ನ್ಯೂಯಾರ್ಕ್: ಟ್ವೆಂಟಿ-20 ವಿಶ್ವಕಪ್ ಟೂರ್ನಿಗಾಗಿ ನ್ಯೂಯಾರ್ಕ್ನಲ್ಲಿ ಹೊಸ ಪಿಚ್ ನಿರ್ಮಿಸಲಾಗಿದೆ. ಇಲ್ಲಿನ ಡ್ರಾಪ್-ಇನ್ ಪಿಚ್ನಲ್ಲಿ ಆಡುವುದು ಸುಲಭವಲ್ಲ. ಹಾಗಿದ್ದರೂ ಸತತ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಸೂಪರ್ ಎಂಟರ ಹಂತಕ್ಕೆ ಪ್ರವೇಶ ಪಡೆದಿರುವುದರಿಂದ ತುಂಬಾ ನಿರಾಳವಾಗಿದ್ದೇವೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
111ರ ಗುರಿ ಬೆನ್ನಟ್ಟಿದ ಭಾರತ ಪ್ರಯಾಸದ ಗೆಲುವು ದಾಖಲಿಸಿತ್ತು. ಆ ಮೂಲಕ ಪ್ರಸಕ್ತ ಸಾಗುತ್ತಿರುವ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಬಳಿಕ ಸೂಪರ್ 8ರ ಹಂತ ತಲುಪಿದ ಮೂರನೇ ತಂಡವೆನಿಸಿದೆ.
'ನಾವು ಆಡಿದ ಮೂರು ಪಂದ್ಯಗಳಲ್ಲಿ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಯಾವ ತಂಡ ಬೇಕಾದರೂ ಜಯ ಸಾಧಿಸಬಹುದಿತ್ತು. ಇತ್ತಂಡಗಳಿಗೂ ಸಮಾನ ಅವಕಾಶವಿತ್ತು. ಆದರೆ ಕೊನೆಯವರೆಗೂ ಪಂದ್ಯವನ್ನು ಕೊಂಡೊಯ್ಯುವ ಮೂಲಕ ಮೇಲುಗೈ ಸಾಧಿಸಲು ಯಶಸ್ವಿಯಾಗಿದ್ದೇವೆ' ಎಂದು ರೋಹಿತ್ ಹೇಳಿದ್ದಾರೆ.
'ಇದು ಕಠಿಣ ಗುರಿ ಎಂದು ಮನಗಂಡಿದ್ದೆವು. ಆರಂಭದಲ್ಲೇ ವಿಕೆಟ್ಗಳನ್ನು ಕಳೆದುಕೊಂಡೆವು. ಆದರೆ ಸೂರ್ಯಕುಮಾರ್ ಯಾದವ್ ಹಾಗೂ ಶಿವಂ ದುಬೆ ಪ್ರಬುದ್ಧತೆಯಿಂದ ಆಡಿದರು' ಎಂದು ಅವರು ಹೇಳಿದರು.
'ಅಮೆರಿಕ ತಂಡದ ಪ್ರಗತಿಯ ಬಗ್ಗೆಯೂ ರೋಹಿತ್ ಹೊಗಳಿದರು. ಅಮೆರಿಕ ತಂಡದಲ್ಲಿರುವ ಆಟಗಾರರೊಂದಿಗೆ ಆಡಿದ್ದೇನೆ. ಎಲ್ಲರೂ ಕಠಿಣ ಪರಿಶ್ರಮ ವಹಿಸುತ್ತಿದ್ದಾರೆ. ತಂಡವು ಮತ್ತಷ್ಟು ಬಲಿಷ್ಠಗೊಂಡಿದೆ' ಎಂದು ಹೇಳಿದ್ದಾರೆ.
ಈ ಸೋಲಿನ ಹೊರತಾಗಿಯೂ ಸೂಪರ್ ಎಂಟರ ಹಂತಕ್ಕೆ ಪ್ರವೇಶಿಸಲು ಅಮೆರಿಕಕ್ಕೆ ಮಗದೊಂದು ಅವಕಾಶ ಇದ್ದು, ಐರ್ಲೆಂಡ್ ವಿರುದ್ಧ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಗೆಲುವು ಗಳಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.