ಜಗತ್ತಿನ ಯಾವ ಅತ್ತರಿಗೂ ಇರದ ಘಮ, ಮಣ್ಣಿನ ವಾಸನೆಗಿದೆ. ಬಿಸಿಲ ಬೇಗೆಯ ಮಣ್ಣಿಗೆ ಒಂದ್ಹನಿ ಮಳೆ ಸಿಂಚನವಾದಾಗ, ಭೂಮಿಯಿಂದೇಳುವ ಧಗೆ, ಬದುಕಿನ ತಾಪವನ್ನೂ ಹೆಚ್ಚಿಸುತ್ತದೆ. ಮಳೆ ಹನಿಯ ಸಿಂಚನ, ಈ ಬಿರುಬೇಸಿಗೆಯ ತಾಪ ಕಡಿಮೆ ಮಾಡುತ್ತ ರೋಮಾಂಚನ ಮೂಡಿಸುತ್ತದೆ.
ಮಳೆಯನ್ನು ಆನಂದಿಸುವುದೂ ಒಂದು ಕಲೆ. ಬಣ್ಣಬಣ್ಣದ ಕೊಡೆ ಹಿಡಿದು ಹೊರಟರೆ ತಲೆ ಮಾತ್ರ ಸುರಕ್ಷಿತ. ಉಳಿದೆಡೆಯೆಲ್ಲ ಹನಿಹನಿ ನೀರು ತೊಟ್ಟಿಕ್ಕುತ್ತಲೇ ಮಳೆಗೆ ಮೈಚಾಚುವಂತೆ ಮಾಡುತ್ತವೆ. ಕೊಡೆಹಿಡಿದ ಕೈಯೊಂದಿಗೆ ತೋಳು ಬೆಸೆದುಕೊಂಡು ಹೆಜ್ಜೆ ಹಾಕುತ್ತಿದ್ದರೆ ಮನದೊಳಗೆಲ್ಲ ಮುಂಗಾರು ಮಳೆಯೇ ಹಾಡಿನ ಅನುರಣನ. ಹಿಡಿದ ಕೊಡೆ, ಬಿರುಗಾಳಿಗೆ ಭರ್ ಎಂದು ಉಲ್ಟಾ ಆದರೆ ಅದನ್ನ ಹಿಡೀಬೇಕಾ, ಮಡಚಬೇಕಾ ಎಂಬ ಗೊಂದಲದೊಂದಿಗೇ ಹೆಜ್ಜೆಹಾಕುತ್ತೇವೆ..
ಅಮ್ಮನೊಟ್ಟಿಗೆ ಹೆಜ್ಜೆಹಾಕುವಾಗ, ಅಮ್ಮನ ದೇಹದ ಬಿಸುಪು ತಾಗಲಿ ಎಂದು ಒತ್ತೊತ್ತಾಗಿ ನಡೆದುಹೋಗುವುದು, ನಾನು ನೆನೆದರೂ ಚಿಂತಿಲ್ಲ, ಕರುಳಕುಡಿಗೆ ನೀರು ತಾಕದಿರಲಿ ಎಂದು ದೇವರಿಗೆ ಛತ್ರಿ ಹಿಡಿದಂತೆ ಹಿಡಿದು ಹೋಗುವ ಅಪ್ಪ.. ಧರೆಗಿಳಿದ ಮಳೆ, ಬರೀ ತಂಪನ್ನಷ್ಟೇ ತರದು, ಎದೆಹಸಿರಾಗಿಸುವ ಹಲವಾರು ನೆನಪುಗಳನ್ನು ಹಿಡಿದಿಡುತ್ತದೆ. ಯುವ ಹೃದಯಗಳಲ್ಲಿ ಯೇ ರಾತ್ ಭೀಗಿ.. ಭೀಗಿ.. ಹಾಡು ನೆನಪಾದರೆ, ಹದಿಹರೆಯದ ಯುವತಿಯರ ಹೆಜ್ಜೆಗಳು ಟಿಪ್ ಟಿಪ್ ಬರಸಾ ಪಾನಿ ಹಾಡಿಗೆ ಮಿಡಿಯುತ್ತವೆ.
ಮಳೆಯಲಿ ನೆನೆದು ಮನೆ ಸೇರಿದಾಗ ನೆನಪುಗಳ ಮೆರವಣಿಗೆ ಸಾಲು ಸಾಲು. ಆ ಸಾಲಿಗೆ ಇನ್ನೊಂದು ಮಳೆ ಸೇರ್ಪಡೆಯಾಗುತ್ತದೆ. ಮಳೆಯ ನಡುವಿನ ಸಂಭ್ರಮದ ಕ್ಷಣಗಳನ್ನು ಪ್ರಜಾವಾಣಿಯ ಎಂ.ಎಸ್. ಮಂಜುನಾಥ್ ಸೆರೆ ಹಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.