ADVERTISEMENT

ವಾಚಕರ ವಾಣಿ: ಬಲಿಷ್ಠ ನ್ಯಾಯಾಂಗ ವ್ಯವಸ್ಥೆಯಿಂದ ಜನರಿಗೆ ನೆಮ್ಮದಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 1:11 IST
Last Updated 28 ಅಕ್ಟೋಬರ್ 2024, 1:11 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಬಲಿಷ್ಠ ನ್ಯಾಯಾಂಗ ವ್ಯವಸ್ಥೆಯಿಂದ ಜನರಿಗೆ ನೆಮ್ಮದಿ

ಬೇಲೆಕೇರಿ ಅದಿರು ಕಳ್ಳಸಾಗಣೆ ಪ್ರಕರಣದಲ್ಲಿ ಶಾಸಕ ಸತೀಶ್‌ ಸೈಲ್ ಸೇರಿದಂತೆ ಅಪರಾಧಿಗಳಿಗೆ ಜೈಲು ಶಿಕ್ಷೆ ಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಇದು ನ್ಯಾಯಾಂಗಕ್ಕೆ ದೊರೆತ ಜಯ, ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆ, ಅವರಿಗೂ ಶಿಕ್ಷೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ಸರಿಯಾಗಿದೆ. ಈ ಬೆಳವಣಿಗೆ ಈಗ ರಾಜ್ಯದ ಅನೇಕ ರಾಜಕಾರಣಿಗಳ ನಿದ್ದೆಗೆಡಿಸಿರಬಹುದು.

ADVERTISEMENT

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ, ಚಿತ್ರನಟ ದರ್ಶನ್ ಆರೋಪಿಯಾಗಿರುವ ರೇಣುಕಸ್ವಾಮಿ ಕೊಲೆ ಪ್ರಕರಣ, ಶಾಸಕ ಮುನಿರತ್ನ ಅವರದು ಎನ್ನಲಾದ ಅತ್ಯಾಚಾರ ಪ್ರಕರಣ
ದಂತಹ ಪ್ರಮುಖ ಸಂದರ್ಭಗಳಲ್ಲಿ ನ್ಯಾಯಾಂಗ ತೆಗೆದುಕೊಂಡ ನಿರ್ಧಾರಗಳು ಸಾಮಾನ್ಯ ಜನರಲ್ಲಿ ನ್ಯಾಯಾಂಗದ ಬಗ್ಗೆ ಹೆಚ್ಚು ವಿಶ್ವಾಸ ಮೂಡುವಂತೆ ಮಾಡಿವೆ. ನ್ಯಾಯಾಂಗ ಹೆಚ್ಚು ಬಲಿಷ್ಠವಾದರೆ ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಸಾಧ್ಯ. ರಾಜಕಾರಣಿಗಳು ಸಹ ಬುದ್ಧಿ ಕಲಿಯಲು ಅವಕಾಶವಾಗುತ್ತದೆ.

⇒ಬೂಕನಕೆರೆ ವಿಜೇಂದ್ರ, ಮೈಸೂರು

ಇಂತಹ ಭಾಷಾಭಿಮಾನ ನಮ್ಮಲ್ಲಿದೆಯೇ?

ಕೇಂದ್ರ ಸಚಿವ ರವನೀತ್‌ ಸಿಂಗ್‌ ಬಿಟ್ಟು ಅವರು ಹಿಂದಿಯಲ್ಲಿ ಬರೆದಿದ್ದ ಪತ್ರಕ್ಕೆ ಡಿಎಂಕೆ ರಾಜ್ಯಸಭಾ ಸಂಸದ ಎಂ.‌ಎಂ.‌ಅಬ್ದುಲ್ಲಾ ಅವರು ತಮಿಳಿನಲ್ಲಿ ಪ್ರತಿಕ್ರಿಯೆ ನೀಡಿ ಭಾಷಾಭಿಮಾನ ತೋರಿರುವುದು ಶ್ಲಾಘನೀಯ. ದಶಕಗಳ ಹಿಂದೆ ಅಚ್ಯುತ ಮೆನನ್‌ ಅವರು ಕೇರಳದ ಮುಖ್ಯಮಂತ್ರಿಯಾಗಿದ್ದಾಗ, ಉತ್ತರಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಅವರು ಹಿಂದಿಯಲ್ಲಿ ಬರೆದಿದ್ದ ಪತ್ರಕ್ಕೆ ಮಲಯಾಳ ಭಾಷೆಯಲ್ಲಿ ಉತ್ತರಿಸಿದ್ದರು. ಇಂತಹ ಭಾಷಾಭಿಮಾನದ ಒಂದಂಶವಾದರೂ ನಮ್ಮವರಿಗೆ ಇದ್ದಿದ್ದರೆ ಎಂದು ಕನ್ನಡಾಭಿಮಾನಿಗಳು ಅಲವತ್ತುಕೊಳ್ಳುತ್ತಿದ್ದಾರೆ. ಭಾಷಾ ಅಸ್ಮಿತೆಯ ದಿಸೆಯಲ್ಲಿ ನಮ್ಮ ಜನಪ್ರತಿನಿಧಿಗಳ ತುಟಿ ಎಂದೂ ಪಿಟಕ್ಕೆನ್ನುವುದಿಲ್ಲ. ತಾವು ರಾಷ್ಟ್ರೀಯವಾದಿಗಳು ಎಂದು ಬಿಂಬಿಸಿಕೊಳ್ಳಲು ಅವರು ಸದಾ ಪ್ರಯತ್ನಿಸುತ್ತಾರೆ. ನಮ್ಮಲ್ಲೂ ಪ್ರಬಲವಾದ ಪ್ರಾದೇಶಿಕ ಪಕ್ಷ ಇದ್ದಿದ್ದರೆ ಇಂತಹ ಸ್ಥಿತಿ ಇರುತ್ತಿರಲಿಲ್ಲವೇನೋ ಎನ್ನುವ ಪ್ರಜ್ಞಾವಂತರ ಅನಿಸಿಕೆಯಲ್ಲಿ ಅರ್ಥವಿದೆ.

⇒ರಮಾನಂದ ಶರ್ಮಾ, ಬೆಂಗಳೂರು

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮುನ್ನಾದಿನವೇ ಆಗಲಿ

ಮೂರು ದಿನ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ದಿನವು ಸಮ್ಮೇಳನದ ಅಧ್ಯಕ್ಷರ ಭವ್ಯ ಮೆರವಣಿಗೆ ಮತ್ತು ಉದ್ಘಾಟನೆಗಾಗಿಯೇ ಕಳೆದುಹೋಗುತ್ತದೆ. ಇದರಿಂದ, ನಿಗದಿಪಡಿಸಿದ ಗೋಷ್ಠಿಗಳು ಸಮಯಕ್ಕೆ ಸರಿಯಾಗಿ ಆರಂಭವಾಗುವುದಿಲ್ಲ. ಹೀಗಾಗಿ, ಇಡೀ ದಿನ ಸಮ್ಮೇಳನದ ಗೋಷ್ಠಿಗಳಿಗೆ ನಿಗದಿಪಡಿಸಿದ ಸಮಯ ಕಡಿಮೆಯಾಗುತ್ತಾ ಹೋಗುತ್ತದೆ. ಬಹಳಷ್ಟು ತಯಾರಿಯೊಂದಿಗೆ ಬರುವ ಭಾಷಣಕಾರರಿಗೆ ಸಮಯವೇ ಸಾಲುವುದಿಲ್ಲ. ಸಮ್ಮೇಳನದ ಮುನ್ನಾ ದಿನವೇ ಸಮ್ಮೇಳನದ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆಯನ್ನು ಸಂಜೆ ಸಮಯದಲ್ಲಿ ಮುಗಿಸಿ ಅವರನ್ನು ವೇದಿಕೆಗೆ ಸ್ವಾಗತ ಮಾಡುವುದು ಒಳ್ಳೆಯದು.

ಸಮ್ಮೇಳನವೆಂದರೆ ಭೂರಿ ಭೋಜನ ಎಂಬ ಮಾತು ಕೇಳಿಬರುತ್ತದೆ. ಕನ್ನಡ ನಾಡು– ನುಡಿಯ ಔತಣ ಸವಿಯಲು ಜನ ಬರುತ್ತಾರೆ. ಆದರೆ ಸಮ್ಮೇಳನಕ್ಕಿಂತ ಊಟದ ವಿಷಯವೇ ಈಚಿನ ದಿನಗಳಲ್ಲಿ ಮಹತ್ವ ಪಡೆಯುತ್ತಿದೆ, ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಸಮ್ಮೇಳನದಲ್ಲಿ ಉಚಿತ ಊಟದ ವ್ಯವಸ್ಥೆಗಿಂತ ಹೆಚ್ಚು ಹೋಟೆಲ್‌ಗಳನ್ನು ತೆರೆಸಿ, ಕನಿಷ್ಠ ದರ ನಿಗದಿಪಡಿಸಿ ಊಟದ ವ್ಯವಸ್ಥೆ ಮಾಡುವುದು ಸೂಕ್ತ ಎಂದು ಗುರು ಜಗಳೂರು ಅವರು ನೀಡಿರುವ ಸಲಹೆ (ವಾ.ವಾ., ಅ. 25) ಮಿತವ್ಯಯದ ದೃಷ್ಟಿಯಿಂದ ಉತ್ತಮವಾದುದು. ಸಮ್ಮೇಳನದ ಕಾರ್ಯಕಾರಿ ಸಮಿತಿ ಈ ಬಗ್ಗೆ ಪರಿಶೀಲಿಸಲಿ. ಕಾಲಕ್ಕೆ ತಕ್ಕಂತೆ ಸಮ್ಮೇಳನದ ಸ್ವರೂಪದಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ನುಡಿಹಬ್ಬವು ಸಾರ್ಥಕ್ಯ ಪಡೆಯುವುದಿಲ್ಲ.

⇒ಬಲ್ಲೇನಹಳ್ಳಿ ಮಂಜುನಾಥ್, ಕೆ.ಆರ್.ಪೇಟೆ

ಅನಧಿಕೃತ ಕಟ್ಟಡ: ಜನಪ್ರತಿನಿಧಿಗಳೂ ಹೊಣೆ

ಬೆಂಗಳೂರಿನ ಬಾಬು ಸಾ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದು ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಅನಧಿಕೃತ ಕಟ್ಟಡಗಳ ನಿರ್ಮಾಣವಾಗಬಾರದು, ಒಂದು ವೇಳೆ ನಿರ್ಮಿಸಿದರೆ ಅದಕ್ಕೆ ಸಂಬಂಧಪಟ್ಟ ಎಂಜಿನಿಯರ್‌ ಅನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ನಗರದಲ್ಲಿ ಅನಧಿಕೃತ ಕಟ್ಟಡಗಳು ತಲೆಯೆತ್ತಲು ಪಾಲಿಕೆ ಅಧಿಕಾರಿವರ್ಗದ ನಿರ್ಲಕ್ಷ್ಯವೇ ಕಾರಣ ಎನ್ನುವುದನ್ನು ಹೇಳಬೇಕಾಗಿಲ್ಲ. ಇಂಥ ನಿರ್ಲಕ್ಷ್ಯಕ್ಕೆ ಕಾರಣ ಏನಿರಬಹುದು ಎನ್ನುವುದರ ವಿಶ್ಲೇಷಣೆಯೂ ಅನಗತ್ಯ!

ಹೊರಮಾವು ಸಮೀಪದಲ್ಲಿ ನಿರ್ಮಾಣ ಹಂತದಲ್ಲಿನ ನಾಲ್ಕಾರು ಮಹಡಿಯ ಕಟ್ಟಡವೊಂದು ಬಿರುಕುಬಿಟ್ಟಿದೆ, ಕಮಲಾನಗರದಲ್ಲಿ ಕಟ್ಟಡದ ಬುಡದಲ್ಲೇ ಬಿರುಕು ಕಾಣಿಸಿಕೊಂಡಿದೆ ಎಂಬಂಥ ವರದಿಗಳು ಕಳಪೆ ಕಾಮಗಾರಿಗೆ ನಿದರ್ಶನ. ಅನುಮೋದಿತ ನಕ್ಷೆಯನ್ನು ಕಡೆಗಣಿಸಿ ಹೆಚ್ಚೆಚ್ಚು ಮಹಡಿಗಳ ನಿರ್ಮಾಣ ಸಾಮಾನ್ಯವಾಗಿದೆಯೆಂಬ ದೂರುಗಳು ಇದ್ದೇ ಇವೆ. ‘...ಇನ್ನುಮುಂದೆ ಯಾವುದೇ ಕಾರಣಕ್ಕೂ...’ ಎಂದು ಮುಖ್ಯಮಂತ್ರಿ ಹೇಳಿರುವುದರ ಅರ್ಥವೇನು? ಈಗಾಗಲೇ ನಿಯಮಗಳನ್ನು ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳು ಸುರಕ್ಷಿತ ಎಂದೇ? ನಗರದ ಪ್ರತಿ ಪ್ರದೇಶದಲ್ಲೂ ಈಗಾಗಲೇ ನಿರ್ಮಾಣಗೊಂಡಿರುವ ಬಹುಮಹಡಿ ಕಟ್ಟಡಗಳನ್ನು ಪಾಲಿಕೆಯು ಪರೀಕ್ಷಿಸಿ, ನಿರ್ಮಾಣದ ಕಾಯ್ದೆಬದ್ಧತೆಯ ಕುರಿತು ವರದಿ ನೀಡಬೇಕೆಂದು ಮುಖ್ಯಮಂತ್ರಿ ಆದೇಶ ನೀಡಬೇಕಿತ್ತು. ಈಗ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಕಾಯ್ದೆಬದ್ಧತೆ ಕುರಿತು ವರದಿ ನೀಡಬೇಕೆಂದು ಸ್ಪಷ್ಟಪಡಿಸಬೇಕಿತ್ತು. ನಗರದ ಶಾಸಕರು ಮತ್ತು ಸಂಸದರು ತಮ್ಮ ಕ್ಷೇತ್ರಗಳಲ್ಲಿ ನಿಯಮಗಳ ಉಲ್ಲಂಘನೆ ಆಗುತ್ತಿರುವುದನ್ನು ನೋಡಿಯೂ ಮೌನವಾಗಿ ಇರುವುದರ ಅರ್ಥವೇನು? ಕಾಯ್ದೆಯ ಪರಿಪಾಲನೆ ಆಗುತ್ತಿದೆಯೇ ಇಲ್ಲವೇ ಎನ್ನುವ ವಿಚಾರ ತಮಗೆ ಸೇರಿದ್ದಲ್ಲವೆಂಬ ಧೋರಣೆ ಅವರದಾದರೆ, ಜನಪ್ರತಿನಿಧಿ ಎಂಬ ಪರಿಕಲ್ಪನೆಗೆ ಅರ್ಥವೇ ಇಲ್ಲದಂತೆ ಆಗುತ್ತದೆ. ಆದ್ದರಿಂದ, ಅನಧಿಕೃತ ಕಟ್ಟಡಗಳ ನಿರ್ಮಾಣವು ಪ್ರಾಣಹಾನಿಗೆ ಕಾರಣವಾದಾಗ, ಜನಪ್ರತಿನಿಧಿಗಳೂ ಹೊಣೆಗಾರರು ಎಂದರೆ ತಪ್ಪಿಲ್ಲ. 

⇒ಸಾಮಗ ದತ್ತಾತ್ರಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.