ಮುಂಬೈ: ತಮಿಳುನಾಡು ತಂಡದ ಮೇಲೆ ಇನಿಂಗ್ಸ್ ಮತ್ತು 70 ರನ್ಗಳಿಂದ ಜಯಗಳಿಸಿದ ನಲ್ವತ್ತೊಂದು ಬಾರಿಯ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ ಕ್ರಿಕೆಟ್ ತಂಡವು ಈಗ ಮತ್ತೊಂದು ಸಲ ಫೈನಲ್ ತಲುಪಿದೆ.
ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್ನಲ್ಲಿ ನಡೆದ ಈ ಸೆಮಿಫೈನಲ್ ಪಂದ್ಯವು ಮೂರು ದಿನಗಳಲ್ಲಿ ಮುಕ್ತಾಯವಾ ಯಿತು. ಮುಂಬೈ ತಂಡವು 48ನೇ ಸಲ ಫೈನಲ್ ತಲುಪಿದ ದಾಖಲೆ ಮಾಡಿತು.
ತಮಿಳುನಾಡು ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 146 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಮುಂಬೈ ತಂಡವು 106.5 ಓವರ್ಗಳಲ್ಲಿ 378 ರನ್ ಗಳಿಸಿತು. 232 ರನ್ಗಳ ದೊಡ್ಡ ಮುನ್ನಡೆ ಸಾಧಿಸಿತು.
ಮುಂಬೈ ತಂಡವು ಭಾನುವಾರ 106 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಾಗ ಶಾರ್ದೂಲ್ ಠಾಕೂರ್ ಶತಕ, ತನುಷ್ ಕೋಟ್ಯಾನ್ (ಅಜೇಯ 89) ಅವರು ತಂಡದ ಮೊತ್ತಕ್ಕೆ ಮಹತ್ವದ ಕಾಣಿಕೆ ನೀಡಿದರು .
ಭಾನುವಾರ ಬೌಲಿಂಗ್ನಲ್ಲಿಯೂ ಮಿಂಚಿದ ಶಾರ್ದೂಲ್ (16ಕ್ಕೆ2), ತನುಷ್ (18ಕ್ಕೆ2) ಮತ್ತು ಶಮ್ಸ್ ಮುಲಾನಿ (53ಕ್ಕೆ4) ತಮಿಳುನಾಡು ತಂಡವನ್ನು ಕಟ್ಟಿಹಾಕಿದರು. ತಮಿಳುನಾಡು ತಂಡಕ್ಕೆ 51.5 ಓವರ್ಗಳಲ್ಲಿ 162 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ತಂಡದ ಬಾಬಾ ಇಂದ್ರಜೀತ್ (70; 105ಎ, 4X9) ಏಕಾಂಗಿ ಹೋರಾಟ ಮಾಡಿದರು. ಆದರೆ ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್– ತಮಿಳುನಾಡು 146. ಮುಂಬೈ 106.5 ಓವರ್ಗಳಲ್ಲಿ 378 (ತನುಷ್ ಕೋಟ್ಯಾನ್ ಔಟಾಗದೆ 89, ಸಾಯಿಕಿಶೋರ್ 99ಕ್ಕೆ6) ಎರಡನೇ ಇನಿಂಗ್ಸ್: ತಮಿಳುನಾಡು: 51.5 ಓವರ್ಗಳಲ್ಲಿ 162 (ಬಾಬಾ ಇಂದ್ರಜಿತ್ 70, ಶಾರ್ದೂಲ್ ಠಾಕೂರ್ 16ಕ್ಕೆ2, ಶಮ್ಸ್ ಮುಲಾನಿ 53ಕ್ಕೆ4, ತನುಷ್ ಕೋಟ್ಯಾನ್ 18ಕ್ಕೆ2) ಫಲಿತಾಂಶ: ಮುಂಬೈ ತಂಡಕ್ಕೆ ಇನಿಂಗ್ಸ್ ಮತ್ತು 70 ರನ್ಗಳ ಜಯ.
ಅಮೋಘ ಬ್ಯಾಟಿಂಗ್ ಮಾಡಿದ ಯಶ್ ರಾಥೋಡ್ (ಬ್ಯಾಟಿಂಗ್ 97) ಅವರ ನೆರವಿನಿಂದ ವಿದರ್ಭ ತಂಡವು ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಎರಡನೇ ಸೆಮಿಫೈನಲ್ನಲ್ಲಿ ಮಧ್ಯಪ್ರದೇಶಕ್ಕೆ ತಿರುಗೇಟು ನೀಡಿದೆ.
ವಿದರ್ಭ ತಂಡವು ಮೊದಲ ಇನಿಂಗ್ಸ್ನಲ್ಲಿ ಹಿನ್ನಡೆ ಅನುಭವಿಸಿದೆ. ಫೈನಲ್ ತಲುಪಬೆಕೆಂದರೆ ಈ ಪಂದ್ಯದಲ್ಲಿ ಜಯಿಸುವುದೊಂದೇ ತಂಡಕ್ಕೆ ಇರುವ ದಾರಿ. ಮೂರನೇ ದಿನದಾಟದಲ್ಲಿ ರಾಥೋಡ್ ಮತ್ತು ನಾಯಕ ಅಕ್ಷಯ್ ವಾಡಕರ್ (77; 139ಎ) ದಿಟ್ಟ ಹೋರಾಟ ಮಾಡಿದರು. ಆರನೇ ವಿಕೆಟ್ ಜೊತೆಯಾಟ ದಲ್ಲಿ ಇವರಿಬ್ಬರೂ ಗಳಿಸಿದ 158 ರನ್ಗಳಿಂದಾಗಿ ವಿದರ್ಭ ತಂಡವು 261 ರನ್ಗಳ ಉತ್ತಮ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದ ಮುಕ್ತಾಯಕ್ಕೆ ಆತಿಥೇಯ ತಂಡವು 90 ಓವರ್ಗಳಲ್ಲಿ 6 ವಿಕೆಟ್ಗಳಿಗೆ 343 ರನ್ ಗಳಿಸಿದೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವಿದರ್ಭ: 56.4 ಓವರ್ಗಳಲ್ಲಿ 170. ಮಧ್ಯಪ್ರದೇಶ: 94.3 ಓವರ್ಗಳಲ್ಲಿ 252 (ಸಾರಾಂಶ್ ಜೈನ್ 30, ಸಾಗರ್ ಸೋಳಂಕಿ 26, ಉಮೇಶ್ ಯಾದವ್ 40ಕ್ಕೆ3, ಯಶ್ ಠಾಕೂರ್ 51ಕ್ಕೆ3, ಅಕ್ಷಯ್ ವಖಾರೆ 68ಕ್ಕೆ2) ಎರಡನೇ ಇನಿಂಗ್ಸ್: ವಿದರ್ಭ: 90 ಓವರ್ಗಳಲ್ಲಿ 6 ವಿಕೆಟ್ಗಳಿಗೆ 343 (ಧ್ರುವ ಶೋರೆ 40, ಅಮನ್ ಮೊಖಡೆ 59, ಕರುಣ್ ನಾಯರ್ 38, ಯಶ್ ರಾಥೋಡ್ ಬ್ಯಾಟಿಂಗ್ 97, ಅಕ್ಷಯ್ ವಾಡಕರ್ 77, ಆದಿತ್ಯ ಸರವಟೆ ಬ್ಯಾಟಿಂಗ್ 14, ಅನುಭವ್ ಅಗರವಾಲ್ 68ಕ್ಕೆ2, ಕುಮಾರ್ ಕಾರ್ತಿಕೆಯ 73ಕ್ಕೆ2)
ಈ ಸಲದ ರಣಜಿ ಟ್ರೋಫಿ ಫೈನಲ್ ಪಂದ್ಯ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮಾರ್ಚ್ 10 ರಿಂದ 14ರವರೆಗೆ ನಡೆಯಲಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಸೋಮವಾರ ತಿಳಿಸಿದೆ. ಮುಂಬೈ ತಂಡ ರಣಜಿ ಫೈನಲ್ಗೆ ಅರ್ಹತೆ ಪಡೆದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.