ನವದೆಹಲಿ, ಜ. 29– ಬಹುಕಾಲದಿಂದ ಅನಿಶ್ಚಿತವಾಗಿದ್ದ ಶ್ರೀಲಂಕಾದಲ್ಲಿನ ಒಂದೂವರೆ ಲಕ್ಷ ಮಂದಿ ಭಾರತೀಯ ಸಂಜಾತರ ಭವಿಷ್ಯದ ಬಗ್ಗೆ ಭಾರತ ಮತ್ತು ಶ್ರೀಲಂಕಾ ಅಂತಿಮವಾಗಿ ಒಪ್ಪಂದ ಮಾಡಿಕೊಂಡಿವೆ.
ಶ್ರೀಲಂಕಾದಲ್ಲಿನ ಸುಮಾರು 8.25 ಲಕ್ಷ ಮಂದಿ ಭಾರತೀಯ ಸಂಜಾತರ ಭವಿಷ್ಯದ ಬಗ್ಗೆ 1964ರಲ್ಲಿ ಮಾಡಿಕೊಂಡ ಒಪ್ಪಂದದ ಅನುಷ್ಠಾನದ ಬಗ್ಗೆ ಎರಡೂ ದೇಶಗಳ ಪ್ರಧಾನಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ. ಉಳಿದಿದ್ದ ಒಂದೂವರೆ ಲಕ್ಷ ಮಂದಿಯಲ್ಲಿ 75 ಸಾವಿರ ಮಂದಿಗೆ ಶ್ರೀಲಂಕಾ ಈಗ ಪೌರತ್ವ ನೀಡುವುದು, 75 ಸಾವಿರ ಮಂದಿಯನ್ನು ಭಾರತ ಹಿಂದಕ್ಕೆ ಕರೆಸಿಕೊಳ್ಳುವುದು.
ಕಾಗದದ ಅಭಾವ ನೀಗಲು ರಾಜ್ಯ ಸರ್ಕಾರದ ಕ್ರಮ ಕಾರ್ಖಾನೆಗಳೊಡನೆ ಒಪ್ಪಂದ
ಬೆಂಗಳೂರು, ಜ. 29– ರಾಜ್ಯದಲ್ಲಿ ಜನತೆ ಎದುರಿಸುತ್ತಿರುವ ಬರವಣಿಗೆ ಹಾಗೂ ಮುದ್ರಣ ಕಾಗದದ ಅಭಾವ ನೀಗಿಸಲು ಸರ್ಕಾರ ಕೈಗೊಂಡ ಕ್ರಮದ ಫಲವಾಗಿ, ರಾಜ್ಯದ ಮೂರು (ದಾಂಡೇಲಿ, ಭದ್ರಾವತಿ ಹಾಗೂ ಮಂಡ್ಯ) ಕಾಗದದ ಕಾರ್ಖಾನೆಗಳು ತಮ್ಮ ಉತ್ಪನ್ನದಲ್ಲಿ ಶೇ 40ರಷ್ಟನ್ನು ಸರ್ಕಾರಕ್ಕೆ ಕೊಡಲು ಒಪ್ಪಿವೆಯೆಂದೂ, ಅದರ ಬಗ್ಗೆ ಸರ್ಕಾರದ ಸಹಿಯಾಗಿದೆಯೆಂದೂ ಕೈಗಾರಿಕಾ ಸಚಿವ ಶ್ರೀ ಎಸ್.ಎಂ. ಕೃಷ್ಣ ಅವರು ಇಂದು ವರದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.