ಬೆಂಗಳೂರು: ಆಲೂರಿನ ಕೆಎಸ್ಸಿಎ ಕ್ರೀಡಾಂಗಣದ ಹೊರಾಂಗಣ ತೇವಗೊಂಡಿದ್ದ ಕಾರಣ ಕರ್ನಾಟಕ– ಕೇರಳ ನಡುವಣ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದ ಮೊದಲ ದಿನ ಹೆಚ್ಚಿನ ಅವಧಿಯ ಆಟ ನಷ್ಟವಾಯಿತು. ಕೇರಳ 23 ಓವರುಗಳ ಆಟದಲ್ಲಿ ವಿಕೆಟ್ ನಷ್ಟವಿಲ್ಲದೇ 88 ರನ್ ಗಳಿಸಿ ಉತ್ತಮ ಆರಂಭ ಮಾಡಿದೆ.
ಮಧ್ಯಾಹ್ನ 3.10ಕ್ಕೆ ಟಾಸ್ ನಡೆದಿದ್ದು, 3.30ಕ್ಕೆ ಪಂದ್ಯ ಆರಂಭವಾಯಿತು. 30 ಓವರುಗಳ ಆಟ ನಡೆಯಬೇಕಾಗಿತ್ತು. ಆದರೆ ಮಂದ ಬೆಳಕಿನ ಕಾರಣ ನಿಗದಿಗಿಂತ ಏಳು ಓವರ್ ಮೊದಲೇ ಆಟ ಕೊನೆಗೊಂಡಿತು.
ಟಾಸ್ ಗೆದ್ದ ಆತಿಥೇಯರು ಬೌಲ್ ಮಾಡಲು ನಿರ್ಧರಿಸಿದರು. ಆದರೆ ಯಶಸ್ಸು ಸಿಗಲಿಲ್ಲ. ಕೇರಳ ಆರಂಭ ಆಟಗಾರರಾದ ವತ್ಸಲ್ ಗೋವಿಂದ್ 31 ರನ್ (64ಎ, 4x4) ಮತ್ತು ರೋಹನ್ ಕುನ್ನುಮ್ಮಾಳ್ 57 ರನ್ (74ಎ, 4x, 6x1) ಗಳಿಸಿದ್ದು ಆಟವನ್ನು ಎರಡನೇ ದಿನಕ್ಕೆ ಕಾದಿರಿಸಿದರು.
ಕರ್ನಾಟಕ, ಮಧ್ಯಪ್ರದೇಶ ವಿರುದ್ದ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಂಡಿತು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕೇರಳ: 23 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ 88 (ವತ್ಸಲ್ ಗೋವಿಂದ್ ಬ್ಯಾಟಿಂಗ್ 31, ರೋಹನ್ ಕುನ್ನುಮ್ಮಾಳ್ ಬ್ಯಾಟಿಂಗ್ 57).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.