ನವದೆಹಲಿ, ಜೂನ್ 16– ದೆಹಲಿಯ ಟೆಲಿಫೋನ್ ಸಲಹಾ ಸಮಿತಿ ಪುನರ್ರಚನೆಗೆ ಇನ್ನು ಎರಡು ವಾರ ಇದೆ. ಆ ಸಮಿತಿಯಲ್ಲಿ ಒಂದು ಜಾಗ ಗಿಟ್ಟಿಸಿಕೊಳ್ಳಲು ಈ ಬಾರಿ ಬಹಳ ನೂಕುನುಗ್ಗಲು. ಅದಕ್ಕೆ ನಾಮಕರಣ ಮಾಡುವ ಸಂಪರ್ಕಖಾತೆ ಮೇಲೆ ಆಸಕ್ತ ಜನರಿಂದ ಹಿಂದೆ ಎಂದು ಇಲ್ಲದಷ್ಟು ಒತ್ತಡ.
ಇಂಥವರನ್ನು ನಾಮಕರಣ ಮಾಡಿ; ಇವರು ಯೋಗ್ಯರು ಎಂದು ಶಿಫಾರಸು ಪತ್ರ ಹಾಗೂ ತಂತಿ ಸಂದೇಶಗಳ ಸುರಿಮಳೆಯೇ ಈಗ ಆಗಿದೆ. ಭೂಪನೊಬ್ಬ 40ಕ್ಕಿಂತ ಹೆಚ್ಚು ಜನ ಸಂಸತ್ ಸದಸ್ಯರಿಂದ ಶಿಫಾರಸು ಪತ್ರಗಳನ್ನು ಜಮಾಯಿಸಿ ಸಾದರ ಪಡಿಸಿದ್ದಾರೆ!
ಈಗ ಸಮಿತಿ ಸದಸ್ಯ ಸಂಖ್ಯೆ 43. ಅದನ್ನು 20 ಅಥವಾ 22ಕ್ಕೆ ಈ ಬಾರಿ ಇಳಿಸುತ್ತಾರೆ ಎನ್ನುವ ವದಂತಿಯೇ ಇಷ್ಟೊಂದು ಪೈಪೋಟಿಗೆ ಕಾರಣ.
ಪ್ರಾಮಾಣಿಕ ಬೇಕೆ?: ಹುಡುಕಿ ಫಲವಿಲ್ಲ
ಕಲ್ಕತ್ತ, ಜೂನ್ 16– ‘ಲಂಚ ರುಷುವತ್ತು ದೇಶದ ತುಂಬೆಲ್ಲಾ ಎಷ್ಟು ತುಂಬಿಕೊಂಡಿದೆ ಎಂದರೆ, ಲಂಚಗುಳಿ ಅಲ್ಲದವನು ಎಲ್ಲಾದರೂ ಸಿಗಬಹುದೇ ಎಂದು ಟಾರ್ಚ್ ಹಿಡಿದುಕೊಂಡು ಹುಡುಕಾಡಬೇಕು’ ಸಂಸತ್ತಿನಲ್ಲಿ ಸಂಸ್ಥಾ ಕಾಂಗ್ರೆಸ್ ಗುಂಪಿನ ನಾಯಕ ಎಸ್.ಎನ್. ಮಿಶ್ರ ಅವರು ಸಂಸ್ಥಾ ಎ.ಐ.ಸಿ.ಸಿ. ಅಧಿವೇಶನದಲ್ಲಿ ಇಂದು ಈ ಚಿತ್ರ ನೀಡಿದರು.
‘ಅವಿಭಜಿತ ಕಾಂಗ್ರೆಸ್ ಇದ್ದ ಕಾಲದಲ್ಲಿ ಈಗ ಇರುವುದರ ತದ್ವಿರುದ್ಧ ಪರಿಸ್ಥಿತಿ ಇತ್ತು. ಆಗ ಲಂಚಗುಳಿಯನ್ನು ಹುಡುಕಬೇಕಾದರೆ ತನಿಖೆ ಎಂಬ ಹಲವು ಸೆಲ್ಗಳನ್ನು ತುಂಬಿದ ಟಾರ್ಚ್ ಹೊತ್ತಿಸಿಕೊಂಡು ಹುಡುಕ
ಬೇಕಾಗಿತ್ತು’ ಎಂದು ಮಿಶ್ರ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.