ಹೆಚ್ಚುವರಿ ಜಮೀನು ಲೆಕ್ಕ ಮಾತ್ರ ಅವಶ್ಯ: ಸದ್ಯಕ್ಕೆ ವರ್ಗೀಕರಣ ಅನಗತ್ಯ
ಬೆಂಗಳೂರು, ಮೇ 29– ಕರ್ನಾಟಕ ಭೂಸುಧಾರಣಾ ಶಾಸನಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಇಂದು ಹೊರಡಿಸಿದ ಸುಗ್ರೀವಾಜ್ಞೆಯು, ರೈತರು ತಮ್ಮ ಹೆಚ್ಚುವರಿ ಜಮೀನಿನ ಪ್ರಮಾಣ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸುವಾಗ, ಜಮೀನು ವರ್ಗೀಕರಣ ವಿವರಗಳನ್ನು ಸಲ್ಲಿಸಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದೆ.
ಶಾಸನ ನಿಗದಿಪಡಿಸಿದ ಪರಿಮಿತಿಗಿಂತ ಹೆಚ್ಚಿರುವ ಜಮೀನನ್ನು ಸರ್ಕಾರಕ್ಕೆ ಘೋಷಿಸಲು ನೀಡಲಾಗಿದ್ದ ಅವಧಿಯು ನಾಳೆಗೆ ಮುಗಿಯಲಿದ್ದು, ಈ ಅವಧಿಯನ್ನು ಮತ್ತೆ ಮೂರು ತಿಂಗಳುಗಳ ಕಾಲ
ಸುಗ್ರೀವಾಜ್ಞೆಯು ವಿಸ್ತರಿಸಿದೆ.
ಗೋಲನ್ ದಿಬ್ಬದಲ್ಲಿ ಕದನವಿರಾಮಕ್ಕೆ ಇಸ್ರೇಲ್- ಸಿರಿಯಾ ಒಪ್ಪಿಗೆ
ವಾಷಿಂಗ್ಟನ್, ಮೇ 29– ಗೋಲನ್ ದಿಬ್ಬದಲ್ಲಿ ಕದನವಿರಾಮಕ್ಕೆ ಇಸ್ರೇಲ್ ಮತ್ತು ಸಿರಿಯಾ ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ನಿಕ್ಸನ್ ಇಂದು ಪ್ರಕಟಿಸಿದರು.
ಕದನವಿರಾಮಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಸಂಧಾನ ನಡೆಸಿದರು. ಕದನವಿರಾಮ ಒಪ್ಪಂದಕ್ಕೆ ಶುಕ್ರವಾರ ಉಭಯ ರಾಷ್ಟ್ರಗಳು ಸಹಿ ಹಾಕುವುವು ಎಂದು ತಿಳಿಸಿದ ನಿಕ್ಸನ್ ಅವರು, ಈ ಒಪ್ಪಂದವನ್ನು ‘ಪ್ರಮುಖ ರಾಜತಾಂತ್ರಿಕ ಸಾಧನೆ’ ಎಂದು ಕರೆದರು.
ಕಿಸಿಂಜರ್ ಅವರ ಮೂವತ್ಮೂರು ದಿನಗಳ ಸಂಧಾನ ಯತ್ನದ ನಂತರ ಉಭಯ ರಾಷ್ಟ್ರಗಳೂ ಕದನವಿರಾಮಕ್ಕೆ ಒಪ್ಪಿಕೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.