ಬೆಂಗಳೂರು: ಭಾನುವಾರ ಬೆಳಗಿನ ಜಾವದವರೆಗೂ ನಗರದಲ್ಲಿ ಸುರಿದ ಮಳೆಯಿಂದಾಗಿ ಆಲೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಕೇರಳ ನಡುವಿನ ರಣಜಿ ಟ್ರೋಫಿಯ ಎಲೀಟ್ ಸಿ ಗುಂಪಿನ ಪಂದ್ಯದ ಮೂರನೇ ದಿನದಾಟ ಒಂದೂ ಎಸೆತ ಕಾಣದೆ ರದ್ದಾಯಿತು.
ಆಲೂರಿನ ಕೆಎಸ್ಸಿಎ ಕ್ರೀಡಾಂಗಣವು ಮೊದಲೆರಡು ದಿನದಂತೆ ಭಾನುವಾರವೂ ಭಿನ್ನವಾಗಿರಲಿಲ್ಲ. ರಾತ್ರಿ ಸುರಿದ ಮಳೆಯಿಂದಾಗಿ ಮೈದಾನದ ವಿವಿಧ ಭಾಗಗಳು ತೇವಗೊಂಡಿದ್ದರಿಂದ ಆಟ ಸಾಧ್ಯವಾಗಲಿಲ್ಲ.
ಮೊದಲ ದಿನ ಕೇರಳ ತಂಡ 23 ಓವರುಗಳಲ್ಲಿ ಕೇರಳ ಮೊದಲ ಇನಿಂಗ್ಸ್ನಲ್ಲಿ ವಿಕೆಟ್ ನಷ್ಟವಿಲ್ಲದೇ 88 ರನ್ ಹೊಡೆದಿತ್ತು. ಎರಡನೇ ದಿನವಾದ ಶನಿವಾರ 27 ಓವರುಗಳ ಆಟ ಸಾಧ್ಯವಾಗಿತ್ತು. ಹೀಗಾಗಿ ಒಟ್ಟು 50 ಓವರ್ಗಳಲ್ಲಿ 3 ವಿಕೆಟ್ಗೆ 161 ರನ್ ಗಳಿಸಿದೆ.
ಪಂದ್ಯ ಮುಕ್ತಾಯಕ್ಕೆ ಇನ್ನು ಒಂದು ದಿನ ಮಾತ್ರ ಉಳಿದಿದೆ. ಹೀಗಾಗಿ, ಪಂದ್ಯ ಡ್ರಾನಲ್ಲಿ ಮುಕ್ತಾಯವಾಗುವುದು ಬಹುತೇಕ ಖಚಿತವಾಗಿದ್ದು, ಪಾಯಿಂಟ್ಸ್ ಹಂಚಿಕೆಯಾಗಲಿದೆ. ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಡ್ರಾ ಸಾಧಿಸಿರುವ ಕರ್ನಾಟಕ ತಂಡದ ಕ್ವಾರ್ಟರ್ ಫೈನಲ್ ಹಾದಿ ಇನ್ನಷ್ಟು ಕಠಿಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.