ADVERTISEMENT

ಅಂದು ಖಳನಾಯಕ, ಈಗ ಹೀರೊ!: ಜನರ ಪ್ರೀತಿ ಮರಳಿ ಗಳಿಸಿದ ಪಾಂಡ್ಯ

ಪಿಟಿಐ
Published 4 ಜುಲೈ 2024, 22:21 IST
Last Updated 4 ಜುಲೈ 2024, 22:21 IST
<div class="paragraphs"><p>ಹಾರ್ದಿಕ್‌ ಪಾಂಡ್ಯ</p></div>

ಹಾರ್ದಿಕ್‌ ಪಾಂಡ್ಯ

   

ಪಿಟಿಐ ಚಿತ್ರ

ಮುಂಬೈ: ಪುನರಾಗಮನದ ರೋಚಕ ಕಥೆಗಳಲ್ಲಿ ಹಾರ್ದಿಕ್‌ ಪಾಂಡ್ಯ ಅವರು ಮುಂಚೂಣಿಯಲ್ಲಿರಲು ಅರ್ಹರು. ತೀರಾ ಕುಗ್ಗಿದ ಮನೋಬಲದೊಡನೆ ಮುಂಬೈನಿಂದ ವಿಶ್ವಕಪ್‌ ತಂಡದ ಜೊತೆ ಹೊರಟಿದ್ದ ಅವರು ಒಂದೂವರೆ ತಿಂಗಳ ಅವಧಿಯಲ್ಲಿ ಹೀರೊ ಆಗಿ ಕನಸಿನ ನಗರಿಗೆ ಮರಳಿದ್ದಾರೆ.

ADVERTISEMENT

ಏಕದಿನ ವಿಶ್ವಕಪ್‌ ವೇಳೆ ಗಾಯಾಳಾಗಿ ಹೆಚ್ಚಿನ ಪಂದ್ಯಗಳನ್ನು ಕಳೆದುಕೊಂಡ ಪಾಂಡ್ಯ ನಂತರ ಸುದ್ದಿಯ ಕೇಂದ್ರವಾದರು. ರೋಹಿತ್ ಶರ್ಮಾ ಸ್ಥಾನದಲ್ಲಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ನಾಯಕರಾಗಿ ಹಠಾತ್ತನೇ ನೇಮಕಗೊಂಡ ಅವರು ನಂತರ ರೋಹಿತ್ ಅಭಿಮಾನಿಗಳಿಂದ ಮೂದಲಿಕೆಗೆ ಒಳಗಾದರು. ವೀಕ್ಷಕರ ವಿವರಣೆಗಾರ ಸಂಜಯ್‌ ಮಾಂಜ್ರೇಕರ್ ಅವರೇ ಪ್ರೇಕ್ಷಕರಿಗೆ ಸುಮ್ಮನಿರುವಂತೆ ಮನವಿ ಮಾಡಿದ್ದೂ ಇತ್ತು.

ಮುಂಬೈ ಇಂಡಿಯನ್ಸ್‌ ತಂಡ ಟೂರ್ನಿಯಿಂದ ಬೇಗನೇ ಹೊರಬಿದ್ದಿತ್ತು. ಸಾಲದ್ದಕ್ಕೆ ವಿಶ್ವಕಪ್‌ಗೆ ತೆರಳುವ ಕೆಲವೇ ದಿನಗಳ ಮೊದಲು ಪತ್ನಿ ನತಾಶಾ ಸ್ಟಾಂಕೊವಿಚ್‌ ಜೊತೆ ವಿಚ್ಛೇದನದ ವದಂತಿಗಳೂ ಹರಡಿದ್ದವು. ಇಷ್ಟರ ಮಧ್ಯೆಯೂ ಅವರ ಉತ್ಸಾಹ, ಮನೋಬಲ ಕಳೆದುಕೊಂಡಿರಲಿಲ್ಲ.

ಆದರೆ ವಿಶ್ವಕಪ್‌ನಲ್ಲಿ ತೋರಿದ ಉತ್ತಮ ಪ್ರದರ್ಶನದಿಂದ ಮತ್ತೆ ಜನಪ್ರೀತಿ ಗಳಿಸಿದರು. ರೋಡ್‌ ಶೋ ವೇಳೆ ಮತ್ತು ವಾಂಖೆಡೆ ಕ್ರೀಡಾಂಗಣದಲ್ಲಿ ಜನರು ಪಾಂಡ್ಯ ಅವರಿಗೆ ಹರ್ಷೋದ್ಗಾರಗೈದರು.

ವಿರಾಟ್‌ ಕೊಹ್ಲಿ ತಮ್ಮ ಭಾಷಣದಲ್ಲಿ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ನಲ್ಲಿ ಸೂರ್ಯಕುಮಾರ್‌ ಹಿಡಿದ ಅದ್ಭುತ ಕ್ಯಾಚ್‌ ಬಗ್ಗೆ ಪ್ರಸ್ತಾಪ ಮಾಡಿದಾಗ ಪ್ರೇಕ್ಷಕರಿಂದ ಹಾರ್ದಿಕ್‌... ಹಾರ್ದಿಕ್‌ ಘೋಷಣೆಗಳು ಜೋರಾಗಿಯೇ ಮೊಳಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.