ADVERTISEMENT

ಸಂಪೂರ್ಣ ಫಿಟ್ ಆಗದ ಹಿನ್ನೆಲೆ ಅಭಿಮಾನಿಗಳು, ಬಿಸಿಸಿಐ ಕ್ಷಮೆ ಕೇಳಿದ ಶಮಿ

ಪಿಟಿಐ
Published 27 ಅಕ್ಟೋಬರ್ 2024, 16:40 IST
Last Updated 27 ಅಕ್ಟೋಬರ್ 2024, 16:40 IST
<div class="paragraphs"><p>ಮೊಹಮ್ಮದ್ ಶಮಿ</p></div>

ಮೊಹಮ್ಮದ್ ಶಮಿ

   

ನವದೆಹಲಿ: ಸಂಪೂರ್ಣ ಫಿಟ್ ಆಗದ ಕಾರಣ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್ ತಂಡದಲ್ಲಿ ತಮಗೆ ಅವಕಾಶ ಸಿಗದಿರುವ ಬಗ್ಗೆ ವೇಗದ ಬೌಲರ್ ಮೊಹಮ್ಮದ್ ಶಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಅಭಿಮಾನಿಗಳು ಮತ್ತು ಬಿಸಿಸಿಐ ಬಳಿ ಕ್ಷಮೆ ಯಾಚಿಸಿದ್ದಾರೆ.

ADVERTISEMENT

ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಮಿ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ(ಎನ್‌ಸಿಎ) ಪುನಶ್ಚೇತನಾ ತರಬೇತಿಯನ್ನು ಪೂರ್ಣಗೊಳಿಸಿದ್ದರು. ನಾನೀಗ ನೋವಿನಿಂದ ಮುಕ್ತವಾಗಿದ್ದೇನೆ ಎಂದು ಶಮಿ ಘೋಷಿಸಿದ್ದರು. ಆದರೆ, ಮೊಣಕಾಲಿನಲ್ಲಿ ಕಾಣಿಸಿಕೊಂಡ ಊತ ಅವರ ಆಸ್ಟ್ರೇಲಿಯಾ ಪ್ರವಾಸಕ್ಕೆ ಅಡ್ಡಗಾಲು ಹಾಕಿದೆ.

ಅಭ್ಯಾಸದ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಶಮಿ, ಶೀಘ್ರ ತಂಡಕ್ಕೆ ಮರಳುವುದಾಗಿ ಹೇಳಿದ್ದಾರೆ.

ನಾನು ನನ್ನ ಪ್ರಯತ್ನ ಮಾಡುತ್ತಿದ್ದೇನೆ. ಬೌಲಿಂಗ್ ಫಿಟ್ನೆಸ್‌ನಲ್ಲಿ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿದ್ದೇನೆ. ಪಂದ್ಯಕ್ಕೆ ತಯಾರಾಗಲು ಮತ್ತು ದೇಶೀಯ ರೆಡ್ ಬಾಲ್ ಕ್ರಿಕೆಟ್ ಆಡಲು ಕಠಿಣ ಪರಿಶ್ರಮವನ್ನು ಮುಂದುವರಿಸುತ್ತೇನೆ. ಎಲ್ಲ ಕ್ರಿಕೆಟ್ ಅಭಿಮಾನಿಗಳು ಮತ್ತು ಬಿಸಿಸಿಐ ಬಳಿ ಕ್ಷಮೆ ಕೇಳುತ್ತೇನೆ. ಆದರೆ, ಶೀಘ್ರದಲ್ಲೇ ನಾನು ರೆಡ್ ಬಾಲ್ ಕ್ರಿಕೆಟ್ ಆಡಲು ಸಿದ್ಧನಾಗುತ್ತೇನೆ ಎಂದು ಶಮಿ ಬರೆದುಕೊಂಡಿದ್ದಾರೆ.

ಗಾಯದ ಸಮಸ್ಯೆ ಮತ್ತೆ ಉಲ್ಬಣಿಸಿದ್ದರಿಂದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಶಮಿಯನ್ನು ಆಯ್ಕೆ ಮಾಡಿಲ್ಲ. ನವೆಂಬರ್ ಮೊದಲ ವಾರದಲ್ಲಿ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿಯಲ್ಲಿ ಪಶ್ಚಿಮ ಬಂಗಾಳ ಪರ ಶಮಿ ಆಡುವ ನಿರೀಕ್ಷೆ ಇದೆ.

ಶಮಿ ಅನುಪಸ್ಥಿತಿಯಲ್ಲಿ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಮತ್ತು ಯುವ ಬೌಲರ್‌ಗಳಾದ ಪ್ರಸಿದ್ಧ ಕೃಷ್ಣ ಮತ್ತು ಹರ್ಷಿತ್ ರಾಣಾ ವೇಗದ ಬೌಲಿಂಗ್ ಪಡೆ ಮುನ್ನಡೆಸಲಿದ್ದಾರೆ.

ಮುಕೇಶ್ ಕುಮಾರ್, ನವದೀಪ್ ಸೈನಿ ಮತ್ತು ಖಲೀಲ್ ಅಹ್ಮದ್ ಮೀಸಲು ಬೌಲರ್‌ಗಳಾಗಿರಲಿದ್ದಾರೆ.

2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಫೈನಲ್ ಆಡಿದ್ದೇ ಕೊನೆ. ಆ ಬಳಿಕ ಗಾಯಾಳು ಪಟ್ಟಿ ಸೇರಿರುವ ಶಮಿ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.