ADVERTISEMENT

ಲಂಕಾ ತಂಡಕ್ಕೆ ಹಂಗಾಮಿ ಕೋಚ್ ಆಗಿ ಜಯಸೂರ್ಯ

ಭಾರತ ವಿರುದ್ಧ ಟಿ20, ಏಕದಿನ ಸರಣಿ

ಪಿಟಿಐ
Published 8 ಜುಲೈ 2024, 12:41 IST
Last Updated 8 ಜುಲೈ 2024, 12:41 IST
ಸನತ್ ಜಯಸೂರ್ಯ
ಸನತ್ ಜಯಸೂರ್ಯ   

ಕೊಲಂಬೊ: ಶ್ರೀಲಂಕಾ ತಂಡದ ಮಾಜಿ ನಾಯಕ ಸನತ್ ಜಯಸೂರ್ಯ ಅವರು ಭಾರತ ವಿರುದ್ಧ ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ನಿಯಮಿತ ಓವರುಗಳ ಕ್ರಿಕೆಟ್‌ ಸರಣಿಗೆ ಹಂಗಾಮಿ ಹೆಡ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

ಜುಲೈ 27ರಿಂದ ನಡೆಯುವ ಶ್ರೀಲಂಕಾ ಪ್ರವಾಸದಲ್ಲಿ ಭಾರತ ಮೂರು ಟಿ20 ಪಂದ್ಯಗಳನ್ನು ಮತ್ತು ಅಷ್ಟೇ ಸಂಖ್ಯೆಯ ಏಕದಿನ ಪಂದ್ಯಗಳನ್ನು ಆಡಲಿದೆ.

ತಮ್ಮ ಕ್ರಿಕೆಟ್‌ ಜೀವನದಲ್ಲಿ ಬೀಸಾಟಕ್ಕೆ ಹೆಸರಾಗಿದ್ದ ಜಯಸೂರ್ಯ ಅವರು ಕ್ರಿಸ್‌ ಸಿಲ್ವರ್‌ವುಡ್‌ ಸ್ಥಾನ ನಿಭಾಯಿಸಲಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡದ ಕಳಪೆ ಪ್ರದರ್ಶನದ ನಂತರ ಸಿಲ್ವರ್‌ವುಡ್‌ ಮುಖ್ಯ ಕೋಚ್‌ ಸ್ಥಾನ ತ್ಯಜಿಸಿದ್ದರು. ಲಂಕಾ ಲೀಗ್‌ ಹಂತದಲ್ಲೇ ಹೊರಬಿದ್ದಿತ್ತು.

ADVERTISEMENT

ಈ ಹಿಂದೆ ಆಯ್ಕೆ ಸಮಿತಿ ಮುಖ್ಯಸ್ಥರಾಗಿಯೂ ಕೆಲಸ ಮಾಡಿರುವ ಜಯಸೂರ್ಯ, ಇಂಗ್ಲೆಂಡ್‌ಗೆ ಟೆಸ್ಟ್‌ ಪ್ರವಾಸ ಕೈಗೊಳ್ಳುವ ತಂಡಕ್ಕೂ ಕೋಚ್‌ ಆಗಿ ಮುಂದುವರಿಯಲಿದ್ದಾರೆ. ಎಂದು ‘ದಿ ಡೈಲಿ ಮಿರರ್‌’ ಪತ್ರಿಕೆ ವರದಿ ಮಾಡಿದೆ.

1991 ರಿಂದ 2007ರವರೆಗೆ 110 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 40.07 ಸರಾಸರಿಯಲ್ಲಿ 6,973 ರನ್ ಗಳಿಸಿದ್ದಾರೆ. 14 ಶತಕಗಳು ಮತ್ತು 31 ಅರ್ಧಶತಕಗಳು ಇದರಲ್ಲಿ ಒಳಗೊಂಡಿವೆ. 445 ಏಕದಿನ ಪಂದ್ಯಗಳಲ್ಲಿ ಅವರು 13,430 ರನ್ ಕಲೆಹಾಕಿದ್ದು, ಇದರಲ್ಲಿ 28 ಶತಕಗಳು, 68 ಅರ್ಧಶತಕಗಳು ಅಡಕವಾಗಿವೆ. 1996ರಲ್ಲಿ ವಿಶ್ವಕಪ್‌ ಗೆದ್ದ ಲಂಕಾ ತಂಡದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಲಂಕಾ ಸಂಸತ್‌ ಸದಸ್ಯರಾಗಿಯೂ ಅವರು ಒಮ್ಮೆ ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.