ಕೋಲ್ಕತ್ತ: ಏಪ್ರಿಲ್ 17ರಂದು ರಾಜಸ್ತಾನ ರಾಯಲ್ಸ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ತವರು ಪಂದ್ಯ ಅಂದು ರಾಮನವಮಿ ಹಬ್ಬದ ಪ್ರಯುಕ್ತ ಬದಲಾವಣೆ ಆಗುವ ಸಾಧ್ಯತೆ ಇದೆ.
ಪಂದ್ಯಕ್ಕೆ ಸೂಕ್ತ ರೀತಿ ಭದ್ರತೆ ಒದಗಿಸುವ ವಿಷಯದಲ್ಲಿ ಸ್ಥಳೀಯ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಬಿಸಿಸಿಐಗೆ ತಿಳಿಸಿದೆ.
ಬಂಗಾಳದಲ್ಲಿ ಏಳು ಹಂತದ ಚುನಾವಣೆ ನಡೆಯಲಿದ್ದು ಮೊದಲ ಹಂತದ ಚುನಾವಣೆ ಏ. 19ರಂದು ನಿಗದಿಯಾಗಿದೆ. ‘ಹೆಚ್ಚಿನ ಸಂಖ್ಯೆಯ ಪೊಲೀಸರು ಚುನಾವಣಾ ಕಾರ್ಯಕ್ಕೆ ನಿಯೋಜನೆಯಾಗಿರುವ ಕಾರಣ ಪಂದ್ಯಕ್ಕೆ ಭದ್ರತೆ ವ್ಯವಸ್ಥೆ ಕಲ್ಪಿಸುವುದು ಕಷ್ಟ’ ಎಂದು ಕೋಲ್ಕತ್ತ ಪೊಲೀಸರು ಸಿಎಬಿ ಅಧ್ಯಕ್ಷ ಸ್ನೇಹಾಶಿಶ್ ಗಂಗೂಲಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಈ ಪಂದ್ಯವನ್ನು, ಒಂದು ದಿನ ಮೊದಲು (ಏ. 16) ಅಥವಾ ಒಂದು ದಿನ ನಂತರ (ಏಪ್ರಿಲ್ 18ಕ್ಕೆ) ಮುಂದೂಡಬಹುದು ಎಂದು ಸಿಎಬಿ ಸಲಹೆ ನೀಡಿದೆ.
‘ಬಂಗಾಳದಿಂದ ವಿನಂತಿ ಬಂದಿದೆ. ಆದರೆ ನಾವು ಹೊಸ ದಿನಾಂಕದ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಆದರೆ ದಿನಾಂಕ ಬದಲಾವಣೆ ಸುಲಭವಲ್ಲ. ತಂಡಗಳು ಪ್ರಯಾಣ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಪ್ರಸಾರ ಸಂಸ್ಥೆಯವರೂ ಮರುಹೊಂದಾಣಿಕೆ ಮಾಡಬೇಕಾಗುತ್ತದೆ. ಟಿಕೆಟ್ ನೀಡುವ ವಿಷಯದಲ್ಲೂ ತೊಂದರೆಯಾಗುತ್ತದೆ. ಒಟ್ಟಾರೆ ಇದೆಲ್ಲಾ ತಲೆನೋವಿನ ಕೆಲಸ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.