ಮುಂಬೈ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ 'ರನ್ ಮೆಷಿನ್' ಖ್ಯಾತಿಯ ವಿರಾಟ್ ಕೊಹ್ಲಿ ತೀವ್ರ ಒತ್ತಡದಲ್ಲಿದ್ದಾರೆ. ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಸಹ ಆಟಗಾರರು ನೆರವಾಗಬೇಕಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ನಲ್ಲಿ ಚೊಚ್ಚಲ ಕಿರೀಟದ ಹುಡುಕಾಟದಲ್ಲಿರುವ ಆರ್ಸಿಬಿಯ ಕಳಪೆ ಪ್ರದರ್ಶನ ಈ ಬಾರಿಯೂ ಮುಂದುವರಿದಿದೆ. ಈವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತು ಒಂದರಲ್ಲಿ ಮಾತ್ರ ಗೆಲುವು ಕಂಡಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
ಆರ್ಸಿಬಿ ಪರ ಏಕಾಂಗಿ ಹೋರಾಟ ನಡೆಸುತ್ತಿರುವ ಕೊಹ್ಲಿ ನಾಲ್ಕು ಪಂದ್ಯಗಳಲ್ಲಿ ಎರಡು ಅರ್ಧಶತಕ ಸೇರಿದಂತೆ 67.66ರ ಸರಾಸರಿಯಲ್ಲಿ 203 ರನ್ ಗಳಿಸಿದ್ದಾರೆ. ಆದರೆ ಆರ್ಸಿಬಿಯ ಇತರೆ ಆಟಗಾರರಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ.
ನಾಯಕ ಫಫ್ ಡುಪ್ಲೆಸಿ, ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಸತತ ವೈಫಲ್ಯವನ್ನು ಕಂಡಿದ್ದಾರೆ.
ಇದನ್ನೇ ಬೊಟ್ಟು ಮಾಡಿರುವ ಸ್ಮಿತ್, 'ವಿರಾಟ್ ಜೊತೆ ಇತರೆ ಪ್ರಮುಖ ಬ್ಯಾಟರ್ಗಳು ಜವಾಬ್ದಾರಿಯನ್ನು ವಹಿಸಬೇಕಿದೆ. ಸದ್ಯ ವಿರಾಟ್ ಕೊಹ್ಲಿ ತೀವ್ರ ಒತ್ತಡದಲ್ಲಿದ್ದಾರೆ. ಇತರೆ ಬ್ಯಾಟರ್ಗಳ ವೈಫಲ್ಯವು ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿದೆ. ಹಾಗಾಗಿ ಸಹ ಆಟಗಾರರು ವಿರಾಟ್ಗೆ ನೆರವಾಗಬೇಕಿದೆ' ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಸ್ಟ್ರೈಕ್ರೇಟ್ ಕಡಿಮೆಯಿದ್ದು, ನಿಧಾನವಾಗಿ ಆಡುತ್ತಾರೆ ಎಂಬ ವಾದವನ್ನು ಸ್ಮಿತ್ ಒಪ್ಪಲಿಲ್ಲ. 'ವಿರಾಟ್ ಕೊಹ್ಲಿ ಅದ್ಭುತ ಆಟಗಾರ. ವಿಶ್ವದರ್ಜೆಯ ಬ್ಯಾಟರ್. ಪರಿಸ್ಥಿತಿಗೆ ತಕ್ಕಂತೆ ಆಡುತ್ತಾರೆ. ವೇಗವಾಗಿ ರನ್ ಗಳಿಸುವ ಅಗತ್ಯವಿದ್ದರೆ ಅದನ್ನು ಮಾಡುತ್ತಾರೆ. ಪ್ರತಿ ಸಲವೂ 180ರ ಸ್ಟೈಕ್ರೇಟ್ನಲ್ಲಿ ರನ್ ಗಳಿಸುವ ಅಗತ್ಯವಿಲ್ಲ' ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.