ಷರತ್ತಿಲ್ಲದ ಮಾತುಕತೆಗೆ ರಾಷ್ಟ್ರಪತಿ ಗಿರಿ ಬೆಂಬಲ; ವೇತನ ತಡೆಗೆ ವಿರೋಧ
ನವದೆಹಲಿ, ಮೇ 15– ರೈಲ್ವೆ ಮುಷ್ಕರ ಅಂತ್ಯ ಕುರಿತು ಉಭಯ ಪಕ್ಷಗಳೂ ಯಾವುದೇ ಪೂರ್ವಭಾವಿ ಷರತ್ತು ಹಾಕದೇ ಮಾತುಕತೆಗಳನ್ನು ಪುನರಾರಂಭಿಸುವುದಕ್ಕೆ ರಾಷ್ಟ್ರಪತಿ ಗಿರಿ ಅವರು ಬೆಂಬಲ ಸೂಚಿಸಿದ್ದಾರೆ.
ಪ್ರಧಾನಿ ಇಂದಿರಾಗಾಂಧಿ ಅವರ ಜೊತೆ ರೈಲ್ವೆ ಮುಷ್ಕರದಿಂದ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಇಂದು ಚರ್ಚಿಸಿದ ರಾಷ್ಟ್ರಪತಿ ವಿ.ವಿ. ಗಿರಿ ಅವರು ಯಾವುದೇ ಕಹಿ ಭಾವನೆ ನೌಕರರಲ್ಲಿ ಉಳಿಯದಂತೆ ವಿವಾದ ಇತ್ಯರ್ಥಗೊಳಿಸಬೇಕಾದ ಅಗತ್ಯವನ್ನು ಒತ್ತಿಹೇಳಿದರು ಎನ್ನಲಾಗಿದೆ.
ವೇತನ ನೀಡಿಕೆ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಕಳೆದ ತಿಂಗಳ ವೇತನ ನೀಡಿಕೆಯನ್ನು ಮುಂದೂಡಿದ್ದು ತಪ್ಪು ಎಂದು ಗಿರಿ ಅವರು ಸ್ಪಷ್ಟವಾಗಿ ಹೇಳಿದರು.
ಪ್ರಧಾನಿ ಇಂದಿರಾಗಾಂಧಿ, ಕೇಂದ್ರ ಸಚಿವರಾದ ಜಗಜೀವನರಾಂ ಹಾಗೂ ಫಕ್ರುದ್ದೀನ್ ಅಲಿ ಅಹಮದ್ ಅವರು ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಚರ್ಚಿಸಿದರು.
ಭಾರತ ಬಂದ್ ಭಾಗಶಃ ಯಶಸ್ವಿ: ಮುಂಬೈ, ಮದ್ರಾಸ್ ಜೀವನ ಅಸ್ತವ್ಯಸ್ತ
ನವದೆಹಲಿ, ಮೇ 15– ವಿರೋಧ ಪಕ್ಷಗಳು ಮತ್ತು ವಿವಿಧ ಕೇಂದ್ರ ಕಾರ್ಮಿಕ ಸಂಘಗಳು– ಐಎನ್ಟಿಯುಸಿ ಬಿಟ್ಟು –ಕರೆ ನೀಡಿದ್ದ ಭಾರತ್ ಬಂದ್ ಇಂದು ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತಾದರೂ ಇತರ ರಾಜ್ಯಗಳಲ್ಲಿ ಹೆಚ್ಚು ಪರಿಣಾಮ ಬೀರಲಿಲ್ಲ. ಒಂದು ದಿನದ ಈ ಬಂದ್ ಭಾಗಶಃ ಯಶಸ್ವಿಯಾಯಿತಷ್ಟೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.