ADVERTISEMENT

ರಣಜಿ ಟ್ರೋಫಿ: ಕರ್ನಾಟಕಕ್ಕೆ ಇಂದಿನಿಂದ ಕೇರಳ ಸವಾಲು

‘ಸಿ’ ಗುಂಪಿನ ಪಂದ್ಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 23:30 IST
Last Updated 17 ಅಕ್ಟೋಬರ್ 2024, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಮಧ್ಯಪ್ರದೇಶ ವಿರುದ್ಧ ಈ ಬಾರಿಯ ರಣಜಿ ಟ್ರೋಫಿ ಅಭಿಯಾನ ಆರಂಭಿಸಿರುವ ಕರ್ನಾಟಕ ಮಳೆಯಿಂದಾಗಿ ಅಪೂರ್ಣಗೊಂಡ ಪಂದ್ಯದಲ್ಲಿ ಒಂದು ಪಾಯಿಂಟ್‌ ಅಷ್ಟೇ ಪಡೆದಿದೆ. ಕರ್ನಾಟಕ ತಂಡ ಶುಕ್ರವಾರ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುವ ‘ಸಿ’ ಗುಂಪಿನ ಎರಡನೇ ಪಂದ್ಯದಲ್ಲಿ ಕೇರಳ ತಂಡವನ್ನು ಎದುರಿಸಲಿದ್ದು, ಮಳೆಯ ಮುನ್ಸೂಚನೆ ಈ ಪಂದ್ಯಕ್ಕೂ ಇದೆ.

ಇಂದೋರ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮಳೆಯಿಂದಾಗಿ ಮೊದಲ ಇನಿಂಗ್ಸ್‌ ಪೂರ್ಣಗೊಂಡಿರಲಿಲ್ಲ. ಎರಡನೇ ದಿನ ಆಟವೇ ನಡೆದಿರಲಿಲ್ಲ. ಮಂದಬೆಳಕು, ತೇವಗೊಂಡಿದ್ದ ಪಿಚ್‌ನಿಂದವೂ ಸಾಕಷ್ಟು ಅವಧಿಯೂ ನಷ್ಟವಾಗಿತ್ತು. ಬೆಂಗಳೂರಿನಲ್ಲಿ ಗುರುವಾರ ಬಿಸಿಲು ಕಾಣಿಸಿದ್ದು, ತಂಡ ಸ್ವಲ್ಪ ನಿಟ್ಟುಸಿರುಬಿಡುವಂತೆ ಮಾಡಿದೆ.

ADVERTISEMENT

ಬುಧವಾರ, ಆಲೂರಿನ ಕ್ರೀಡಾಂಗಣದ ಹೊರಾಂಗಣ ಮತ್ತು ಪ್ರಾಕ್ಟೀಸ್‌ ಪಿಚ್‌ಗಳು ತೇವಗೊಂಡಿದ್ದವು. ‘ಆಡುವ ಪಿಚ್‌ ಸುಸ್ಥಿತಿಯಲ್ಲಿದೆ. ಆದರೆ ಔಟ್‌ಪೀಲ್ಡ್‌ನ ಕೆಲಭಾಗ ತೇವಗೊಂಡಿದೆ. ಬಿಸಿಲು ಬಿದ್ದು ಪಂದ್ಯ ಸಕಾಲಕ್ಕೆ ಆರಂಭವಾಗಬಹುದೆಂಬ ವಿಶ್ವಾಸದಲ್ಲಿದ್ದೇವೆ’ ಎಂದು ಕರ್ನಾಟಕ ತಂಡದ ಕೋಚ್‌ ಯರೇ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನೊಂದು ಕಡೆ ಕೇರಳ, ತಿರುವಂತಪುರ ಸಮೀಪದ ತುಂಬಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಉತ್ತಮ ಆರಂಭ ಮಾಡಿದೆ.

ಈ ಪಂದ್ಯಕ್ಕೆ ಕರ್ನಾಟಕವು, ಅನುಭವಿ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರನ್ನು ಕಳೆದುಕೊಂಡಿದೆ. ವಿದ್ವತ್ ಕಾವೇರಪ್ಪ ಅವರೂ ಗಾಯಾಳಾಗಿ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ತಂಡವು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಶ್ರಮ ಹಾಕಬೇಕಾಗಿದೆ.

ಮಧ್ಯಪ್ರದೇಶ ವಿರುದ್ಧ ಬೌಲರ್‌ಗಳೂ ಪರಿಣಾಮಕಾರಿಯಾಗಿರಲಿಲ್ಲ. ಇದರಿಂದ ಆತಿಥೇಯರು 3 ವಿಕೆಟ್‌ ಬೇಗನೇ ಕಳೆದುಕೊಂಡರೂ ಚೇತರಿಸಿಕೊಡು (8 ವಿಕೆಟ್‌ಗೆ) 425 ರನ್‌ಗಳ ದೊಡ್ಡಮೊತ್ತ ಗಳಿಸಲು ಸಾಧ್ಯವಾಯಿತು.

ಮೊದಲ ಪಂದ್ಯದಲ್ಲಿ ನಾಯಕ ಮಯಂಕ್ ಅಗರವಾಲ್, ಉಪನಾಯಕ ಮನಿಷ್ ಪಾಂಡೆ ಮತ್ತು ದೇವದತ್ತ ಪಡಿಕ್ಕಲ್ ಬೇಗ ನಿರ್ಗಮಿಸಿದ್ದರು. ಆರಂಭ ಆಟಗಾರನಾಗಿ ಬಡ್ತಿ ಪಡೆದ ನಿಕಿನ್ ಜೋಸ್ (99) ಮತ್ತು ಆಲ್‌ರೌಂಡರ್ ಶ್ರೇಯಸ್‌ ಗೋಪಾಲ್ (60) ಕುಸಿತ ತಡೆದಿದ್ದರು. ನಿಕಿನ್ ಈ ಇನಿಂಗ್ಸ್‌ ಮೂಲಕ ಲಯಕ್ಕೆ ಮರಳಿದ್ದಾರೆ.

ಆತಿಥೇಯ ತಂಡವು, ತಂಡದ ಹಿರಿಯ ಆಟಗಾರರಾದ ಮಯಂಕ್ ಮತ್ತು ಮನಿಷ್‌ ಅವರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ.

ಇನ್ನೊಂದೆಡೆ ಸಚಿನ್ ಬೇಬಿ ಸಾರಥ್ಯದ ಕೇರಳ ತಂಡಕ್ಕೆ ಭಾರತ ತಂಡದ ಆಟಗಾರ ಸಂಜು ಸ್ಯಾಮ್ಸನ್ ಸೇರ್ಪಡೆಯಿಂದ ಬಲವರ್ಧಿಸಲಿದೆ. ಹೈದರಾಬಾದಿನಲ್ಲಿ ಇತ್ತೀಚೆಗಷ್ಟೆ ಬಾಂಗ್ಲಾ ವಿರುದ್ಧ ಟಿ20 ಪಂದ್ಯದಲ್ಲಿ ಮಿಂಚಿನ ಶತಕ ಬಾರಿಸಿದ್ದ ಸಂಜು, ಈ ಬಾರಿ ದುಲೀಪ್ ಟ್ರೋಫಿಯಲ್ಲೂ ಗಮನಾರ್ಹ ಆಟವಾಡಿದ್ದಾರೆ.

ವಿದರ್ಭ ತಂಡದಿಂದ ವಲಸೆ ಬಂದಿರುವ ಆದಿತ್ಯ ಸರ್ವಟೆ, ಪಂಜಾಬ್ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಧ್ಯಪ್ರದೇಶದಿಂದ ಕೆಲ ವರ್ಷಗಳ ಹಿಂದೆ ವಲಸೆ ಬಂದ ಆಲ್‌ರೌಂಡರ್ ಜಲಜ್‌ ಸಕ್ಸೆನಾ, ತಮಿಳುನಾಡಿನಿಂದ ಈ ವರ್ಷ ಸೇರ್ಪಡೆಯಾಗಿರುವ ಆಲ್‌ರೌಂಡರ್‌ ಬಾಬಾ ಅಪರಾಜಿತ್ ಜೊತೆ ಸರ್ವಟೆ ಸೇರಿ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕರ್ನಾಟಕ: ಮಯಂಕ್ ಅಗರ್‌ವಾಲ್ (ನಾಯಕ), ನಿಕಿನ್ ಜೋಸ್, ದೇವದತ್ತ ಪಡಿಕ್ಕಲ್, ಸ್ಮರಣ್ ಆರ್‌., ಮನಿಷ್‌ ಪಾಂಡೆ (ಉಪ ನಾಯಕ), ಶ್ರೇಯಸ್ ಗೋಪಾಲ್, ಸುಜಯ್ ಸಾತೇರಿ (ವಿಕೆಟ್‌ ಕೀಪರ್‌), ಹಾರ್ದಿಕ್ ರಾಜ್, ವೈಶಾಖ ವಿಜಯ್‌ಕುಮಾರ್, ವಾಸುಕಿ ಕೌಶಿಕ್, ಲವನೀತ್ ಸಿಸೋಡಿಯಾ, ಮೊಹ್ಸಿನ್ ಖಾನ್‌, ವಿದ್ಯಾಧರ ಪಾಟೀಲ, ಕಿಶನ್ ಎಸ್‌.ಬೆದರೆ, ಅಭಿಲಾಷ್ ಶೆಟ್ಟಿ.

ಕೇರಳ: ಸಚಿನ್ ಬೇಬಿ (ನಾಯಕ), ಮೊಹಮ್ಮದ್ ಅಜರುದ್ದೀನ್ (ವಿಕೆಟ್‌ ಕೀಪರ್), ಸಂಜು ಸ್ಯಾಮ್ಸನ್‌, ವತ್ಸಲ್ ಗೋವಿಂದ್, ರೋಹನ್ ಕುನ್ನುಮಾಳ್, ಬಾಬಾ ಅಪರಾಜಿತ್, ಅಕ್ಷಯ್ ಚಂದ್ರನ್, ಜಲಜ್ ಸಕ್ಸೇನಾ, ವಿಷ್ಣು ವಿನೋದ್‌, ಸಲ್ಮಾನ್ ನಿಜರ್‌, ಆದಿತ್ಯ ಸರ್ವಟೆ, ಬಾಸಿಲ್ ಥಂಪಿ, ಕೆ.ಎಂ.ಆಸಿಫ್‌, ಎಂ.ಡಿ.ನಿಧೀಶ್.

ಪಂದ್ಯ ಆರಂಭ: ಬೆಳಿಗ್ಗೆ 9.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.