ADVERTISEMENT

ರಣಜಿ ಸೆಮಿಫೈನಲ್: ಅಲ್ಪಮೊತ್ತಕ್ಕೆ ಕುಸಿದ ತಮಿಳುನಾಡು

ಪಿಟಿಐ
Published 2 ಮಾರ್ಚ್ 2024, 13:34 IST
Last Updated 2 ಮಾರ್ಚ್ 2024, 13:34 IST
ಮುಂಬೈ ತಂಡದ ವೇಗಿ ತುಷಾರ್ ದೇಶಪಾಂಡೆ  –ಪಿಟಿಐ ಚಿತ್ರ
ಮುಂಬೈ ತಂಡದ ವೇಗಿ ತುಷಾರ್ ದೇಶಪಾಂಡೆ  –ಪಿಟಿಐ ಚಿತ್ರ   

ಮುಂಬೈ: ತುಷಾರ್ ದೇಶಪಾಂಡೆ (24ಕ್ಕೆ3) ಮತ್ತು ಶಾರ್ದೂಲ್ ಠಾಕೂರ್ (48ಕ್ಕೆ2) ಅವರ ಅಮೋಘ ಬೌಲಿಂಗ್‌ನಿಂದಾಗಿ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಮುಂಬೈ ತಂಡವು  ಮೊದಲ ದಿನದ ಗೌರವ ಗಳಿಸಿತು. 

ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ಆರಂಭವಾದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ  ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡವು 64.1 ಓವರ್‌ಗಳಲ್ಲಿ 146 ರನ್‌ಗಳ ಅಲ್ಪಮೊತ್ತ ಗಳಿಸಿತು. ವಿಜಯಶಂಕರ್ (44 ರನ್) ಮತ್ತು ವಾಷಿಂಗ್ಟನ್ ಸುಂದರ್ (43 ರನ್) ಅವರಿಬ್ಬರನ್ನು ಬಿಟ್ಟರೆ ಉಳಿದ ಬ್ಯಾಟರ್‌ಗಳು ವಿಫಲರಾದರು. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ತಮಿಳುನಾಡು ತಂಡದ ನಾಯಕ ಬಿ. ಸಾಯಿಕಿಶೋರ್ ನಿರ್ಧಾರವು ಫಲ ನೀಡಲಿಲ್ಲ. ಮುಂಬೈ ತಂಡದ ತುಷಾರ್ ಮತ್ತು ಶಾರ್ದೂಲ್ ಅವರ ಸ್ವಿಂಗ್ ದಾಳಿಯ ಮುಂದೆ ತತ್ತರಿಸಿತು. 

ADVERTISEMENT

ಇದಕ್ಕುತ್ತರವಾಗಿ ಮುಂಬೈ ತಂಡದ ಇನಿಂಗ್ಸ್‌ ಆರಂಭಿಸಿದ್ದು, ಆಘಾತ ಅನುಭವಿಸಿದೆ. ದಿನದಾಟದ ಮುಕ್ತಾಯಕ್ಕೆ 17 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 45 ರನ್‌ ಗಳಿಸಿದೆ. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಆರಂಭಿಕ ಬ್ಯಾಟರ್ ಪೃಥ್ವಿ ಶಾ (5 ರನ್) ಅವರು ಕುಲದೀಪ್ ಸೇನ್ ಎಸೆತವನ್ನು ಆಡುವ ಭರದಲ್ಲಿ ಇಂದ್ರಜೀತ್‌ಗೆ ಕ್ಯಾಚಿತ್ತರು.

ಇದಾಗಿ 12 ಓವರ್‌ಗಳಾದ ನಂತರ ಸಾಯಿಕಿಶೋರ್ ಬೌಲಿಂಗ್‌ನಲ್ಲಿ ಮುಂಬೈನ ಭುಪೇನ್ ಲಾಲ್ವಾನಿ (15) ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. 

ಸಂಕ್ಷಿಪ್ತ ಸ್ಕೋರ್: ಬಾಂದ್ರಾ–ಕುರ್ಲಾ ಕಾಂಪ್ಲೆಂಕ್ಸ್, ಮುಂಬೈ: ಮೊದಲ ಇನಿಂಗ್ಸ್:   ತಮಿಳುನಾಡು: 64.1 ಓವರ್‌ಗಳಲ್ಲಿ 146 (ವಿಜಯಶಂಕರ್ 44, ವಾಷಿಂಗ್ಟನ್ ಸುಂದರ್ 43, ಶಾರ್ದೂಲ್ ಠಾಕೂರ್ 48ಕ್ಕೆ2, ತುಷಾರ್ ದೇಶಪಾಂಡೆ 24ಕ್ಕೆ3, ತನುಷ್ ಕೋಟ್ಯಾನ್ 10ಕ್ಕೆ2) ಮುಂಬೈ: 17 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 45 (ಭುಪೇನ್ ಲಾಲ್ವಾನಿ 15, ಮುಷೀರ್ ಖಾನ್ ಔಟಾಗದೆ 24, ಕುಲದೀಪ್ ಸೇನ್ 25ಕ್ಕೆ1, ಸಾಯಿ ಕಿಶೋರ್ 3ಕ್ಕೆ1) 

ಖಾನ್ ‘ಆವೇಶ’ಕ್ಕೆ ವಿದರ್ಭ ತತ್ತರ

ನಾಗ್ಪುರ: ಇನ್ನೊಂದು ಸೆಮಿಫೈನಲ್‌ನಲ್ಲಿ  ಮಧ್ಯಪ್ರದೇಶದ ವೇಗಿ ಆವೇಶ್ ಖಾನ್ ಅವರ (49ಕ್ಕೆ4) ಅವರ ದಾಳಿಯ ಮುಂದೆ ಆತಿಥೇಯ ವಿದರ್ಭ ತಂಡವು ಸಾಧಾರಣ ಮೊತ್ತಕ್ಕೆ ಕುಸಿಯಿತು.  ಇಲ್ಲಿಯ ಸಿವಿಲ್ ಲೈನ್ಸ್ ಮೈದಾನದಲ್ಲಿ  ಟಾಸ್ ಗೆದ್ದ ವಿದರ್ಭ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಡದಲ್ಲಿರುವ ಕರ್ನಾಟಕದ ಕರುಣ್ ನಾಯರ್ (63; 105ಎ 4X9) ಅವರ ಅರ್ಧಸತಕ ಗಳಿಸಿದರು. ವಿದರ್ಭ 56.4 ಓವರ್‌ಗಳಲ್ಲಿ 170 ರನ್ ಗಳಿಸಿತು.  ಇದಕ್ಕುತ್ತರವಾಗಿ ಮಧ್ಯಪ್ರದೇಶ ತಂಡವು ದಿನದಾಟದ ಮುಕ್ತಾಯಕ್ಕೆ 20 ಓವರ್‌ಗಳಲ್ಲಿ 1 ವಿಕೆಟ್‌ಗೆ 47 ರನ್ ಗಳಿಸಿತು. ಹಿಮಾಂಶು ಮಂತ್ರಿ (ಔಟಾಗದೆ 26) ಮತ್ತು ಹರ್ಷಗೌಳಿ  (ಬ್ಯಾಟಿಂಗ್ 10) ಕ್ರೀಸ್‌ನಲ್ಲಿದ್ದಾರೆ.  ಆರಂಭಿಕ ಬ್ಯಾಟರ್ ಯಶ್ ದುಬೆ  ಅವರ ವಿಕೆಟ್‌ ಅನುಭವಿ ವೇಗಿ ಉಮೇಶ್ ಯಾದವ್ ಅವರ ಖಾತೆ ಸೇರಿತು. 

ಮೊದಲ ಇನಿಂಗ್ಸ್: 56.4 ಓವರ್‌ಗಳಲ್ಲಿ 170 (ಅಥರ್ವ್ ತೈಡೆ 39 ಕರುಣ್ ನಾಯರ್ 63 ಆವೇಶ್ ಖಾನ್ 49ಕ್ಕೆ4 ಕುಲವಂತ್ ಕೆಜ್ರೊಲಿಯಾ 38ಕ್ಕೆ2 ವೆಂಕಟೇಶ್ ಅಯ್ಯರ್ 28ಕ್ಕೆ2) ಮಧ್ಯಪ್ರದೇಶ: 20 ಓವರ್‌ಗಳಲ್ಲಿ 1 ವಿಕೆಟ್‌ಗೆ 47 (ಹಿಮಾಂಶು ಮಂತ್ರಿ 26 ಹರ್ಷ ಗೌಳಿ ಔಟಾಗದೆ 10 ಯಶ್ ದುಬೆ 11 ಉಮೇಶ್ ಯಾದವ್ 18ಕ್ಕೆ1) 

ಮಧ್ಯಪ್ರದೇಶದ ಆವೇಶ್ ಖಾನ್  ಅವರು ವಿಕೆಟ್ ಗಳಿಸಿ ಸಂಭ್ರಮಿಸಿದರು  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.