ಬೆಂಗಳೂರು: ಎಫ್ಸಿ ಅಗ್ನಿಪುತ್ರ ತಂಡವು ಭಾನುವಾರ ಇಲ್ಲಿ ನಡೆದ ಸಿ.ಪುಟ್ಟಯ್ಯ ಸ್ಮಾರಕ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ ಬಿಎಫ್ಸಿ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಉಳಿಸಿಕೊಂಡಿತು.
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ನಿಗದಿ ಅವಧಿಯಲ್ಲಿ ಗೋಲುರಹಿತವಾಗಿ ‘ಡ್ರಾ’ ಗೊಂಡಿತು. ನಂತರ ಪೆನಾಲ್ಟಿ ಶೂಟೌಟ್ನಲ್ಲಿ ಹಾಲಿ ಚಾಂಪಿಯನ್ ಅಗ್ನಿಪುತ್ರ ತಂಡವು 5–3ರಿಂದ ಜಯ ಸಾಧಿಸಿತು.
ಶೂಟೌಟ್ನಲ್ಲಿ ಅಗ್ನಿಪುತ್ರ ಪರ ಅಹಮದ್ ಫೈಜ್ ಖಾನ್, ಮುಹಮ್ಮದ್ ಸಫೀಕ್ ಅಹಮದ್, ಕಾರ್ತಿಕ್ ಗೋವಿಂದಸ್ವಾಮಿ, ಸಂದೀಪ್ ಎಸ್, ವಿ. ಸುರೇಂದ್ರ ಪ್ರಸಾದ್ ಹಾಗೂ ಬಿಎಫ್ಸಿ ಪರ ಜೋಶುವಾ ಡಿಸಿಲ್ವ, ಓಯಿನಮ್ ರೋನೆಕ್ಸ್, ಶ್ರೇಯಸ್ ಕೇಟ್ಕರ್ ಚೆಂಡನ್ನು ಗುರಿ ಸೇರಿಸಿದರು.
ಟೂರ್ನಿಯ ಉತ್ತಮ ಆಟಗಾರನಾಗಿ ಬಿಎಫ್ಸಿಯ ಸೋಹಮ್ ಸೋಹಂ ವಾರ್ಷ್ಣೇಯ ಮತ್ತು ಗರಿಷ್ಠ ಸ್ಕೋರರ್ ಆಗಿ ಕಿಕ್ಸ್ಟಾರ್ಟ್ ತಂಡದ ಸೈಖೋಮ್ ಬೋರಿಶ್ ಸಿಂಗ್ ಹೊರಹೊಮ್ಮಿದರು.
ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಎಂ.ಕುಮಾರ್ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಬಿಡಿಎಫ್ಎ ಅಧ್ಯಕ್ಷ ಎಸ್.ಎಂ. ಬಾಲು ಕಾರ್ಯದರ್ಶಿ ಎಂ.ಶ್ರೀಧರನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.