ಕಾನ್ಪುರ: ಭಾನುವಾರ ಇಲ್ಲಿ ಒಂದು ಹನಿ ಮಳೆ ಕೂಡ ಬರಲಿಲ್ಲ. ಆದರೂ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಣ ಟೆಸ್ಟ್ ಪಂದ್ಯದ ಮೂರನೇ ದಿನದಾಟ ನಡೆಯಲಿಲ್ಲ. ಇದು ಕ್ರೀಡಾಂಗಣದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಪಂದ್ಯದ ಮೊದಲ ದಿನದಂದು 35 ಓವರ್ಗಳ ಆಟ ಮಾತ್ರ ನಡೆದಿತ್ತು. ಶನಿವಾರವೂ ಒಂದೂ ಎಸೆತ ಕಾಣದೇ ದಿನದಾಟ ರದ್ದಾಗಿತ್ತು.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆ ನಿರ್ದೇಶಕ ಸಂಜಯ್ ಕಪೂರ್, ‘ಆ ದೇವರು ನಮಗೆ ಟೆಸ್ಟ್ ಪಂದ್ಯ ಮಂಜೂರು ಮಾಡಿದ್ದಾನೆ. ಅವನೇ ಉಳಿದದ್ದನ್ನು ನೋಡಿಕೊಳ್ಳುತ್ತಾನೆ’ ಎಂದರು. ಆದರೆ ಇಲ್ಲಿ ಮಾನವಕೃತ ಲೋಪಗಳನ್ನು ಸರಿಪಡಿಸಬೇಕೆಂದರೆ ಪವಾಡವೇ ನಡೆಯಬೇಕೇನೊ?
ಭಾನುವಾರ ಬೆಳಿಗ್ಗೆ 6ರಿಂದ ಒಂದೂ ಹನಿ ಮಳೆ ಬರಲಿಲ್ಲ. ಆದರೆ ಪಿಚ್ಗಳು ತೇವವಾಗಿದ್ದವು. ಮೈದಾನದ ಕೆಲವು ಸ್ಥಳಗಳಲ್ಲಿ ನೀರು ನಿಂತಿತ್ತು. ಬೌಂಡರಿ ಲೈನ್ ಮತ್ತು ಬೌಲರ್ಗಳ ರನ್ ಅಪ್ ಕೂಡ ತೇವಗೊಂಡಿದ್ದವು. ಬೆಳಿಗ್ಗೆ 10, ಮಧ್ಯಾಹ್ನ 12 ಮತ್ತು 2 ಗಂಟೆಗೆ ಅಂಪೈರ್ಗಳು ಪಿಚ್ ಮತ್ತು ಹೊರಾಂಗಣ ಮೈದಾನ ಪರಿಶೀಲಿಸಿದರು. ಹೊರಾಂಗಣದಲ್ಲಿ ತೇವ ಹೆಚ್ಚಿರುವುದರಿಂದ ದಿನದಾಟ ರದ್ದು ಮಾಡಲಾಯಿತು. ಕ್ರೀಡಾಂಗಣ ಸಿಬ್ಬಂದಿಯ ಕಾರ್ಯವೈಖರಿಯೂ ಚುರುಕಾಗಿರಲಿಲ್ಲ. ಇದರಿಂದಾಗಿ ರಜೆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ನಿರಾಶೆಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.