ಕಾನ್ಪುರ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಇಲ್ಲಿನ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.
ಮಳೆಯ ಅಡಚಣೆಯಿಂದಾಗಿ ಪಂದ್ಯವನ್ನು ಅರ್ಧ ದಿನಕ್ಕೆ ನಿಲ್ಲಿಸಲಾಯಿತು. ಮೊದಲ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 35 ಓವರ್ಗಳಲ್ಲಿ 3 ವಿಕೆಟ್ಗೆ 107 ರನ್ ಗಳಿಸಿದೆ.
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಮಳೆಯ ಕಾರಣದಿಂದ ಪಂದ್ಯ ತಡವಾಗಿ ಆರಂಭವಾಯಿತು. 35 ಓವರ್ಗಳು ಆಗುವಷ್ಟರಲ್ಲಿ ಜೋರಾಗಿ ಮಳೆ ಸುರಿಯಿತು. ಆಗಾಗಿ ಪಂದ್ಯವನ್ನು ನಿಲ್ಲಿಸಲಾಯಿತು.
ಆರಂಭಿಕರಾದ ಝಾಕೀರ್ ಹಸನ್ (0) ಹಾಗೂ ಶದ್ಮಾನ್ ಇಸ್ಲಾಂ (24) ಅವರನ್ನು ಬಲಗೈ ವೇಗಿ ಆಕಾಶ್ ದೀಪ್ ಹೊರದಬ್ಬಿದ್ದಾರೆ. ನಾಯಕ ನಜ್ಮುಲ್ ಹುಸೇನ್ ಶಾಂತೊ (31) ಅವರನ್ನು ಅಶ್ವಿನ್ ಸ್ಪಿನ್ ಬಲೆಗೆ ಕೆಡವಿದರು.
ಮೊಮಿನುಲ್ ಹಕ್ (40*) ಹಾಗೂ ರಹೀಮ್ (6*) ಕ್ರೀಸಿನಲ್ಲಿದ್ದಾರೆ.
ಭಾರತ ತಂಡ ಆಡುವ ಹನ್ನೊಂದರ ಬಳಗ ಇಂತಿದೆ:
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಲ್.ರಾಹುಲ್, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್.
ದಾಖಲೆ ಮೇಲೆ ಭಾರತ ಕಣ್ಣು...
ದೇಶದಲ್ಲಿ ಹದಿನೆಂಟನೇ ಟೆಸ್ಟ್ ಸರಣಿಯನ್ನು ಜಯಿಸಿ ದಾಖಲೆ ಬರೆಯುವತ್ತ ಆತಿಥೇಯ ಭಾರತ ತಂಡ ಕಣ್ಣಿಟ್ಟಿದೆ.
ಚೆನ್ನೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ 280 ರನ್ ಅಂತರದ ಜಯ ಸಾಧಿಸಿತ್ತು. ರವಿಚಂದ್ರನ್ ಅಶ್ವಿನ್ ಶತಕ ಹಾಗೂ ಆರು ವಿಕೆಟ್ ಸಾಧನೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.