ಅಹಮದಾಬಾದ್: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರದಿಂದ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.
ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ಎದುರು ನಡೆಯಲಿರುವ ಪಂದ್ಯದಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ. ಐದು ಬಾರಿ ಪ್ರಶಸ್ತಿ ಗೆದ್ದ ರೋಹಿತ್ ಶರ್ಮಾ ಅವರ ಪರಂಪರೆಯನ್ನು ಮುಂದುವರಿಸುವ ಸವಾಲು ಹಾರ್ದಿಕ್ ಅವರಿಗೆ ಇದೆ. ಈ ಮೊದಲು ಕೆಲವು ವರ್ಷಗಳ ಕಾಲ ಅವರು ರೋಹಿತ್ ನಾಯಕತ್ವದಲ್ಲಿ ಮುಂಬೈ ತಂಡದಲ್ಲಿ ಆಡಿದ್ದರು.
ಆದರೆ ಕಳೆದ ಎರಡು ವರ್ಷಗಳಲ್ಲಿ ತಾವು ನಾಯಕತ್ವ ವಹಿಸಿದ ಗುಜರಾತ್ ತಂಡವನ್ನೇ ಈ ಪಂದ್ಯದಲ್ಲಿ ಎದುರಿಸಲಿರುವುದು ವಿಶೇಷ. ಹಾರ್ದಿಕ್ ನಾಯಕತ್ವದಲ್ಲಿ ಟೈಟನ್ಸ್ ತಂಡವು ಒಂದು ಸಲ ಚಾಂಪಿಯನ್ ಮತ್ತೊಮ್ಮೆ ರನ್ನರ್ಸ್ ಅಪ್ ಆಗಿತ್ತು. ಹಾರ್ದಿಕ್ ಮುಂಬೈ ತಂಡಕ್ಕೆ ಸೇರ್ಪಡೆಯಾದ ಮೇಲೆ ಗುಜರಾತ್ ತಂಡದ ನಾಯಕತ್ವವನ್ನು ಶುಭಮನ್ ಗಿಲ್ ಅವರಿಗೆ ವಹಿಸಲಾಗಿದೆ.
ಹೋದ ವರ್ಷ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಸಂದರ್ಭದಲ್ಲಿ ಪಾದದ ಗಾಯದಿಂದ ಬಳಲಿದ್ದ ಹಾರ್ದಿಕ್ ಕ್ರಿಕೆಟ್ನಿಂದ ದೂರವುಳಿದಿದ್ದರು. ಇತ್ತೀಚೆಗಷ್ಟೇ ಅವರು ಕ್ರಿಕೆಟ್ ಕಣಕ್ಕೆ ಮರಳಿದ್ದರು.
ಆದರೆ ಮುಂಬೈ ತಂಡಕ್ಕೆ ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಗೈರು ಕಾಡುವ ಸಾಧ್ಯತೆ ಇದೆ. ಅವರಿಗೆ ಇನ್ನೂ ಎನ್ಸಿಎಯಿಂದ ಫಿಟ್ನೆಸ್ ಪ್ರಮಾಣಪತ್ರ ಲಭಿಸಿಲ್ಲ. ಆದ್ದರಿಂದ ಅನುಭವಿ ರೋಹಿತ್, ಇಶಾನ್ ಕಿಶನ್ ಮತ್ತು ಟಿಮ್ ಡೇವಿಡ್ ಅವರ ಮೇಲೆ ಹೊಣೆ ಹೆಚ್ಚಲಿದೆ. ಅದರಲ್ಲೂ ಬಿಸಿಸಿಐ ಕೇಂದ್ರ ಗುತ್ತಿಗೆ ಕಳೆದುಕೊಂಡಿರುವ ಇಶಾನ್ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.
ವೇಗಿಗಳಾದ ಜೇಸನ್ ಬೆಹ್ರನ್ಡಾರ್ಫ್ ಮತ್ತು ದಿಲ್ಶಾನ್ ಮಧುಶಂಕಾ ಅವರು ಈ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಗೆರಾಲ್ಡ್ ಕೋಯಿಜಿ ಗಾಯಗೊಂಡಿದ್ದಾರೆ. ಜಸ್ಪ್ರೀತ್ ಬೂಮ್ರಾ ಮೇಲೆ ಹಚ್ಚಿನ ಹೊಣೆ ಬೀಳುವುದು ಖಚಿತ.
ಗುಜರಾತ್ ತಂಡವು ಸತತ ಮೂರನೇ ವರ್ಷವೂ ಫೈನಲ್ ಪ್ರವೇಶಿಸುವತ್ತ ಚಿತ್ತ ನೆಟ್ಟಿದೆ. ನಾಯಕತ್ವದೊಂದಿಗೆ ಬ್ಯಾಟಿಂಗ್ನಲ್ಲಿಯೂ ಮಿಂಚುವ ಸವಾಲು ಗಿಲ್ ಮುಂದಿದೆ. ಹೋದ ಬಾರಿ ಅವರು ರನ್ಗಳ ಹೊಳೆ ಹರಿಸಿದ್ದರು. ತಂಡಕ್ಕೆ ಮೊಹಮ್ಮದ್ ಶಮಿ ಅವರ ಗೈರು ಕಾಡಬಹುದು. ಸ್ಪಿನ್ನರ್ ರಶೀದ್ ಖಾನ್ ಗಾಯದಿಂದ ಚೇತರಿಸಿಕೊಂಡು ಮರಳಿದ್ದಾರೆ. ಹೋದ ವಾರ ಐರ್ಲೆಂಡ್ ಎದುರು ರಶೀದ್ ಆಡಿದ್ದರು. ಇದು ತಂಡಕ್ಕೆ ಸಮಾಧಾನದ ಸಂಗತಿ.
ತಂಡಗಳು
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ (ನಾಯಕ) ರೋಹಿತ್ ಶರ್ಮಾ ಡಿವಾಲ್ಡ್ ಬ್ರೆವಿಸ್ ಜಸ್ಪ್ರೀತ್ ಬೂಮ್ರಾ ಇಶಾನ್ ಕಿಶನ್ ಪಿಯೂಷ್ ಚಾವ್ಲಾ ಗೆರಾಲ್ಡ್ ಕೊಯಿಜಿ ಟಿಮ್ ಡೇವಿಡ್ ಶ್ರೇಯಸ್ ಗೋಪಾಲ್ ಅನ್ಷುಲ್ ಕಾಂಬೋಜ್ ಕುಮಾರ್ ಕಾರ್ತಿಕೆಯ ಆಕಾಶ್ ಮದ್ವಾಲ್ ಕೆವೆನಾ ಮೆಪಾಕಾ ಮೊಹಮ್ಮದ್ ನಬಿ ಶಮ್ಸ್ ಮುಲಾನಿ ನಮನ ಧೀರ್ ಶಿವಾಲಿಕ್ ಶರ್ಮಾ ರೊಮೆರಿಯೊ ಶೇಫರ್ಡ್ ಅರ್ಜುನ್ ತೆಂಡೂಲ್ಕರ್ ನುವಾನ್ ತುಷಾರ ತಿಲಕ್ ವರ್ಮಾ ವಿಷ್ಣು ವಿನೋದ್ ನೆಹಲ್ ವಧೇರಾ ಲೂಕ್ ವುಡ್ ಸೂರ್ಯಕುಮಾರ್ ಯಾದವ್.
ಗುಜರಾತ್ ಟೈಟನ್ಸ್: ಶುಭಮನ್ ಗಿಲ್ (ನಾಯಕ) ಅಜ್ಮತ್ವುಲ್ಲಾ ಒಮರ್ಝೈ ಸ್ಪೆನ್ಸರ್ ಜಾನ್ಸನ್ ಕಾರ್ತಿಕ್ ತ್ಯಾಗಿ ಜೋಶ್ ಲಿಟಲ್ ಅಭಿನವ್ ಮನೋಹರ್ ಡೇವಿಡ್ ಮಿಲ್ಲರ್ ಸುಶಾಂತ್ ಮಿಶ್ರಾ ದರ್ಶನ್ ನಾಯ್ಕಮಡೆ ನೂರ್ ಅಹಮದ್ ರಶೀದ್ ಖಾನ್ ವೃದ್ಧಿಮಾನ್ ಸಹಾ ಸಾಯಿಕಿಶೋರ್ ವಿಜಯಶಂಕರ್ ಬಿ.ಆರ್. ಶರತ್ ಮೋಹಿತ್ ಶರ್ಮಾ ಮಾನವ್ ಸುತಾರ್ ರಾಹುಲ್ ತೆವಾಟಿಯಾ ಮ್ಯಾಥ್ಯೂ ವೇಡ್ ಕೇನ್ ವಿಲಿಯಮ್ಸನ್ ಜಯಂತ್ ಯಾದವ್ ಉಮೇಶ್ ಯಾದವ್.
ಪಂದ್ಯ ಆರಂಭ: ರಾತ್ರಿ 7.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.