ಚೆನ್ನೈ: ಎರಡು ದಿನಗಳ ಕಾಲ ಕೆಂಪು ಮಣ್ಣಿನ ಪಿಚ್ನಲ್ಲಿ ಆಡಿದ ನಂತರ ಭಾರತ ಮತ್ತು ಬಾಂಗ್ಲಾದೇಶ ಆಟಗಾರರು ಮಂಗಳವಾರ ಕಪ್ಪುಮಣ್ಣಿನ ಅಂಕಣದಲ್ಲಿ ಆಡಿದರು. ಗುರುವಾರ ಇಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಕೆಂಪು ಮಣ್ಣಿನ ಪಿಚ್ ಲಭ್ಯವಾಗುವ ಸಾಧ್ಯತೆ ಹೆಚ್ಚು. ಅದು ವೇಗದ ಬೌಲರ್ಗಳಿಗೆ ಹೆಚ್ಚು ಅನುಕೂಲವಾಗಬಹುದು. ಕಪ್ಪುಮಣ್ಣಿನ ಅಂಕಣ ಲಭಿಸಿದರೆ ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗಬಹುದು.
ಚೆನ್ನೈನಲ್ಲಿ ಹವಾಮಾನ ವಿಚಿತ್ರವಾಗಿದೆ. ಇದಕ್ಕೆ ಅನುಗುಣವಾಗಿ ಪಿಚ್ ಕೂಡ ಇರಲಿದೆ.
‘ಇಲ್ಲಿ ಬಹಳ ಧಗೆಯ ವಾತಾವರಣ ಇದೆ. 30 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚು ತಾಪವಿದೆ. ಪಿಚ್ಗೆ ನೀರುಣಿಸುವ ಕಾರ್ಯ ಸಮರ್ಪಕವಾಗಿದೆ ಎಂದು ತಿಳಿದುಬಂದಿದೆ. ವಿಪರೀತ ತಾಪವು ಪಿಚ್ ಶುಷ್ಕತೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದು ಪರಿಣಾಮ ಬೀರುವುದು. ಪಂದ್ಯದ ಆರಂಭದಲ್ಲಿ ವೇಗದ ಬೌಲರ್ಗಳಿಗೆ ನೆರವಾಗಬಹುದು. ಪಂದ್ಯ ಸಾಗಿದಂತೆ ಸ್ಪಿನ್ನರ್ಗಳು ಮುಖ್ಯ ಪಾತ್ರ ವಹಿಸುವ ಸಾಧ್ಯತೆ ಹೆಚ್ಚು’ ಎಂದು ಅನುಭವಿ ಕ್ಯುರೇಟರ್ ಒಬ್ಬರು ತಿಳಿಸಿದ್ದಾರೆ.
ಭಾರತ ತಂಡದ ಬ್ಯಾಟರ್ಗಳು ಈಚೆಗೆ ಶ್ರೀಲಂಕಾ ಎದುರು ಸ್ಪಿನ್ನರ್ಗಳ ಮುಂದೆ ಮಂಕಾಗಿದ್ದರು. ಆದ್ದರಿಂದ ಇಲ್ಲಿ ಬಾಂಗ್ಲಾ ಸ್ಪಿನ್ನರ್ಗಳನ್ನು ಅವರು ಯಾವ ರೀತಿ ಎದುರಿಸುವರು ಎಂಬ ಕುತೂಹಲ ಗರಿಗೆದರಿದೆ.
ಭಾರತ ತಂಡದಲ್ಲಿಯೂ ಉತ್ತಮ ಸ್ಪಿನ್ನರ್ಗಳು ಇರುವುದು ಸಮಾಧಾನಕರ ಸಂಗತಿ. ಕುಲದೀಪ್ ಯಾದವ್ ಹೆಚ್ಚು ಪರಿಣಾಮ ಬೀರಬಲ್ಲರು. ಆದರೆ ವೇಗದ ಬೌಲಿಂಗ್ಗೆ ನೆರವು ಸಿಗುವ ಪಿಚ್ನಲ್ಲಿ ಭಾರತವು ಮೂರನೇ ವೇಗಿಯಾಗಿ ಆಕಾಶ್ ದೀಪ್ ಅಥವಾ ಯಶ್ ದಯಾಳ್ ಅವರಲ್ಲಿ ಒಬ್ಬರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಪಾಕಿಸ್ತಾನ ಎದುರು ಸರಣಿ ಗೆದ್ದು ಬಂದಿರುವ ಬಾಂಗ್ಲಾದೇಶ ತಂಡವು ಭರ್ತಿ ಆತ್ಮವಿಶ್ವಾಸದಲ್ಲಿದೆ. ಅವರು ತಮ್ಮ ಮಧ್ಯಮವೇಗದ ಬೌಲರ್ಗಳ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.