ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳು ಬಲೆಗೆ ಬೀಳುತ್ತಿದ್ದಂತೆಯೇ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಆರೋಪಿಗಳ ವಿಚಾರಣೆಯಿಂದ ಬಯಲಾಗಿರುವ ‘ದೊಡ್ಡವರು’ ಮತ್ತು ‘ಹಿರಿಯ ಸರ್’ಗಳ ಪತ್ತೆಗೆ ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ ಎಂಬುದು (ಪ್ರ.ವಾ., ಮೇ 1) ಅಚ್ಚರಿಯ ಬೆಳವಣಿಗೆಯಾಗಿದೆ. ತನಿಖಾಧಿಕಾರಿಗಳ ಮುಂದೆ ಆರೋಪಿಗಳು ‘ಹಿರಿಯ’ರ ಹೆಸರು ಬಾಯ್ಬಿಟ್ಟಿರುವ ಸಾಧ್ಯತೆ ಇದೆ. ನಿಷ್ಪಕ್ಷಪಾತ ತನಿಖೆ ನಡೆದರೆ ತನಿಖಾ ಸಂಸ್ಥೆ ಮತ್ತು ಅಧಿಕಾರಿಗಳ ಬಗ್ಗೆ ನಾಡಿನ ಜನರಲ್ಲಿ ವಿಶ್ವಾಸ ವೃದ್ಧಿಸುತ್ತದೆ. ಆದರೆ ಆಳುವವರು ಹಾಗೂ ಅಧಿಕಾರಿಗಳ ಕೈಕೆಳಗೇ ಕರ್ತವ್ಯ ನಿರ್ವಹಿಸುವ ಸಿಐಡಿ ಅಧಿಕಾರಿಗಳಿಗೆ ‘ದೊಡ್ಡವರು’ ಎನಿಸಿಕೊಂಡವರನ್ನು ಪಾರದರ್ಶಕ ರೀತಿಯಲ್ಲಿ ಪತ್ತೆ ಮಾಡಿ ಅವರ ಮುಖವಾಡ ಬಯಲಿಗೆಳೆಯಲು ಸಾಧ್ಯವಾಗುತ್ತದೆಯೇ? ಜನರಲ್ಲಿ ಇರುವ ಇಂತಹ ಅನುಮಾನವನ್ನು ಪ್ರಾಮಾಣಿಕ ತನಿಖೆಯ ಮೂಲಕ ದೂರ ಮಾಡುವ ಕೆಲಸ ತನಿಖಾಧಿಕಾರಿಗಳಿಂದ ನಡೆಯಲಿ.
- ನಾರಾಯಣರಾವ ಕುಲಕರ್ಣಿ,ಹಿರೇಅರಳಿಹಳ್ಳಿ, ಯಲಬುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.