ಫ್ಲಾರಿಡಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವಿಗಾಗಿ ಶ್ರೀಲಂಕಾದ ಹುಡುಕಾಟ ಮುಂದುವರಿದಿದೆ. ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವ ಶ್ರೀಲಂಕಾದ ಗೆಲುವಿನ ಆಸೆ ಮೂರನೇ ಪಂದ್ಯದಲೂ ಈಡೇರಲಿಲ್ಲ.
'ಡಿ' ಗುಂಪಿನಲ್ಲಿ ನೇಪಾಳ ವಿರುದ್ಧ ನಡೆಯಬೇಕಿದ್ದ ಮೂರನೇ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಅಲ್ಲದೆ ಒಂದು ಅಂಕವನ್ನು ಹಂಚಿಕೊಂಡಿದೆ. ಇದರಿಂದಾಗಿ ಈವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ ಒಂದು ಅಂಕ ಮಾತ್ರ ಕಲೆ ಹಾಕಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಅಲ್ಲದೆ ಸೂಪರ್ 8ರ ಹಂತವನ್ನು ಪ್ರವೇಶಿಸುವ ಸಾಧ್ಯತೆ ಬಹುತೇಕ ಕಮರಿದೆ. ಇದರಿಂದಾಗಿ ಗುಂಪು ಹಂತದಿಂದಲೇ ನಿರ್ಗಮನದ ಹಾದಿ ಹಿಡಿಯುವ ಸಾಧ್ಯತೆಯಿದೆ.
ಮತ್ತೊಂದೆಡೆ ಡಿ ಗುಂಪಿನಲ್ಲಿ ಎಲ್ಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ, ಆರು ಅಂಕಗಳೊಂದಿಗೆ ಸೂಪರ್ 8ರ ಹಂತಕ್ಕೆ ಲಗ್ಗೆ ಇಟ್ಟಿದೆ.
ಎರಡನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ಎರಡು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಹಾಗೂ ಸೋಲಿನೊಂದಿಗೆ ಅಷ್ಟೇ ಅಂಕಗಳನ್ನು ಕಲೆ ಹಾಕಿದ್ದು, ಸೂಪರ್ 8ರ ಹಂತದ ಸನಿಹದಲ್ಲಿದೆ.
ಮೂರನೇ ಸ್ಥಾನದಲ್ಲಿರುವ ನೇಪಾಳ ಎರಡು ಪಂದ್ಯಗಳಲ್ಲಿ ಒಂದು ಅಂಕ ಮಾತ್ರ ಗಳಿಸಿದೆ.
ಭಾನುವಾರ ನಡೆಯಲಿರುವ ತನ್ನ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ ಸವಾಲನ್ನು ಲಂಕಾ ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.