ADVERTISEMENT

ಟಿ20 ಸರಣಿ | ಲಂಕಾ ವಿರುದ್ಧ ಅಂತಿಮ ಪಂದ್ಯ ಇಂದು: ಭಾರತಕ್ಕೆ ಕ್ಲೀನ್‌ಸ್ವೀಪ್ ಗುರಿ

ಪಿಟಿಐ
Published 30 ಜುಲೈ 2024, 0:30 IST
Last Updated 30 ಜುಲೈ 2024, 0:30 IST
   

ಪೆಲ್ಲೆಕೆಲೆ: ನೂತನ ಕೋಚ್‌ ಗೌತಮ್ ಗಂಭೀರ್ ಮತ್ತು ಹೊಸ ನಾಯಕ ಸೂರ್ಯಕುಮಾರ್ ಯಾದವ್‌ ಅವರ ಸಂಯೋಜನೆಯಲ್ಲಿ ಭಾರತ ತಂಡ ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 2–0 ಮುನ್ನಡೆ ಪಡೆದಿದ್ದು ಉತ್ತಮ ಆರಂಭ ಮಾಡಿದೆ. ಮಂಗಳವಾರ ನಡೆಯುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲೂ ಭಾರತ ತಂಡವು ಪ್ರಾಬಲ್ಯ ಮುಂದುವರಿಸಿ ಸರಣಿಯನ್ನು ‘ವೈಟ್‌ ವಾಷ್‌’ ಮಾಡುವ ಗುರಿಯಲ್ಲಿದೆ.

ಆತಿಥೇಯ ಶ್ರೀಲಂಕಾ ತಂಡವು ಮುಖಭಂಗ ತಪ್ಪಿಸಬೇಕಾದ ಒತ್ತಡದಲ್ಲಿದೆ. ಮೊದಲ ಪಂದ್ಯದಲ್ಲಿ 43 ರನ್‌ಗಳಿಂದ ಗೆದ್ದ ಭಾರತ, ಭಾನುವಾರ ಮಳೆಯಿಂದ ಅಡಚಣೆಗೊಳಗಾದ ಎರಡನೇ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಜಯಿಸಿತ್ತು.

ಎರಡೂ ಪಂದ್ಯಗಳಲ್ಲಿ ಲಂಕಾ ತಂಡ ಬಿರುಸಿನ ಆರಂಭ ಪಡೆದರೂ ನಂತರ ಅದೇ ವೇಗದಲ್ಲಿ ಸಾಗದೇ ಮಧ್ಯಮ ಹಂತದ ಓವರುಗಳಲ್ಲಿ ಕುಸಿದಿತ್ತು. ಭಾನುವಾರ ಪುರುಷರ ತಂಡ ಸೋತರೆ, ದ್ವೀಪರಾಷ್ಟ್ರದ ಮಹಿಳೆಯರ ತಂಡ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತದ ಮೇಲೆ ಗೆದ್ದು ಮೊದಲ ಬಾರಿ ಟ್ರೋಫಿ ಜಯಿಸಿತ್ತು.

ADVERTISEMENT

ಭಾರತ ತಂಡ ಯೋಜನೆಗಳನ್ನು ರೂಪಿಸುವಲ್ಲಿ, ಕೌಶಲದ ವಿಷಯದಲ್ಲಿ ಮತ್ತು ಒತ್ತಡದ ಸನ್ನಿವೇಶವನ್ನು ನಿಭಾಯಿಸುವಲ್ಲಿ ಎದುರಾಳಿಯನ್ನು ಮೀರಿಸಿದೆ. ತಂಡ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದೆ.

ಸೂರ್ಯಕುಮಾರ್ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಬೌಲಿಂಗ್‌ ಬದಲಾವಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ಬ್ಯಾಟಿಂಗ್‌ನಲ್ಲೂ ಬಿರುಸಿನ 58 ಮತ್ತು 26 ರನ್ ಗಳಿಸಿದ್ದಾರೆ.

ಕತ್ತು ನೋವಿನಿಂದಾಗಿ ಉಪನಾಯಕ ಶುಭಮನ್ ಗಿಲ್ ಎರಡನೇ ಪಂದ್ಯದಲ್ಲಿ ಆಡಿರಲಿಲ್ಲ. ಅವರು ಮೂರನೇ ಪಂದ್ಯಕ್ಕೆ ಫಿಟ್‌ ಆಗಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಅವರ ಬದಲು ಅವಕಾಶ ಪಡೆದ ಸಂಜು ಸ್ಯಾಮ್ಸನ್‌ ವಿಫಲರಾಗಿದ್ದರು. ಇನ್ನೊಂದೆಡೆ ಮತ್ತೊಬ್ಬ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್‌ ಯಶಸ್ಸು ಪಡೆದಿದ್ದಾರೆ.

ಲಂಕಾ ಕಡೆ ಪಥುಮ್ ನಿಸಾಂಕ (111 ರನ್) ಮತ್ತು ಕುಶಾಲ್ ಪೆರೆರಾ (73) ಬಿರುಸಿನ ಆಟವಾಡಿದ್ದಾರೆ. ಆದರೆ ಉತ್ತಮ ಆರಂಭದ ಲಾಭವನ್ನು ಮಧ್ಯಮ ಕ್ರಮಾಂಕ ಪಡೆದಿಲ್ಲ. ಸ್ಪಿನ್ನರ್‌ಗಳೆದುರು ತಂಡ ಪರದಾಡಿದೆ. ಎರಡನೇ ಪಂದ್ಯದಲ್ಲಿ ಸ್ಪಿನ್ನರ್‌ ರವಿ ಬಿಷ್ಣೋಯಿ ಮೂರು ವಿಕೆಟ್‌ ಪಡೆದಿದ್ದರು.

ಲಂಕಾ ತಂಡವು ಬೌಲರ್‌ಗಳಿಂದ ಉತ್ತಮ ಪ್ರದರ್ಶನವನ್ನು ಎದುರುನೋಡುತ್ತಿದೆ.

ಪಂದ್ಯ ಆರಂಭ: ರಾತ್ರಿ 7.00

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.