ಚೆನ್ನೈ (ಪಿಟಿಐ): ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಮತ್ತು ದಕ್ಷಿಣ ಆಫ್ರಿಕಾ ನಡುವಣ ಭಾನುವಾರ ಎರಡನೇ ಟಿ20 ಪಂದ್ಯ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಸೋತಿರುವ ಆತಿಥೇಯ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಹೋರಾಟವಾಗಿದೆ. ಲೌರಾ ವೊಲ್ವಾರ್ಟ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಮೂರು ಟಿ20 ಪಂದ್ಯಗಳಸರಣಿಯಲ್ಲಿ ಈಗಾಗಲೇ 1–0 ಮುನ್ನಡೆಯಲ್ಲಿದೆ. ಈ ಪಂದ್ಯವನ್ನೂ ಜಯಿಸಿದರೆ ಸರಣಿ ಕೈವಶವಾಗಲಿದೆ. ಇದರೊಂದಿಗೆ ಏಕದಿನ ಸರಣಿ ಮತ್ತು ಏಕೈಕ ಟೆಸ್ಟ್ ಸೋಲಿನ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ಪ್ರವಾಸಿ ಬಳಗಕ್ಕೆ ಇದೆ.
ಮೊದಲ ಪಂದ್ಯದಲ್ಲಿ ಭಾರತ ತಂಡದವರ ಕಳಪೆ ಫೀಲ್ಡಿಂಗ್ ಮತ್ತು ಹೆಚ್ಚು ಪರಿಣಾಮಕಾರಿಯಲ್ಲದ ಬೌಲಿಂಗ್ ಸೋಲಿಗೆ ಕಾರಣವಾಗಿದ್ದವು. ದಕ್ಷಿಣ ಆಫ್ರಿಕಾದ ತಾಜ್ಮಿನ್ ಬ್ರಿಟ್ಸ್ ಮತ್ತು ಮರೈಝೇನ್ ಕಾಪ್ ಅವರ ಅಬ್ಬರದ ಅರ್ಧಶತಕ ಗಳಿಸಿದರು. ಅವರನ್ನು ಕಟ್ಟಿಹಾಕುವಲ್ಲಿ ಬೌಲರ್ಗಳು ವಿಫಲರಾದರು.
ಆದರೆ ಗುರಿ ಬೆನ್ನಟ್ಟಿದ ತಂಡಕ್ಕೆ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅವರು ಉತ್ತಮ ಆರಂಭ ನೀಡಿದ್ದರು. ಮೊದಲ ಐದು ಓವರ್ಗಳಲ್ಲಿಯೇ 56 ರನ್ ಕಲೆಹಾಕಿದ್ದರು. ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್ ಮತ್ತು ಜೆಮಿಮಾ ರಾಡ್ರಿಗಸ್ ಅವರೂ ದಿಟ್ಟ ಹೋರಾಟ ಮಾಡಿದರು. ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದರೂ ತಂಡವು ಗುರಿ ಮುಟ್ಟಲಾಗಲಿಲ್ಲ.
ಆದ್ದರಿಂದ ಈ ಪಂದ್ಯದಲ್ಲಿ ಬೌಲರ್ಗಳು ತಮ್ಮ ಹಿಂದಿನ ಲೋಪಗಳನ್ನು ಸರಿಪಡಿಸಿಕೊಂಡು ದಾಳಿ ಮಾಡಬೇಕಿದೆ. ಫೀಲ್ಡಿಂಗ್ ಲೋಪಗಳೂ ಸುಧಾರಣೆಯಾದರೆ, ತಂಡದ ಸರಣಿ ಕನಸು ಜೀವಂತವಾಗುಳಿಯಬಹುದು.
ರಿಚಾಗೆ ಗಾಯ: ಪಂದ್ಯದಲ್ಲಿ ಗಾಯಗೊಂಡಿದ್ದ ಭಾರತ ತಂಡದ ವಿಕೆಟ್ಕೀಪರ್–ಬ್ಯಾಟರ್ ರಿಚಾ ಘೋಷ್ ಈ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
‘ಅವರಿಗೆ ಮುಖಕ್ಕೆ ಚೆಂಡು ಬಡಿದ ಕಾರಣ ಕುತ್ತಿಗೆ ನೋವು ಮತ್ತು ತಲೆಸುತ್ತುವ ಸಮಸ್ಯೆ ಇದೆ. ಅವರಿಗೆ ಹೆಚ್ಚುವರಿ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳಿಸಲಾಗಿದೆ. ತಂಡದ ವೈದ್ಯರು ನಿಗಾ ವಹಿಸಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಪಂದ್ಯ ಆರಂಭ: ರಾತ್ರಿ 7
ನೇರಪ್ರಸಾರ: ಸ್ಪೋರ್ಟ್ಸ್ 18
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.