ADVERTISEMENT

50 ವರ್ಷಗಳ ಹಿಂದೆ: 20 ದಿನಗಳಲ್ಲಿ ನಗರಕ್ಕೆ ‘ಕಾವೇರಿ’

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 0:20 IST
Last Updated 23 ನವೆಂಬರ್ 2023, 0:20 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಪ್ರತಿ ಹಳ್ಳಿಗೂ ಭೇಟಿ: ವೃದ್ಧರನ್ನು ಗುರುತಿಸಿ ವೇತನ ನೀಡಿಕೆಗೆ ಕ್ರಮ

ಬೆಂಗಳೂರು, ನ. 22– ಮುಂದಿನ ಡಿಸೆಂಬರ್‌ ಅಥವಾ ಜನವರಿ ತಿಂಗಳಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ರಾಜ್ಯದ ಪ್ರತಿ ಹಳ್ಳಿಗೆ ಭೇಟಿ ನೀಡಿ ವೃದ್ಧಾಪ್ಯ ವೇತನಕ್ಕೆ ಅರ್ಹರಾದವರನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.

ವೃದ್ಧಾಪ್ಯ ವೇತನ ನಿರ್ಧಾರ ಹಾಗೂ ಪಾವತಿಯಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಿ, ಈ ಸಂಬಂಧದಲ್ಲಿ ತ್ವರಿತ ಕ್ರಮ ಕೈಗೊಂಡು ಈ ಕೆಲಸವನ್ನು ಮುಗಿಸುವ ಉದ್ದೇಶದಿಂದ ಡಿಸೆಂಬರ್‌ ಅಥವಾ ಜನವರಿಯಲ್ಲಿ ‘ವೃದ್ಧಾಪ್ಯ ವೇತನ ವಾರ’ ಆಚರಿಸಲಾಗುವುದು.

ADVERTISEMENT

20 ದಿನಗಳಲ್ಲಿ ನಗರಕ್ಕೆ ‘ಕಾವೇರಿ’

‌ಬೆಂಗಳೂರು, ನ. 22– ಬೆಂಗಳೂರು ನಗರಕ್ಕೆ ಕಾವೇರಿಯಿಂದ ಕುಡಿಯುವ ನೀರು ಒದಗಿಸುವ 34 ಕೋಟಿ ರೂಪಾಯಿಗಳ ವೆಚ್ಚದ ಯೋಜನೆಯು ಇನ್ನು 20 ದಿನಗಳಲ್ಲಿ ಪೂರ್ತಿಗೊಂಡು, ನೀರು ಹರಿಯಲು ಆರಂಭವಾಗುತ್ತದೆ.

ಫೋನ್‌ ಕದ್ದು ಕೇಳುವುದಕ್ಕೆ ಮದ್ದು

ನವದೆಹಲಿ, ನ. 22– ಎಲೆಕ್ಟ್ರಾನಿಕ್‌ ಉಪಕರಣದ ಮೂಲಕ ಟೆಲಿಫೋನ್‌ ಸಂಭಾಷಣೆಯನ್ನು ಕದ್ದು ಕೇಳುವುದು ಇನ್ನು ಮುಂದೆ ಅಕ್ಷರಶಃ ಅಸಾಧ್ಯವಾಗುತ್ತದೆ.

ಬ್ರಿಟಿಷ್‌ ಸಂಸ್ಥೆಯೊಂದು ಕದ್ದು ಕೇಳುವುದನ್ನು ತಪ್ಪಿಸುವ ಹೊಸ ಉಪಕರಣವೊಂದನ್ನು ಕಂಡುಹಿಡಿದಿದೆ. ಈ ಉಪಕರಣವನ್ನು ಟೆಲಿಫೋನಿಗೆ ಜೋಡಿಸಬಹುದು. ರಹಸ್ಯ ವಿಚಾರ ಮಾತನಾಡುವಾಗ ಗುಂಡಿ ಒತ್ತುವ ಮೂಲಕ ಈ ಉಪಕರಣವನ್ನು ಚಾಲೂ ಮಾಡಬಹುದು. ಆಗ ಕದ್ದು ಕೇಳುವವರಿಗೆ ಅರ್ಥರಹಿತ ಶಬ್ದ ಕೇಳಿಸುವುದು. ಸ್ಪಷ್ಟವಾಗಿ ಏನೂ ಕೇಳಿಸುವುದಿಲ್ಲ. ಇನ್ನೊಂದು ತುದಿಯ ಟೆಲಿಫೋನಿನಲ್ಲಿ ಗೊಂದಲಮಯ ಶಬ್ದಗಳನ್ನು ಆಡುಭಾಷೆಯಾಗಿ ಭಾಷಾಂತರಿಸುವ
ಉಪಕರಣವಿರುತ್ತದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.