡಿತು.
ಇನ್ನು ಮುಂದೆ, ಅಧಿವೇಶನ ನಡೆಯುತ್ತಿದ್ದಾಗ ಪ್ರವಾಸ ಕಾರ್ಯಕ್ರಮ ಹಾಕಿಕೊಳ್ಳದಂತೆ ಸೂಚನೆ ನೀಡುವ ಭರವಸೆಯನ್ನು ವಿಧಾನ ಪರಿಷತ್ತಿಗೆ ನೀಡಿದ ಮೇಲೆ, ಸಭೆಯಲ್ಲಿ ಸಚಿವರ ಪ್ರವಾಸದಿಂದ ಉಂಟಾಗಿದ್ದ ಗೊಂದಲ ತಿಳಿಯಾಗಿ, ಸ್ಥಗಿತವಾಗಿದ್ದ
ಕಲಾಪ ಮುಂದುವರಿಯಲು ಅವಕಾಶ ನೀಡಿತು. ಹಂಗಾಮಿ ಸಭಾಪತಿ ಟಿ.ಎನ್.ನರಸಿಂಹಮೂರ್ತಿ ಅವರ ಕೊಠಡಿಯಲ್ಲಿ ಸಂಸದೀಯ ವ್ಯವಹಾರ ಖಾತೆಯ ಸಚಿವ ಎಸ್.ಎಂ.ಕೃಷ್ಣ, ವಿರೋಧ ಪಕ್ಷದ ನಾಯಕ ರಾಮಕೃಷ್ಣ ಹೆಗಡೆ ಹಾಗೂ ವಿರೋಧ ಪಕ್ಷದ ಹಲವು ಸದಸ್ಯರು ಕಲೆತು ಚರ್ಚಿಸಿದ ಮೇಲೆ ಸಭೆಗೆ ಬಂದ ಉಪಸಭಾಪತಿಗಳು ಅವರ ನಿರ್ಧಾರವನ್ನು ಪ್ರಕಟಿಸಿದರು.
ವಾತಾವರಣ ಕಲುಷಿತಗೊಳಿಸಿದ ಹೊಸ ವಿಧಾನ
ನವದೆಹಲಿ, ಮೇ 20– ಭೂಗರ್ಭದಲ್ಲಿ ಭಾರತ ನಡೆಸಿದ ಅಣುಸ್ಫೋಟವನ್ನು ತಾನು ಶನಿವಾರ ಬೆಳಿಗ್ಗೆ 8.06ರಲ್ಲಿ ಗುರುತಿಸಿರುವುದಾಗಿ ಪವನ ವಿಜ್ಞಾನ ಶಾಖೆ ಭಾನುವಾರ ಇಲ್ಲಿ ಪ್ರಕಟಿಸಿತು.
ಅಣುಸ್ಫೋಟವನ್ನು ಪಶ್ಚಿಮ ಭಾರತದಲ್ಲಿ ನಡೆಸಲಾಯಿತು ಎಂದು ಅಣುಶಕ್ತಿ ಆಯೋಗ ಹೇಳಿತ್ತು. ಪಶ್ಚಿಮ ಭಾರತದಲ್ಲಿ ಶನಿವಾರ ಗಾಳಿ ಬೀಸಿದ ವಿಧಾನ ಮತ್ತು ಭೂಕಂಪನದ ಸುದ್ದಿ ಗಮನಿಸಿದರೆ, ಅಣು ಸಾಧನವನ್ನು ದೆಹಲಿಗೆ ಸುಮಾರು 500 ಕಿ.ಮೀ ದೂರದಲ್ಲಿ ರಾಜಸ್ಥಾನದ ಬಾರ್ಮೇರ್ ಜಿಲ್ಲೆಯಲ್ಲಿ ನಡೆಸಲಾಗಿದೆ ಎಂದು ಗೊತ್ತಾಗುತ್ತದೆ ಎಂದು ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.