ADVERTISEMENT

IND vs NZ ಎರಡನೇ ಟೆಸ್ಟ್: ಪುಣೆಯಲ್ಲಿ ಪುಟಿದೇಳುವತ್ತ ರೋಹಿತ್ ಪಡೆ ಚಿತ್ತ

ಎರಡನೇ ಟೆಸ್ಟ್ ಕ್ರಿಕೆಟ್‌ ಇಂದಿನಿಂದ: ಕಿವೀಸ್ ಬಳಗಕ್ಕೆ ಸರಣಿ ಜಯದ ಕನಸು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 0:30 IST
Last Updated 24 ಅಕ್ಟೋಬರ್ 2024, 0:30 IST
<div class="paragraphs"><p>ಅಭ್ಯಾಸನಿರತ ಭಾರತದ ಆಟಗಾರರು</p></div>

ಅಭ್ಯಾಸನಿರತ ಭಾರತದ ಆಟಗಾರರು

   

– ಪಿಟಿಐ ಚಿತ್ರ

ಪುಣೆ: ಭಾರತದಲ್ಲಿ ಕ್ರಿಕೆಟ್‌ ಅಚ್ಚುಮೆಚ್ಚಿನ ಅಟ. ಇದರ ಸುತ್ತ ನಡೆಯುವ ಚರ್ಚೆಗಳು ಹಲವಾರು. ಅದರಲ್ಲಿ ಆಟಗಾರರ ಆಯ್ಕೆ, ಸಂಯೋಜನೆ ಮತ್ತು ಸೂಕ್ಷ್ಮವಾದ ಸಂಗತಿಗಳ ಕುರಿತ ಮಾತುಕತೆಗಳ ಪ್ರವೃತ್ತಿ ಇದೆ. ಆದ್ದರಿಂದಲೇ ತಂಡವು ಸೋತಾಗ ಅತ್ಯಂತ ಸೂಕ್ಷ್ಮಾತೀಸೂಕ್ಷ್ಮ ಸಂಗತಿಯೂ ಮುನ್ನೆಲೆಗೆ ಬರುತ್ತವೆ.  

ADVERTISEMENT

ಬೆಂಗಳೂರಿನಲ್ಲಿ ಈಚೆಗೆ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಎದುರು ಪರಾಭವಗೊಂಡ ನಂತರ ಇಂತಹ ಚರ್ಚೆಗಳು ನಡೆದಿವೆ. ತವರು ನೆಲದಲ್ಲಿ ಭಾರತ ತಂಡವು 36 ವರ್ಷಗಳ ನಂತರ ಕಿವೀಸ್ ಎದುರು ಸೋತಿತು. ಆದರೆ, ಸಾಮಾಜಿಕ ಜಾಲತಾಣ ಮತ್ತಿತರ ಮಾಧ್ಯಮಗಳಲ್ಲಿ ಬಂದ ಇಂತಹ ಅಭಿಪ್ರಾಯಗಳನ್ನು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್  ಒಪ್ಪುವುದಿಲ್ಲ. 

ಅವರು ಒಪ್ಪಲಿ, ಬಿಡಲಿ, ಆತಿಥೇಯ ಆಟಗಾರರು ಈ ಎಲ್ಲ ಚರ್ಚೆಗಳ ಸುಳಿಯಿಂದ ಹೊರಬರಲು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಜಯಿಸುವತ್ತ ಚಿತ್ತ ನೆಟ್ಟಿದ್ದಾರೆ. ಗುರುವಾರ ಇಲ್ಲಿ ಆರಂಭವಾಗಲಿರುವ ಪಂದ್ಯದಲ್ಲಿ ಕಣಕ್ಕಿಳಿಸುವ 11ರ ಬಳಗದ ಕುರಿತು ಲೆಕ್ಕಾಚಾರ ನಡೆಯುತ್ತಿದೆ. 

ಕನ್ನಡಿಗ ಕೆ.ಎಲ್. ರಾಹುಲ್ ಅವರು ಮತ್ತೊಂದು ಅವಕಾಶ ಗಿಟ್ಟಿಸುವರೇ ಎಂಬ ಬಗ್ಗೆ ಈಗ ಕುತೂಹಲ ಗರಿಗೆದರಿದೆ. ಯುವ ಆಟಗಾರರು ತಮ್ಮ ಸಾಮರ್ಥ್ಯ ಮೆರೆದು ಭರವಸೆ ಮೂಡಿಸಿದ್ದಾರೆ. ಆದರಿಂದಾಗಿ ಫಾರ್ಮ್ ಕೊರತೆ ಅನುಭವಿಸುತ್ತಿರುವ ರಾಹುಲ್ ಸ್ಥಾನ ಪಡೆಯದಿರುವ ಸಾಧ್ಯತೆ ಹೆಚ್ಚು. ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ ಅವರು ರಾಹುಲ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅದೇ ರೀತಿ ತಂಡದ ಮ್ಯಾನೇಜ್‌ಮೆಂಟ್ ಕೂಡ ಅವರನ್ನು ಸಮರ್ಥಿಸುವುದೇ ಎಂಬ ಪ್ರಶ್ನೆಗೆ ಶೀಘ್ರ ಉತ್ತರ ಸಿಗಲಿದೆ. 

ಸಂಪೂರ್ಣ ಫಿಟ್ ಆಗಿರುವ ಶುಭಮನ್ ಗಿಲ್ ಅವರು ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಇದರಿಂದಾಗಿ ರಾಹುಲ್ ಮತ್ತು ಸರ್ಫರಾಜ್ ಖಾನ್ ಅವರು ಆಯ್ಕೆಯಾಗುವ ಕುರಿತು ಸ್ಪಷ್ಟವಾಗಿಲ್ಲ. ಪಂದ್ಯದ ಬೆಳಿಗ್ಗೆಯಷ್ಟೇ ಇದು ಬಹಿರಂಗವಾಗಲಿದೆ. ಬೌಲಿಂಗ್ ವಿಭಾಗದಲ್ಲಿಯೂ ಇದೇ ರೀತಿಯಾದ ಆಯ್ಕೆ ಗೊಂದಲವಿದೆ. ಮೊಹಮ್ಮದ್ ಸಿರಾಜ್ ಕಳೆದ ಪಂದ್ಯದಲ್ಲಿ ಅಷ್ಟೇನೂ ಲಯದಲ್ಲಿ ಇರಲಿಲ್ಲ. ಅದರಿಂದಾಗಿ ಆಕಾಶ್ ದೀಪ್ ತಮ್ಮ ಹೆಜ್ಜೆಗುರುತು ಮೂಡಿಸಲು ಕಾತುರದಿಂದ ಕಾಯುತ್ತಿದ್ದಾರೆ. 

ಭಾರತವು ಮೂರನೇ ಸ್ಪಿನ್ನರ್ ಆಡಿಸಲು ಯೋಜಿಸುತ್ತಿದೆ. ಆದರೆ ಬೆಂಗಳೂರಿನಲ್ಲಿ ಮೂವರು ಸ್ಪಿನ್ನರ್‌ಗಳ ಸಂಯೋಜನೆಯು ವಿಫಲವಾಗಿತ್ತು. ಅದರಿಂದಾಗಿ ಕುಲದೀಪ್ ಯಾದವ್ ಅವರಿಗೆ ಇನ್ನೊಂದು ಅವಕಾಶ ಕೊಡುವುರೇ ಕಾದು ನೋಡಬೇಕು. ಒಂದೊ‌ಮ್ಮೆ ಅವರಲ್ಲದಿದ್ದರೆ, ಸ್ಪಿನ್–ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕಣಕ್ಕಿಳಿಯಬಹುದು. ಕಿವೀಸ್ ಬೌಲರ್‌ಗಳು ಭಾರತದ ಎಡಗೈ ಬ್ಯಾಟರ್‌ ಎದುರು ಹೆಚ್ಚು ಸಫಲರಾಗಿರಲಿಲ್ಲ. ಆದ್ದರಿಂದ ವಾಷಿಂಗ್ಟನ್ ಉಪಯುಕ್ತ ಆಟಗಾರನಾಗಬಹುದು. 

ಆತಿಥೇಯರ ತಂಡ ಸಂಯೋಜನೆ ಏನೇ ಇರಲಿ. ಭಾರತದಲ್ಲಿ ಸರಣಿ ಜಯದ ಇತಿಹಾಸ ರಚಿಸುವ ಅವಕಾಶವಂತೂ ನ್ಯೂಜಿಲೆಂಡ್ ತಂಡಕ್ಕೆ ಇದೆ. 3 ಪಂದ್ಯಗಳ ಸರಣಿಯಲ್ಲಿ 1–0 ಮುಂದಿರುವ ಕಿವೀಸ್ ಬಳಗವು ಪುಣೆಯಲ್ಲಿಯೂ ತನ್ನ ಛಾಪು ಮೂಡಿಸುವ ಛಲದಲ್ಲಿದೆ. ತಂಡದ ವೇಗಿಗಳಾದ ಟಿಮ್ ಸೌಥಿ, ಮ್ಯಾಟ್ ಹೆನ್ರಿ ಮತ್ತು ವಿಲಿಯಮ್ ಓ ರೂರ್ಕಿ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು 17 ವಿಕೆಟ್‌ಗಳನ್ನು  ಹಂಚಿಕೊಂಡಿದ್ದರು. ಆದರೆ ಪುಣೆಯ ಪಿಚ್ ವೇಗಿಗಳಿಗೆ ನೆರವಾಗುವಂತಿಲ್ಲ. ಆದ್ದರಿಂದ ಅನುಭವಿ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಮುಂಚೂಣಿಗೆ ಬರುವ ಸಾಧ್ಯತೆ ಇದೆ. ಅವರಿಗಾಗಿ ಸ್ಥಾನ ಬಿಟ್ಟುಕೊಡುವ ಬೌಲರ್ ಯಾರೆಂಬುದು ಇನ್ನಷ್ಟೇ ತಿಳಿಯಬೇಕಿದೆ. 

ಡೆವೊನ್ ಕಾನ್ವೆ, ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ ಮತ್ತು ನಾಯಕ ಟಾಮ್ ಲೇಥಮ್ ಅವರು ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ಕೀಪಿಂಗ್ ಮಾಡಲು ರಿಷಭ್ ಸಿದ್ಧ: ಗಂಭೀರ್

 ಪುಣೆ: ರಿಷಭ್ ಪಂತ್ ಅವರಿಗೆ ಗಾಯದ ಸಮಸ್ಯೆ ಇಲ್ಲ. ಅವರು ವಿಕೆಟ್‌ಕೀಪಿಂಗ್ ಮಾಡಲು ಸಿದ್ಧರಾಗಿದ್ದಾರೆ. ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರ ಕೆಲಸದ ಒತ್ತಡ ನಿರ್ವಹಣೆಯ ಕುರಿತು ಪುಣೆ ಟೆಸ್ಟ್ ನಂತರ ಯೋಚಿಸಲಾಗುವುದು ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದರು. 

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನನಗೆ ಗೊತ್ತಿರುವ ಪ್ರಕಾರ ನಾಳೆ (ಗುರುವಾರ) ರಿಷಭ್ ಕೀಪಿಂಗ್ ಮಾಡಲಿದ್ದಾರೆ. ಅವರ ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿಲ್ಲ’ ಎಂದರು. 

ಬೆಂಗಳೂರು ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೀಪಿಂಗ್ ಮಾಡುವಾಗ ರಿಷಭ್ ಅವರ ಮೊಣಕಾಲಿಗೆ ಚೆಂಡು ಬಡಿದಿತ್ತು. ಈ ಹಿಂದೆ ಅಪಘಾತದಲ್ಲಿ ಗಾಯವಾಗಿದ್ದ ಜಾಗದಲ್ಲಿಯೇ ಪೆಟ್ಟು ಬಿದ್ದ ಕಾರಣ ಅವರ ಓಟದ ವೇಗವು ಕಡಿಮೆಯಾಗಿತ್ತು. ಅದರಿಂದಾಗಿ ಅವರು ಕೀಪಿಂಗ್ ಮಾಡಲಿಲ್ಲ. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು. 99 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.

ರಿಷಭ್ ಬದಲಿಗೆ ಧ್ರುವ ಜುರೇಲ್ ಕೀಪಿಂಗ್ ನಿಭಾಯಿಸಿದ್ದರು. ‘ಬೂಮ್ರಾ ಅವರಷ್ಟೇ ಅಲ್ಲ ಉಳಿದೆಲ್ಲ ಆಟಗಾರರ ಕಾರ್ಯೋತ್ತಡದ ವಿಶ್ಲೇಷಣೆಯು ನಡೆಯಲಿದೆ. ಅದರೆ ಸರಣಿ ಮುಗಿಯಬೇಕಷ್ಟೇ. ಈ ಟೆಸ್ಟ್ ನಂತರ ಬೂಮ್ರಾ ಅವರ ಕುರಿತು ಯೋಚಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.