ಬೆಂಗಳೂರು: 'ಏ..ನನ್ನ ಕಾಲಿಗೆ ಬೀಳಬೇಡಪ್ಪಾ. ನಿನ್ನ ತಂದೆ, ತಾಯಿಯ ಕಾಲಿಗೆ ನಮಸ್ಕಾರ ಮಾಡು, ಸಾಕು..’
ಕ್ರಿಕೆಟ್ ದಂತಕತೆ ಗುಂಡಪ್ಪ ಆರ್ ವಿಶ್ವನಾಥ್ ಅವರು ಶನಿವಾರ ಸಂಜೆ ಜೂನಿಯರ್ ಕ್ರಿಕೆಟಿಗರಿಗೆ ಹಸ್ತಾಕ್ಷರ ನೀಡುತ್ತ ಪ್ರೀತಿಯಿಂದ ಹೇಳುತ್ತಿದ್ದ ಮಾತುಗಳಿವು.
ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಭವನದಲ್ಲಿ ಟೈಗರ್ ಕಪ್ ಕ್ರಿಕೆಟ್ ಟೂರ್ನಿಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಮತ್ತು ಅರಣ್ಯ ಸಿಬ್ಬಂದಿಯನ್ನು ಅವರು ಸನ್ಮಾನಿಸಿದರು. ಕಾರ್ಯಕ್ರಮದ ನಂತರ ಟೈಗರ್ ಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಆಟಗಾರರೆಲ್ಲರೂ ಸರದಿ ಸಾಲಿನಲ್ಲಿ ಬಂದು ವಿಶ್ವನಾಥ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ವೇದಿಕೆಯ ಒಂದು ಬದಿಯಲ್ಲಿ ಇದ್ದ ಕುರ್ಚಿಯಲ್ಲಿ ಕುಳಿತ ಅವರು ಎಲ್ಲ ಮಕ್ಕಳಿಗೂ ಹಸ್ತಾಕ್ಷರ ನೀಡಿದರು. ಮಕ್ಕಳು ತಂದ ಬ್ಯಾಟ್, ಚೆಂಡು, ಟೀಶರ್ಟ್, ಹಾಳೆ, ಪ್ರಮಾಣಪತ್ರ ಮತ್ತು ಪದಕಗಳ ಮೇಲೆ ಮಾರ್ಕರ್ ಮೂಲಕ ಹಸ್ತಾಕ್ಷರ ಹಾಕಿಕೊಟ್ಟರು.
ಸಮಾರಂಭದಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವಾಚರ್ ವೆಂಕಟೇಶ್, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗಾರ್ಡ್ ರಾಘವೇಂದ್ರ ಗೌಡ, ಕೊಯಿಮತ್ತೂರು ವನ್ಯಜೀವಿ ಸಂರಕ್ಷಣಾ ವಿಭಾಗದ ಗಾರ್ಡ್ ಎ. ಅರುಣ್ ಕುಮಾರ್ ಮತ್ತು ಪೆರಿಯಾರ್ ಹುಲಿ ಸಂರಕ್ಷಿತ ಅರಣ್ಯದ ವಾಚರ್ ಸಾಬು ಜಾರ್ಜ್ ಅವರು ವನ್ಯಜೀವಿ ಸಂರಕ್ಷಣಾ ವಿಷಯದಲ್ಲಿ ತೋರಿರುವ ಅಪ್ರತಿಮ ಬದ್ಧತೆಗೆ ತಲಾ ₹ 1 ಲಕ್ಷ ಬಹುಮಾನ ನೀಡಿ ಗೌರವಿಸಲಾಯಿತು. ವಿಶೇಷವಾಗಿ ದಕ್ಷಿಣ ಭಾರತದ ಕಾಡುಗಳಲ್ಲಿ ಆನೆಗಳ ಸಂರಕ್ಷಣೆ ವಿಚಾರದಲ್ಲಿ ಮಹತ್ತರ ಕೆಲಸ ಮಾಡಿರುವ ಕರ್ನಾಟಕದ ಸುಧೀರ್ ಶೆಟ್ಟಿ ಮತ್ತ ಕೇರಳದ ಎಂ ಎನ್ ಜಯಚಂದ್ರನ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್, ‘ಕಾಡು ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ಶ್ರಮ ಮಹತ್ವದ್ದಾಗಿದೆ’ ಎಂದರು.
ಟೈಗರ್ ಕಪ್ ಟೂರ್ನಿಯಲ್ಲಿ 12 ವರ್ಷ, 14 ಮತ್ತು 16 ವರ್ಷದೊಳಗಿವನರ ವಿಭಾಗಗಳ ವಿಜೇತರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್.ರಂಗರಾವ್ ಆಂಡ್ ಸನ್ಸ್ ನಿರ್ದೇಶಕ ಕಿರಣ್ ರಂಗಾ, ಕ್ರಿಕೆಟ್ ಕೋಚ್ ಜೋಸೆಫ್ ಹೂವರ್ ಅವರು ಹಾಜರಿದ್ದರು. ವೀಕ್ಷಕ ವಿವರಣೆಕಾರ ಚಂದ್ರಮೌಳಿ ಕಣವಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.