ADVERTISEMENT

IND vs NZ Test | ಭಾರತದ ಹೋರಾಟ ಇನ್ನೂ ಬಾಕಿ ಇದೆ!

ಕಿವೀಸ್ ಬಳಗಕ್ಕೆ 107 ರನ್‌ಗಳ ಗೆಲುವಿನ ಗುರಿ; ಸರ್ಫರಾಜ್ ಶತಕದ ಸೊಬಗು, ಪಂತ್ ಆಟದ ಬೆರಗು

ಗಿರೀಶ ದೊಡ್ಡಮನಿ
Published 20 ಅಕ್ಟೋಬರ್ 2024, 0:35 IST
Last Updated 20 ಅಕ್ಟೋಬರ್ 2024, 0:35 IST
<div class="paragraphs"><p>ಸರ್ಫರಾಜ್ ಖಾನ್ ಶತಕ ಸಂಭ್ರಮ&nbsp; –</p></div>

ಸರ್ಫರಾಜ್ ಖಾನ್ ಶತಕ ಸಂಭ್ರಮ  –

   

ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್

ಬೆಂಗಳೂರು: ಸರ್ಫರಾಜ್ ಖಾನ್ ಮತ್ತು ರಿಷಭ್ ಪಂತ್ ಅವರು ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಾಖಲಿಸಿದ ಜೊತೆಯಾಟವು ಕ್ರಿಕೆಟ್‌ಪ್ರಿಯರ ನೆನಪಿನಂಗಳದಲ್ಲಿ ಬಹುಕಾಲದವರೆಗೆ ಉಳಿಯಲಿದೆ.  

ADVERTISEMENT

ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ಗಳಿಸಿದ ಖಾನ್ (150; 195ಎಸೆತ) ಮತ್ತು ತಮ್ಮ ವೃತ್ತಿಜೀವನದಲ್ಲಿ ಏಳನೇ ಬಾರಿ ‘ನರ್ವಸ್‌ ನೈಂಟಿ’ ಅನುಭವಿಸಿದ ಪಂತ್ (99; 105ಎ) ಅವರ ಆಟದಿಂದಾಗಿ ಭಾರತ ತಂಡವು ಇನಿಂಗ್ಸ್‌ ಸೋಲು (ಕಿವೀಸ್ ಪ್ರಥಮ ಇನಿಂಗ್ಸ್‌ನಲ್ಲಿ 356 ರನ್‌ ಮುನ್ನಡೆ ಸಾಧಿಸಿತ್ತು) ತಪ್ಪಿಸಿಕೊಂಡಿತು.

ಮೊದಲ ಇನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಕುಸಿದಿದ್ದ ತಂಡವು ಎರಡನೇಯದ್ದರಲ್ಲಿ 462 ರನ್‌ಗಳ ಮೊತ್ತ ಗಳಿಸಲು  ಖಾನ್ ಮತ್ತು ಪಂತ್ ಜೊತೆಯಾಟದಿಂದ ಸಾಧ್ಯವಾಯಿತು. ಆದರೆ ಉಳಿದ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ಆದ್ದರಿಂದ ನ್ಯೂಜಿಲೆಂಡ್ ತಂಡಕ್ಕೆ ಕೇವಲ 107 ರನ್‌ಗಳ ಸಾಧಾರಣ ಗುರಿಯನ್ನು ಒಡ್ಡಲು ಮಾತ್ರ ಭಾರತಕ್ಕೆ ಸಾಧ್ಯವಾಗಿದೆ. ಆದರೂ ಆತಿಥೇಯರ ಹೋರಾಟ ಇನ್ನೂ ಬಾಕಿ ಇದೆ. ಗೆಲುವಿನ ಆಸೆ ಬಿಟ್ಟಿಲ್ಲ.  

‘ನಮಗಿನ್ನೂ ಗೆಲುವಿನ ಅವಕಾಶ ಇದೆ. ಈ ಪಿಚ್‌ನಲ್ಲಿ ಬ್ಯಾಟಿಂಗ್ ಅಷ್ಟು ಸುಲಭವಲ್ಲ. ಐದನೇ ದಿನ ಆಡುವುದು ಇನ್ನೂ ಕಷ್ಟ. ನಮ್ಮ ಬೌಲರ್‌ಗಳು ಜಯ ತಂದುಕೊಡುತ್ತಾರೆ’ ಎಂದು ದಿನದಾಟದ ನಂತರ ಸರ್ಫರಾಜ್ ಸುದ್ದಿಗೋಷ್ಠಿಯಲ್ಲಿ ಹೇಳಿದ ಮಾತುಗಳಲ್ಲಿ ತುಂಬು ವಿಶ್ವಾಸವಿತ್ತು. ಕ್ರೀಡಾಂಗಣದಲ್ಲಿ ಸೇರಿದ್ದ 20 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರೂ ಅದೇ ವಿಶ್ವಾಸದೊಂದಿಗೆ ಸಂಜೆ ಮನೆಗೆ ಮರಳಿದ್ದಾರೆ.

ಆದರೆ 36 ವರ್ಷಗಳ ನಂತರ ಭಾರತದಲ್ಲಿ ಟೆಸ್ಟ್ ಪಂದ್ಯ ಜಯಿಸುವ ಕನಸು ಕಾಣುತ್ತಿರುವ ಕಿವೀಸ್ ಬಳಗವೂ ಈ ಪುಟ್ಟ ಗುರಿಯನ್ನು ಸುಲಭ ಎಂದು ತಿಳಿದುಕೊಂಡಿಲ್ಲ.

‘ಇಲ್ಲಿ ಜಯವು ಸುಲಭವಾಗಿ ಒಲಿಯುತ್ತದೆ ಎಂದುಕೊಂಡಿಲ್ಲ. ಏಕೆಂದರೆ ನಾವು ಎದುರಿಸುತ್ತಿರುವುದು ವಿಶ್ವದರ್ಜೆಯ ತಂಡ ಎಂಬ ಅರಿವಿದೆ. ತಾಳ್ಮೆಯಿಂದ ಆಡಿ ಗೆಲ್ಲುವ ವಿಶ್ವಾಸವೂ ಇದೆ’ ಎಂದು ನ್ಯೂಜಿಲೆಂಡ್ ವೇಗಿ ವಿಲಿಯಮ್ಸ್‌ ಓ ರೂರ್ಕಿ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ಖಾನ್–ಪಂತ್ ಆಟದ ಗಮ್ಮತ್ತು

ಪಂದ್ಯದ ಮೂರನೇ ದಿನದಾಟದ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿ ಔಟಾದಾಗ ತಂಡಕ್ಕೆ ಮೊದಲ ಇನಿಂಗ್ಸ್‌  ಮೊತ್ತ ಚುಕ್ತಾ ಮಾಡಲು ಇನ್ನೂ 125 ರನ್‌ಗಳ ಅಗತ್ಯವಿತ್ತು. ಅರ್ಧಶತಕ ಗಳಿಸಿದ್ದ ಸರ್ಫರಾಜ್ ಕ್ರೀಸ್‌ನಲ್ಲಿ ಉಳಿದಿದ್ದರು. ಬೆಳಿಗ್ಗೆ ಇಬ್ಬರೂ ಕ್ರೀಸ್‌ಗೆ ಬಂದಾಗ ಆಗಸದಲ್ಲಿ ಕಾರ್ಮೋಡಗಳಿದ್ದವು. ಕ್ರೀಡಾಂಗಣದ ಫ್ಲಡ್‌ಲೈಟ್‌ಗಳು ಮಂದಬೆಳಕನ್ನು ಮರೆಮಾಚಿದ್ದವು. ಆರಂಭದ ಹಂತದಲ್ಲಿ ಕೆಲವು ಬಾರಿ ಇಬ್ಬರ ನಡುವೆ ಸಂವಹನದ ಲೋಪದಿಂದ ರನ್‌ಔಟ್ ಆಗುವ ಅಪಾಯಗಳೂ ಎದುರಾಗಿದ್ದವು. ನಂತರ ಸುಧಾರಿಸಿಕೊಂಡು ಆಡಿದ ಇಬ್ಬರೂ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 177 ರನ್‌ ಸೇರಿಸಿದರು.

ಖಾನ್ ಅವರ ಲೆಟ್‌ ಕಟ್‌ಗಳು, ಸ್ಲಾಗ್ ಸ್ವೀಪ್‌ಗಳು ಮುದಗೊಳಿಸಿದವು. ಪಂತ್ ಎಂದಿನಂತೆ ಆಕ್ರಮಣಕಾರಿ ಆಟವಾಡಿದರು. ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್‌ಕೀಪಿಂಗ್ ಮಾಡುವಾಗ ಅವರ ಮೊಣಕಾಲಿಗೆ ಚೆಂಡು ಬಡಿದು ಗಾಯವಾಗಿತ್ತು. ಎರಡು ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೊಳಗಾದ ಕಾಲಿಗೇ ಪೆಟ್ಟು ಬಿದ್ದಿತ್ತು. ಆದ್ದರಿಂದ ಅವರು ಕೀಪಿಂಗ್ ಮಾಡಿರಲಿಲ್ಲ. ಅವರು ಬ್ಯಾಟಿಂಗ್ ಮಾಡುವುದು ಕೂಡ ಅನುಮಾನವಾಗಿತ್ತು. ಆದರೆ ಕ್ರೀಸ್‌ಗೆ ಬಂದರು. ತಮ್ಮ ಆಟ ತೋರಿಸಿದರು.

ಸ್ಪಿನ್ನರ್ ಎಜಾಜ್ ಪಟೇಲ್ ಹಾಕಿದ 66ನೇ ಓವರ್‌ನಲ್ಲಿ ಅವರು  ಎರಡು ಎಸೆತಗಳಲ್ಲಿ ಸತತ ಸಿಕ್ಸರ್‌ಗಳನ್ನು ಎತ್ತಿದರು. ನಂತರದ ಎರಡು ಎಸೆತಗಳಲ್ಲಿ ಎಲ್‌ಬಿಡಬ್ಲ್ಯು ಔಟಾಗುವ ಸಾಧ್ಯತೆಗಳಿದ್ದವು. ಆದರೆ ಡಿಆರ್‌ಎಸ್‌ನಲ್ಲಿ ನಾಟೌಟ್ ಎಂದು ಪ್ರಕಟವಾಗಿದ್ದು ಪಂತ್ ಆಟ ಮುಂದುವರಿಯಲು ಕಾರಣವಾದವು. 

ಆದರೆ ಚಹಾ ವಿರಾಮಕ್ಕೂ ಮುನ್ನ ಖಾನ್ ವಿಕೆಟ್ ಪಡೆಯುವಲ್ಲಿ ಟಿಮ್ ಸೌಥಿ ಯಶಸ್ವಿಯಾದರು. ಪಂತ್ ತಮ್ಮ ಶತಕಕ್ಕೆ ಇನ್ನೊಂದೇ ರನ್‌ ಅವಶ್ಯವಿದ್ದ ಸಂದರ್ಭದಲ್ಲಿ ವಿಲಿಯಂ ಓ ರೂರ್ಕಿ ಎಸೆತದಲ್ಲಿ ಬೌಲ್ಡ್‌ ಆದರು.

ಕೆ.ಎಲ್. ರಾಹುಲ್ (12 ರನ್) ಎರಡನೇ ಇನಿಂಗ್ಸ್‌ನಲ್ಲಿಯೂ ವಿಫಲರಾದರು. ಅಶ್ವಿನ್ (15 ರನ್) ಬಿಟ್ಟರೆ ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಆಡಲಿಲ್ಲ. ಅನಗತ್ಯ ಹೊಡೆತಗಳಿಗೆ ಪ್ರಯತ್ನಿಸಿ ವಿಕೆಟ್ ಚೆಲ್ಲಿದರು.

ರಿಷಭ್ ಪಂತ್ ಬ್ಯಾಟಿಂಗ್ ವೈಖರಿ  ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್

‘ಭಾರತ ತಂಡಕ್ಕೆ ಶತಕ ಗಳಿಸುವ ಕನಸು ನನಸಾಗಿದೆ‘

‘ಬಾಲ್ಯದಿಂದಲೂ ನಾನು ಕಂಡಿದ್ದ ಕನಸು ಇವತ್ತು ನನಸಾಗಿದೆ. ಭಾರತ ತಂಡವನ್ನು ಪ್ರತಿನಿಧಿಸಬೇಕು. ಶತಕ ಗಳಿಸಬೇಕು. ತಂಡವನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂಬ ಕನಸು ಕಂಡಿದ್ದೆ. ಅದೀಗ ಕೈಗೂಡಿದೆ. ಮತ್ತಷ್ಟು ಸಾಧಿಸುವ ಹುಮ್ಮಸ್ಸು ಮೂಡಿದೆ’ – ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ ಸರ್ಫರಾಜ್ ಖಾನ್ ಅವರ ಅಭಿಮಾನದ ನುಡಿಗಳಿವು. ಕಳೆದ ಫೆಬ್ರುವರಿಯಲ್ಲಿ ಸರ್ಫರಾಜ್ ಖಾನ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಅಷ್ಟಕ್ಕೆ ಅವರ ರನ್‌ ಗಳಿಕೆಯ ಹಸಿವು ನೀಗಲಿಲ್ಲ ಎನ್ನುವುದು ನಿಜ. ಇತ್ತೀಚೆಗೆ ಇರಾನಿ ಟ್ರೋಫಿಯಲ್ಲಿ ದ್ವಿಶತಕ ಹೊಡೆದಿದ್ದರು. ದುಲೀಪ್ ಟ್ರೋಫಿಯಲ್ಲೂ ರನ್‌ಗಳ ಹೊಳೆ ಹರಿಸಿದ್ದರು. ತಮ್ಮನ್ನು ರಾಷ್ಟ್ರೀಯ ತಂಡದ ಆಯ್ಕೆಗಾರರು ನಿರ್ಲಕ್ಷಿಸದಂತೆ ನೋಡಿಕೊಂಡಿದ್ದರು. ಇದೀಗ ಟೆಸ್ಟ್‌ನಲ್ಲಿಯೂ ಸಿಕ್ಕ ಅವಕಾಶದಲ್ಲೂಲ್ಲಿ ಶತಕ ಗಳಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ಅವರು ಎರಡನೇಯದ್ದರಲ್ಲಿ 150 ರನ್‌ ಗಳಿಸಿದರು. ‘ದುಲೀಪ್ ಟ್ರೋಫಿ ಪಂದ್ಯದಲ್ಲಿ ಇಂತಹದೇ ಒತ್ತಡವಿದ್ದಾಗ ಆಡಿದ್ದ ಅನುಭವ ನಮ್ಮಿಬ್ಬರಿಗೂ ಇಲ್ಲಿ ನೆರವಿಗೆ ಬಂತು. ಏನೇ ಆಗಲಿ; ರನ್‌ ಗಳಿಸುವುದೊಂದೇ ಧ್ಯೇಯ ಎಂಬ ಛಲದೊಂದಿಗೆ ಆಡಿದೆವು’ ಎಂದರು. ‘ಲೆಟ್‌ ಕಟ್ ಮತ್ತು ಅಪ್ಪರ್ ಕಟ್‌ಗಳನ್ನು ಆಡುವುದೆಂದರೆ ನನಗೆ ಬಹಳ ಇಷ್ಟ. ನಾನು ಅಭ್ಯಾಸ ಮಾಡುವ ಪಿಚ್‌ಗಳಲ್ಲಿಯೂ ಅಂತಹ ಎಸೆತಗಳನ್ನು ಹೆಚ್ಚು ಅಭ್ಯಾಸ ಮಾಡಿದ್ದೇನೆ’ ಎಂದರು. 

ಇತಿಹಾಸ ಮರುಕಳಿಸುವುದೇ?

ಎರಡು ದಶಕಗಳ ಹಿಂದೆ ಬಲಾಢ್ಯ ಆಸ್ಟ್ರೇಲಿಯಾ ತಂಡದ ಎದುರು 107 ರನ್‌ಗಳ ಗುರಿಯೊಡ್ಡಿದ್ದ ಭಾರತ ತಂಡವು ಅಮೋಘ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿಯೂ ಅಂತಹದೊಂದು ಸಾಧನೆ ಮರುಕಳಿಸುವುದೇ? ಅಂದು (2004) ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವನ್ನು  ಭಾರತ 13 ರನ್‌ಗಳಿಂದ ಸೋಲಿಸಿತ್ತು. 

ಮಳೆ ಬೆಳಕಿನ ಆಟ

ಈ ಟೆಸ್ಟ್ ಪಂದ್ಯದ ಮೊದಲ ದಿನದಾಟವು ಸಂಪೂರ್ಣವಾಗಿ ಮಳೆಗೆ ಕೊಚ್ಚಿಹೋಗಿತ್ತು. ಆದರೆ ಗುರುವಾರ ಮತ್ತು ಶುಕ್ರವಾರ ಮಳೆಯಾಗಿರಲಿಲ್ಲ. ಶನಿವಾರ ಎರಡು ಬಾರಿ ಮಳೆ ಸುರಿಯಿತು.  ಬೆಳಿಗ್ಗೆ 11 ಗಂಟೆಗೆ ಮಳೆಯಾಯಿತು. ಆಗ ಭಾರತ ತಂಡವು 3 ವಿಕೆಟ್‌ಗಳಿಗೆ 344 ರನ್‌ ಗಳಿಸಿತ್ತು. ರಿಷಭ್ ಮತ್ತು ಖಾನ್ ಕ್ರೀಸ್‌ನಲ್ಲಿದ್ದರು.  ಮಧ್ಯಾಹ್ನ 1.50ರವರೆಗೂ ಆಟ ಸ್ಥಗಿತವಾಯಿತು. ಭಾರತ ತಂಡವು 462 ರನ್‌ಗಳಿಗೆ ಆಲೌಟ್ ಆದ ನಂತರ ಕಿವೀಸ್ ಬ್ಯಾಟಿಂಗ್ ಆರಂಭಿಸಿತು. ಜಸ್‌ಪ್ರೀತ್ ಬೂಮ್ರಾ ನಾಲ್ಕು ಎಸೆತ ಹಾಕಿದ್ದಾಗ ಮಂದಬೆಳಕು ಹೆಚ್ಚಿತು. ಕಿವೀಸ್ ಬ್ಯಾಟರ್‌ಗಳು ಆಟ ಮುಂದುವರಿಸಲು ಇಚ್ಛಿಸಲಿಲ್ಲ. ಅಂಪೈರ್‌ಗಳು ಆಟ ಸ್ಥಗಿತ ಮಾಡಿದಾಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಅಂಪೈರ್‌ಗಳೊಂದಿಗೆ ಮಾತನಾಡಿದರು. ಇದಾಗಿ ಕೆಲವೇ ನಿಮಿಷಗಳ ನಂತರ ಜೋರಾಗಿ ಮಳೆ ಸುರಿಯಿತು.

ಇಂದೂ ಮಳೆಯಾಟದ ಸಾಧ್ಯತೆ

ಬೆಂಗಳೂರಿನಲ್ಲಿ ಭಾನುವಾರವೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಇದರಿಂದಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಟೆಸ್ಟ್ ಪಂದ್ಯದ ಕೊನೆಯ ದಿನದಾಟ ವ್ಯತ್ಯಯವಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.