ADVERTISEMENT

ನ್ಯೂಜಿಲೆಂಡ್ ಎದುರಿನ ಸರಣಿ ಸೋಲು: 'ಸೀನಿಯರ್ ಆಟಗಾರರ ವೈಫಲ್ಯ ಕಾರಣ'

ಗಂಭೀರ್‌ ಪರ ದಿನೇಶ್, ಮಾಂಜ್ರೇಕರ್ ಬ್ಯಾಟಿಂಗ್

ಪಿಟಿಐ
Published 27 ಅಕ್ಟೋಬರ್ 2024, 14:39 IST
Last Updated 27 ಅಕ್ಟೋಬರ್ 2024, 14:39 IST
<div class="paragraphs"><p>ಭಾರತ ಕ್ರಿಕೆಟ್ ತಂಡ</p></div>

ಭಾರತ ಕ್ರಿಕೆಟ್ ತಂಡ

   

– ಪಿಟಿಐ ಚಿತ್ರ

ನವದೆಹಲಿ: ನ್ಯೂಜಿಲೆಂಡ್ ತಂಡದ ಎದುರು ಭಾರತ ತಂಡವು ಸರಣಿ ಸೋತಿರುವ ಹೊಣೆಯನ್ನು ಅನುಭವಿ ಆಟಗಾರರೇ ತೆಗೆದುಕೊಳ್ಳಬೇಕು ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ ಎಂದು ಮಾಜಿ ಕ್ರಿಕೆಟಿಗರಾದ ದಿನೇಶ್ ಕಾರ್ತಿಕ್ ಮತ್ತು ಸಂಜಯ್ ಮಾಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.  

ADVERTISEMENT

ಪುಣೆಯಲ್ಲಿ ಶನಿವಾರ ಮುಕ್ತಾಯವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 113 ರನ್‌ಗಳಿಂದ ಸೋತಿತು. ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವು 2–0ಯಿಂದ ಮುನ್ನಡೆ ಪಡೆಯಿತು. ಇದರೊಂದಿಗೆ ತವರಿನಂಗಳದಲ್ಲಿ ಸತತ 18 ಟೆಸ್ಟ್‌ ಸರಣಿಗಳನ್ನು ಗೆದ್ದಿದ್ದ ಭಾರತದ ಅಜೇಯ ಓಟಕ್ಕೂ ತಡೆ ಬಿದ್ದಿತು. 

ಎರಡೂ ಪಂದ್ಯಗಳಲ್ಲಿ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಈ ಸರಣಿಯ ಎರಡೂ ಪಂದ್ಯಗಳಲ್ಲಿ ರನ್‌ ಗಳಿಸಲು ಪರದಾಡಿದ್ದಾರು. ಅವರು ಉತ್ತಮ ಲಯದಲ್ಲಿ ಇಲ್ಲ. ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರೂ ನಿರೀಕ್ಷಿತ ಪರಿಣಾಮ ಬೀರಿಲ್ಲ.

‘ಸೀನಿಯರ್ ಆಟಗಾರರು ತಾವು ಮಾಡಿರುವ ಸಾಧನೆ ಏನು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಈ ಹೊಣೆಯಿಂದ ಅವರು ನುಣುಚಿಕೊಳ್ಳಲು ಸಾಧ್ಯವಿಲ್ಲ. ತಂಡ ಗೆದ್ದಾಗ ಅಭಿಮಾನಿಗಳು ಅಪಾರವಾಗಿ ಸಂಭ್ರಮಿಸುತ್ತಾರೆ. ಆಗ ನೀವು ಕೂಡ ಸಡಗರಪಡುತ್ತೀರಿ. ಸೋತಾಗ ಅಭಿಮಾನಿಗಳು ಟೀಕಿಸುತ್ತಾರೆ. ಅವುಗಳನ್ನು ಎದುರಿಸುವ ಧೈರ್ಯವನ್ನು ಸೀನಿಯರ್ಸ್ ತೋರಿಸಬೇಕು. ಆದ್ದರಿಂದ ಸೀನಿಯರ್ ಆಟಗಾರರೇ ಸೋಲಿನ ಹೊಣೆಯನ್ನು ತೆಗೆದುಕೊಳ್ಳಬೇಕು’ ಎಂದು ‘ಕ್ರಿಕ್‌ಬಜ್‌’  ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ. 

ಮುಖ್ಯ ಕೋಚ್ ಗಂಭೀರ್ ಅವರ ಬಗ್ಗೆ ಟೀಕೆಗಳು ಬಹಳಷ್ಟು ಕೇಳಿಬರುತ್ತಿವೆ. 

‘ಈ ಸೋಲಿನಲ್ಲಿ ಗೌತಮ್ ಗಂಭೀರ್ ಅವರ ಪಾತ್ರ ತೀರಾ ಚಿಕ್ಕದು. ಆದರೆ ವಾಷಿಂಗ್ಟನ್ ಸುಂದರ್ ಅವರನ್ನು ಅಂತಿಮ 11ರಲ್ಲಿ ಆಯ್ಕೆ ಮಾಡಿ ಕಣಕ್ಕಿಳಿಸಿದ ಅವರ ಕ್ರಮವನ್ನು ಶ್ಲಾಘಿಸಬೇಕು. ವಾಷಿಂಗ್ಟನ್ ಉತ್ತಮವಾಗಿ ಬೌಲಿಂಗ್ ಮಾಡಿದರು’ ಎಂದು ಮಾಂಜ್ರೇಕರ್ ಅವರು ‘ಇಎಸ್‌ಪಿಎನ್‌ಕ್ರಿಕ್‌ಇನ್ಫೋ’ಗೆ ಹೇಳಿಕೆ ನೀಡಿದ್ದಾರೆ. 

‘ನಾಲ್ವರು ಸ್ಪಿನ್ನರ್‌ಗಳನ್ನು ಆಡಿಸಿದ್ದರೆ ಸೂಕ್ತವಾಗುತ್ತಿತ್ತು. ಆದರೂ ಗೌತಮ್‌  ಅವರ ಮೇಲೆ ಸೋಲಿನ ಹೊಣೆ ಹೊರಿಸುವುದು ತಪ್ಪು. ತಂಡದ ಆಟಗಾರರ ಪ್ರದರ್ಶನದ ಮುಂದೆ ಕೋಚ್ ಪ್ರಭಾವ ಕಡಿಮೆ ಇರುತ್ತದೆ’ ಎಂದರು. 

‘ಸರ್ಫರಾಜ್ ಖಾನ್ ಅವರಿಗಿಂತ ಮೊದಲು ವಾಷಿಂಗ್ಟನ್ ಸುಂದರ್ ಅವರನ್ನು ಬ್ಯಾಟಿಂಗ್‌ ಕಳಿಸಿದ್ದು ಯಾಕೆ? ಅವರು ಎಡಗೈ ಬ್ಯಾಟರ್ ಎಂಬ ಕಾರಣಕ್ಕಾಗಿಯೇ? ಇಂತಹ ಯೋಚನೆಯೇ ವಿಚಿತ್ರ. ಈ ತರಹ ಆಗಬಾರದು. ನಾಯಕ ರೋಹಿತ್ ಶರ್ಮಾ ಈ ವಿಷಯದಲ್ಲಿ ಜಾಗರೂಕರಾಗಬೇಕು. ಟಿ20 ಮಾದರಿಯ ಯೋಚನಾಲಹರಿಯನ್ನು ಟೆಸ್ಟ್‌ನಲ್ಲಿ ತರುವುದು ಸರಿಯಲ್ಲ. ಬ್ಯಾಟರ್‌ಗಳ ಸಾಮರ್ಥ್ಯದ ಆಧಾರದಲ್ಲಿ ಕ್ರಮಾಂಕ ನಿರ್ಧರಿಸಬೇಕು. ಕೇವಲ ಬಲಗೈ ಮತ್ತು ಎಡಗೈ ಸಂಯೋಜನೆಯನ್ನು ನೋಡಬಾರದು’ ಎಂದು ಮಾಂಜ್ರೇಕರ್ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.