ಬೆಂಗಳೂರು: ಕ್ರಿಕೆಟ್ ಮತ್ತು ಕ್ರಿಕೆಟಿಗರ ಉನ್ನತಿಯಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಘುರಾಮ್ ಭಟ್ ಹೇಳಿದರು.
ಭಾನುವಾರ ಕೆಎಸ್ಸಿಎ ಪ್ರೆಸ್ಬಾಕ್ಸ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಕ್ರೀಡಾ ಪತ್ರಕರ್ತ ಎಸ್. ದೇವನಾಥ್ ಅವರಿಗೆ ಭಾರತ ಕ್ರೀಡಾ ಪತ್ರಕರ್ತರ ಫೆಡರೇಷನ್ (ಎಸ್.ಜೆ.ಎಫ್.ಐ) ಪದಕ ಮತ್ತು ಪ್ರಶಸ್ತಿ ಪತ್ರವನ್ನು ಪ್ರದಾನ ಮಾಡಿದ ಭಟ್ ಮಾತನಾಡಿದರು.
‘ನಾನು ಕರ್ನಾಟಕ ತಂಡದಲ್ಲಿ ಆಡುವಾಗ ಪತ್ರಕರ್ತರೊಂದಿಗೆ ಹೆಚ್ಚು ಒಡನಾಟ ಇತ್ತು. ಅವರೂ ನಮ್ಮೊಂದಿಗೆ ಪಂದ್ಯ ನಡೆಯುವ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದರು. ನಮ್ಮ ಆಟದ ಬಗ್ಗೆ ವರದಿ ಮಾಡುತ್ತಿದ್ದರು. ತಪ್ಪುಗಳನ್ನು ತಿದ್ದುವ ಕಾರ್ಯವನ್ನೂ ಅವರು ಮಾಡುತ್ತಿದ್ದರು. ಅವರೆಲ್ಲರ ಸಲಹೆಗಳು ನಮಗೆ ಉಪಯುಕ್ತವಾಗುತ್ತಿದ್ದವು’ ಎಂದು ಭಟ್ ನೆನಪಿಸಿಕೊಂಡರು.
‘80 ವರ್ಷ ತುಂಬಿದ ಕ್ರೀಡಾ ಪತ್ರಕರ್ತರಿಗೆ ಜೀವಮಾನ ಸಾಧನೆಗಾಗಿ ಪದಕ ಮತ್ತು ಪ್ರಮಾಣಪತ್ರ ನೀಡಲು ಎಸ್ಜೆಎಫ್ಐ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂಗವಾಗಿ ಬೇರೆ ಬೇರೆ ರಾಜ್ಯಗಳ ಪತ್ರಕರ್ತರನ್ನು ಗೌರವಿಸಲಾಗುತ್ತಿದೆ. ಈ ಗೌರವಕ್ಕಾಗಿ ಕರ್ನಾಟಕದಿಂದ ದೇವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ದೇವನಾಥ್ ಅವರು ಪ್ರಜಾವಾಣಿ ಪತ್ರಿಕೆಯ ಕ್ರೀಡಾ ಸಂಪಾದಕರಾಗಿ ಹಲವು ವರ್ಷ ಕಾರ್ಯನಿರ್ವಹಿಸಿದ್ದರು’ ಎಂದು ಕ್ರೀಡಾ ಪತ್ರಕರ್ತ ಆರ್.ಕೌಶಿಕ್ ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಎಸ್ಜೆಎಫ್ಐ ಪದಾಧಿಕಾರಿಗಳಾದ ಜಿ.ವಿಶ್ವನಾಥ್, ಬೆಂಗಳೂರು ಕ್ರೀಡಾ ಬರಹಗಾರರ ಸಂಘದ (ಸ್ವಾಬ್) ಅಧ್ಯಕ್ಷೆ ಮನುಜಾ ವೀರಪ್ಪ, ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.