ರಾಂಚಿ: ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಕ್ರೀಡೆಯಲ್ಲಿ ತೊಡಗಲು ಪ್ರೋತ್ಸಾಹಿಸಿ, ಬೆಂಬಲಿಸಬೇಕು. ಅವರು ಪೋಷಕರ ಮುಖದಲ್ಲಿ ನಗುವನ್ನು ತರುತ್ತಾರೆ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದರು.
ಜಿಲ್ಲೆಯ ಒರ್ಮಾಂಜಿ ಬ್ಲಾಕ್ನಲ್ಲಿರುವ ಯುವ ಫೌಂಡೇಶನ್ನ ಬಾಲಕಿಯರ ಫುಟ್ಬಾಲ್ ಆಟಗಾರರನ್ನು ಪ್ರೋತ್ಸಾಹಿಸಲು ಸಚಿನ್ ತೆಂಡೂಲ್ಕರ್ ಮತ್ತು ಅವರ ಪತ್ನಿ ಅಂಜಲಿ ರಾಂಚಿಗೆ ಆಗಮಿಸಿದ್ದಾರೆ.
ಫುಟ್ಬಾಲ್ ಆಟಗಾರ್ತಿಯರಿಗೆ ತರಬೇತಿ ನೀಡಲು ಮತ್ತು ಉತ್ತೇಜಿಸಲು ಯುವ ಮತ್ತು ಸಚಿನ್ ತೆಂಡೂಲ್ಕರ್ ಫೌಂಡೇಶನ್ ಇಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿವೆ.
ಯುವ ಫೌಂಡೇಶನ್ನ ಫುಟ್ಬಾಲ್ ಆಟಗಾರ್ತಿಯರೊಂದಿಗೆ ರುಕ್ಕಾ ಅಣೆಕಟ್ಟಿನ ಬಳಿ ಇರುವ ತಮ್ಮ ಶಾಲೆಯಲ್ಲಿ ಸಚಿನ್ ಮತ್ತು ಅವರ ಪತ್ನಿ ಸಂವಾದ ನಡೆಸಿದರು. ‘ಮಕ್ಕಳು ಕಷ್ಟಪಟ್ಟು ಕೆಲಸ ಮಾಡುವುದನ್ನು ನೋಡಿದೆ. ನನ್ನ ಬಾಲ್ಯವನ್ನೂ ನೆನಪಿಸಿಕೊಂಡೆ’ ಎಂದು ತೆಂಡೂಲ್ಕರ್ ಹೇಳಿದರು.
‘ನಾನು ಅನೇಕ ಮಕ್ಕಳಿಂದ ಸ್ಫೂರ್ತಿ ಪಡೆದಿದ್ದೇನೆ. ಏಕೆಂದರೆ ಈ ಪ್ರಯಾಣವು ಸುಲಭವಲ್ಲ. ಅವರು ಫುಟ್ಬಾಲ್ ಆಡಲು ಹೋಗುತ್ತಾರೆ, ಇದು ಕೆಲವೊಮ್ಮೆ ಪೋಷಕರಿಗೆ ಇಷ್ಟವಾಗುವುದಿಲ್ಲ. ಮಕ್ಕಳನ್ನು ಪ್ರೋತ್ಸಾಹಿಸಿ, ಬೆಂಬಲಿಸಬೇಕು ಎಂದು ಹೇಳಲು ಬಯಸುತ್ತೇನೆ. ಈ ಮಕ್ಕಳು ಪೋಷಕರ ಮುಖದಲ್ಲಿ ನಗು ತರುತ್ತಾರೆ’ ಎಂದು ತೆಂಡೂಲ್ಕರ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಫೌಂಡೇಶನ್ ಬಗ್ಗೆ ಮಾತನಾಡಿದ ಅವರು, ‘ಶಿಕ್ಷಣ, ಕ್ರೀಡೆ ಮತ್ತು ಆರೋಗ್ಯ ಎಂಬ ಮೂರು ಕ್ಷೇತ್ರಗಳಲ್ಲಿ ಪ್ರತಿಷ್ಠಾನ ಕೆಲಸ ಮಾಡುತ್ತದೆ. ನನ್ನ ತಂದೆ ಪ್ರಾಧ್ಯಾಪಕರಾಗಿದ್ದರಿಂದ ಶಿಕ್ಷಣ, ನನ್ನ ಪತ್ನಿ ವೈದ್ಯರಾಗಿದ್ದರಿಂದ ಆರೋಗ್ಯ ಮತ್ತು ನಾನು ಕ್ರೀಡೆ. ಮೂರು ಒಟ್ಟಾಗಿ ದೇಶದ ಭವಿಷ್ಯ ರೂಪಿಸಬಲ್ಲದು‘ ಎಂದು ಅವರು ಹೇಳಿದರು.
ಆಟಗಾರರೊಂದಿಗೆ ಸಮಯ ಕಳೆಯುವುದು ನನಗೆ ಸಂತೋಷ ಉಂಟು ಮಾಡಿದೆ. ನಾನು ಇಲ್ಲಿಗೆ ಬರಲು ಕಾರಣ ಮಕ್ಕಳೇ. ಅವರಿಂದಲೇ ನಮಗೆ ಮುಗುಳ್ನಗುವ ಅವಕಾಶ ಸಿಕ್ಕರೆ ಅದಕ್ಕಿಂತ ದೊಡ್ಡದು ಬೇರೇನೂ ಇರಲಾರದು. ಶೀಘ್ರದಲ್ಲೇ ಮತ್ತೆ ಇಲ್ಲಿಗೆ ಬರುತ್ತೇನೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.