ADVERTISEMENT

ದುಲೀಪ್ ಟ್ರೋಫಿ ಕ್ರಿಕೆಟ್: ಮಯಂಕ್, ಪ್ರಥಮ ಶತಕದ ಜೊತೆಯಾಟ

ದುಲೀಪ್ ಟ್ರೋಫಿ ಕ್ರಿಕೆಟ್: ದೇವದತ್ತ ಪಡಿಕ್ಕಲ್ ಏಕಾಂಗಿ ಹೋರಾಟ

ಪಿಟಿಐ
Published 13 ಸೆಪ್ಟೆಂಬರ್ 2024, 14:52 IST
Last Updated 13 ಸೆಪ್ಟೆಂಬರ್ 2024, 14:52 IST
ಮಯಂಕ್ ಅಗರವಾಲ್ ಬ್ಯಾಟಿಂಗ್ ವೈಖರಿ   –ಎಎಫ್‌ಪಿ ಚಿತ್ರ
ಮಯಂಕ್ ಅಗರವಾಲ್ ಬ್ಯಾಟಿಂಗ್ ವೈಖರಿ   –ಎಎಫ್‌ಪಿ ಚಿತ್ರ   

ಅನಂತಪುರ: ಕರ್ನಾಟಕದ ಮಯಂಕ್ ಅಗರವಾಲ್ ನಾಯಕತ್ವದ ಭಾರತ ಎ ತಂಡವು ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ಎರಡನೇ ದಿನದಾಟದ ಮುಕ್ತಾಯಕ್ಕೆ 222 ರನ್‌ಗಳ ಮುನ್ನಡೆ ಸಾಧಿಸಿದೆ. 

ಗುರುವಾರ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡವು 290 ರನ್‌ ಗಳಿಸಿತು. ಅದಕ್ಕುತ್ತರವಾಗಿ ಭಾರತ ಡಿ ತಂಡವು 52.1 ಓವರ್‌ಗಳಲ್ಲಿ 183 ರನ್ ಗಳಿಸಿ, 107 ರನ್‌ಗಳ ಹಿನ್ನಡೆ ಅನುಭವಿಸಿತು.

ಎರಡನೇ ದಿನವಾದ ಶುಕ್ರವಾರ ಕನ್ನಡಿಗ ದೇವದತ್ತ ಪಡಿಕ್ಕಲ್ (92; 124ಎ, 4X15) ಅವರ ಏಕಾಂಗಿ ಹೋರಾಟವು ತಂಡಕ್ಕೆ ಮುನ್ನಡೆ ಕೊಡಿಸಲು ಸಾಕಾಗಲಿಲ್ಲ. ಉಳಿದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಎ ತಂಡದ  ಎಡಗೈ ವೇಗಿ ಖಲೀಲ್ ಅಹಮದ್ (39ಕ್ಕೆ3) ಮತ್ತು ಅಕೀಬ್ ಖಾನ್ (41ಕ್ಕೆ3) ಮಿಂಚಿದರು.  

ADVERTISEMENT

ಎರಡನೇ ಇನಿಂಗ್ಸ್‌ನಲ್ಲಿ ನಾಯಕ ಮಯಂಕ್  (56; 87ಎ, 4X8) ಮತ್ತು ಪ್ರಥಮ ಸಿಂಗ್ (ಬ್ಯಾಟಿಂಗ್ 59; 82ಎ, 4X6) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 115 ರನ್ ಸೇರಿಸಿದರು. ಇದರಿಂದಾಗಿ ಮಯಂಕ್ ಬಳಗವು ಎದುರಾಳಿ ಪಡೆಗೆ ಬೃಹತ್ ಗುರಿ ನೀಡುವ ವಿಶ್ವಾಸದಲ್ಲಿದೆ. ಮಯಂಕ್ ಅಗರವಾಲ್ ಅವರು ಇನಿಂಗ್ಸ್‌ನ 29ನೇ ಓವರ್‌ನಲ್ಲಿ ಬೌಲರ್‌ ಶ್ರೇಯಸ್ ಅಯ್ಯರ್ ಅವರಿಗೇ ಕ್ಯಾಚಿತ್ತು ನಿರ್ಗಮಿಸಿದರು. ಇದರಿಂದಾಗಿ ಜೊತೆಯಾಟ ಮುರಿಯಿತು. ಇನಿಂಗ್ಸ್‌ಗೆ ತೆರೆ ಬಿತ್ತು.

ಮೊದಲ ದಿನದಾಟದಲ್ಲಿ ಬ್ಯಾಟಿಂಗ್ ಮಾಡಿದ ಭಾರತ ಎ ತಂಡಕ್ಕೆ ಆಸರೆಯಾಗಿದ್ದ ಶಮ್ಸ್‌ ಮುಲಾನಿ (89; 187ಎ) ಅವರಿಗೆ ಶತಕ ಪೂರೈಸುವ ಅವಕಾಶವನ್ನು ಬೌಲರ್‌ಗಳು ನೀಡಲಿಲ್ಲ. ಇದರಿಂದಾಗಿ ತಂಡದ ಇನಿಂಗ್ಸ್‌ಗೆ ಬೇಗ ತೆರೆಬಿತ್ತು. 

ಆದರೆ, ಡಿ ತಂಡದ ನಾಯಕ ಶ್ರೇಯಸ್ ಸೇರಿದಂತೆ ಪ್ರಮುಖ ಬ್ಯಾಟರ್‌ಗಳು ಎಡವಿದರು. ದೇವದತ್ತ, ಯಶ್ ದುಬೆ (14 ರನ್), ರಿಕಿ ಭುಯ್ (23 ರನ್) ಮತ್ತು ಹರ್ಷಿತ್ ರಾಣಾ (31 ರನ್) ಅವರು ಮಾತ್ರ ಎರಡಂಕಿ ಮೊತ್ತ ತಲುಪಿದರು. 

ಸಂಕ್ಷಿಪ್ತ ಸ್ಕೋರು: ಭಾರತ ಎ: ಮೊದಲ ಇನಿಂಗ್ಸ್: 290; ಭಾರತ ಡಿ: 52.1 ಓವರ್‌ಗಳಲ್ಲಿ 183 (ದೇವದತ್ತ ಪಡಿಕ್ಕಲ್ 92, ಹರ್ಷಿತ್ ರಾಣಾ 31, ಖಲೀಲ್ ಅಹಮದ್ 39ಕ್ಕೆ3, ಅಕೀಬ್ ಖಾನ್ 41ಕ್ಕೆ3) ಎರಡನೇ ಇನಿಂಗ್ಸ್: ಭಾರತ ಎ: 28.1 ಓವರ್‌ಗಳಲ್ಲಿ 1 ವಿಕೆಟ್‌ಗೆ 115 (ಮಯಂಕ್ ಅಗರವಾಲ್ 56, ಪ್ರಥಮ್ ಸಿಂಗ್ ಬ್ಯಾಟಿಂಗ್ 59) 

ಅಭಿಮನ್ಯು ಬಳಗದ ಮರುಹೋರಾಟ

ಅನಂತಪುರ: ಭಾರತ ಬಿ ತಂಡದ ಆರಂಭಿಕ ಜೋಡಿ ಅಭಿಮನ್ಯು ಈಶ್ವರನ್ ಮತ್ತು ಎನ್. ಜಗದೀಶನ್ ಅವರು ಶತಕದ ಜೊತೆಯಾಟದ ಮೂಲಕ ಭಾರತ ಸಿ ತಂಡದ ಬೃಹತ್ ಮೊತ್ತಕ್ಕೆ ಎದುರಾಗಿ ಮರುಹೋರಾಟ ನಡೆಸಿದ್ದಾರೆ. ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತ ಸಿ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿರುವ 525 ರನ್‌ಗಳಿಗೆ ಉತ್ತರವಾಗಿ ಬಿ ತಂಡವು ವಿಕೆಟ್ ನಷ್ಟವಿಲ್ಲದೇ 124 ರನ್ ಗಳಿಸಿದೆ. ಅಭಿಮನ್ಯು (ಬ್ಯಾಟಿಂಗ್ 51; 91ಎ 4X4 6X1) ಮತ್ತು ಜಗದೀಶನ್ (ಬ್ಯಾಟಿಂಗ್ 67; 126ಎ 4X8) ಕ್ರೀಸ್‌ನಲ್ಲಿದ್ದಾರೆ. ಗುರುವಾರ ನಡೆದ ಮೊದಲ ದಿನದಾಟದಲ್ಲಿ ಇಶಾನ್ ಕಿಶನ್ ಶತಕ ಗಳಿಸಿದ್ದರು. ನಂತರ ಇಂದ್ರಜೀತ್ (78 ರನ್ ) ಮತ್ತು ಮಾನವ ಸುತಾರ್ (82; 156ಎ) ಅವರ ಅರ್ಧಶತಕಗಳಿಂದಾಗಿ ಭಾರತ ಸಿ ತಂಡವು ದೊಡ್ಡ ಮೊತ್ತ ಗಳಿಸಿತು.  ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಸಿ: 124.1 ಓವರ್‌ಗಳಲ್ಲಿ 525 (ಋತುರಾಜ್ ಗಾಯಕವಾಡ 58 ಇಂದ್ರಜೀತ್ 78 ಮಾನವ ಸುತಾರ್ 82 ಅನ್ಷುಲ್ ಕಾಂಬೋಜ್ 38 ಮುಕೇಶ್ ಕುಮಾರ್ 126ಕ್ಕೆ4 ರಾಹುಲ್ ಚಾಹರ್ 73ಕ್ಕೆ4) ಭಾರತ ಬಿ: 36 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 124 (ಅಭಿಮನ್ಯು ಈಶ್ವರನ್ ಬ್ಯಾಟಿಂಗ್ 51 ಎನ್. ಜಗದೀಶನ್ ಬ್ಯಾಟಿಂಗ್ 67) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.